ರೈಲ್ವೆ ಬಜೆಟ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಜು. 8 : ಕರ್ನಾಟಕದವರಾದ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡರು ಮಂಗಳವಾರ 2014-15ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದ್ದಾರೆ. ಕರ್ನಾಟಕ ರಾಜಕೀಯ ನಾಯಕರು ರೈಲ್ವೆ ಬಜೆಟ್ ಬಗ್ಗೆ ನೀಡಿದ ಪ್ರತಿಕ್ರಿಯೆಗಳು ಇಲ್ಲಿವೆ. ವಿವಿಧ ಪಕ್ಷದ ನಾಯಕರ ಬಜೆಟ್ ಅನ್ನು ಒಂದೊಂದು ರೀತಿ ವಿಶ್ಲೇಷಿಸಿದ್ದಾರೆ.
ಕರ್ನಾಟಕಕ್ಕೆ ಹೊಸ ಯೋಜನೆಗಳನ್ನು ಕೊಟ್ಟಿಲ್ಲ, ಇದು ನಿರಾಶಾದಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದರೆ, ರೈಲ್ವೆ ಖಾತೆ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ಬಜೆಟ್ ಅಹಮದಾಬಾದ್ ಗೆ ಮಾತ್ರ ಸೀಮಿತವಾಗಿದ್ದು ಎಂದು ಕುಟುಕಿದ್ದಾರೆ. [ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]
ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಹೊಸ ಯೋಜನೆಗಳನ್ನು ಘೋಷಿಸದೆ ಹಳೆಯ ಯೋಜನೆಗಳನ್ನು ಮುಕ್ತಾಯಗೊಳಿಸಲು ಬಜೆಟ್ ನಲ್ಲಿ ಗಮನ ಹರಿಸಲಾಗಿದೆ. ಇದು ಉತ್ತಮ ಬೆಳವಣಿಗೆ ಎಂದು ಬಜೆಟ್ ಅನ್ನು ಶ್ಲಾಘಿಸಿದ್ದಾರೆ. ವಿವಿಧ ನಾಯಕರ ಪ್ರತಿಕ್ರಿಯೆಗಳು ಇಲ್ಲಿವೆ. [ರೈಲ್ವೆ ಬಜೆಟ್ 2014: ಉಳಿದವರು ಕಂಡಂತೆ]
ನಿರಾಶಾದಾಯಕ ಬಜೆಟ್
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ಹೊಸ ಯೋಜನೆ ಕೊಟ್ಟಿಲ್ಲ, ಸದಾನಂದ ಗೌಡರು ಮಂಡಿಸಿದ್ದು ನಿರಾಶಾದಾಯಕ ಬಜೆಟ್ ಎಂದು ಹೇಳಿದ್ದಾರೆ. ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುವತ್ತ ಸಚಿವರು ಹೆಜ್ಜೆ ಹಾಕುತ್ತಿದ್ದಾರೆ. ಇತ್ತೀಚೆಗೆ ರೈಲ್ವೆ ದರ ಏರಿಕೆ ಮಾಡಿದ್ದರಿಂದ ಜನರಿಗೆ ಹೊರೆಯಾಗಿದೆ ಅದನ್ನು ಕಡಿಮೆ ಮಾಡಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಇದು ಅಹಮದಾಬಾದ್ ಬಜೆಟ್
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮತ್ತು ರೈಲ್ವೆ ಖಾತೆ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಸದಾನಂದ ಗೌಡರ ರೈಲ್ವೆ ಬಜೆಟ್ ಅಹಮದಾಬಾದ್ ಗೆ ಸೀಮಿತವಾಗಿದ್ದು ಎಂದು ಲೇವಡಿ ಮಾಡಿದ್ದಾರೆ. ಹೊಸ ಯೋಜನೆಗಳನ್ನು ಘೋಷಿಸಿದ ಸಚಿವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ತವರು ಜಿಲ್ಲೆಗೆ ಹೆಚ್ಚು ಒತ್ತು ನೀಡಿ, ಕೆಲವು ರಾಜ್ಯಗಳನ್ನು ಮರೆತಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.
ಇದೊಂದು ಉತ್ತಮ ಪ್ರಯತ್ನ
ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಸದಾನಂದ ಗೌಡರು ಉತ್ತಮ ಪ್ರಯತ್ನ ಮಾಡಿದ್ದಾರೆ ಎಂದು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ಯೋಜನೆ ಘೋಷಿಸುವುದಕ್ಕಿಂತ ಹಳೆಯ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಿದ್ದಾರೆ. ಇಂತಹ ಪ್ರಯತ್ನ ಅಗತ್ಯವಿತ್ತು. ಸಂಪನ್ಮೂಲ ಕ್ರೋಢಿಕರಣಕ್ಕೆ ಆದ್ಯತೆ ನೀಡಲಾಗಿದೆ. ಇದು ಉತ್ತಮವಾದ ಆಲೋಚನೆ ಎಂದು ಹೇಳಿದ್ದಾರೆ.
ಸದಾನಂದ ಗೌಡರು ಏನು ಹೇಳ್ತಾರೆ?
ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸದಾಗಿ ಬುಲೆಟ್ ರೈಲು ಘೋಷಣೆ ಮಾಡಿದ್ದೇವೆ ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಬಜೆಟ್ ಮಂಡನೆ ಬಳಿಕ ರೈಲ್ವೆ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 9 ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸಲಾಗಿದ್ದು, ಧಾರ್ಮಿಕ ಸ್ಥಳಗಳ ಬಗ್ಗೆ ಗಮನಹರಿಸಿದ್ದೇವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದು ಹೇಳಿದರು.