ಕೇಂದ್ರ ಬಜೆಟ್ 2014 : ಇವರ ಹೊಗಳಿಕೆ, ಅವರ ತೆಗಳಿಕೆ
ಬೆಂಗಳೂರು, ಜು. 10 : ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ 2014-15ನೇ ಸಾಲಿನ ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್ ಇದು ಶ್ರೀಮಂತರ ಬಜೆಟ್, ಯುಪಿಎ ಸರ್ಕಾರದ ಕೆಲವು ಯೋಜನೆಗಳನ್ನು ನಕಲು ಮಾಡಲಾಗಿದೆ ಎಂದು ಟೀಕಿಸಿದ್ದರೆ, ಬಿಜೆಪಿ ಇದು ಜನಪರವಾದ ಬಜೆಟ್ ಎಂದು ವಿಶ್ಲೇಷಣೆ ಮಾಡಿದೆ.
ಜನರ ಮೇಲೆ ಯಾವುದೇ ತೆರಿಗೆ ಹೊರೆ ಹಾಕದೆ ಎಲ್ಲಾ ವರ್ಗದವರಿಗೂ ಸಮಾನ ಆದ್ಯತೆ ನೀಡಲಾಗಿದೆ. ಕೃಷಿ ವಲಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಇದು ಜನಸಾಮಾನ್ಯರ ಬಜೆಟ್ ಆಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ. ಬಜೆಟ್ ಬಗ್ಗೆ ಯಾರು ಏನು ಹೇಳಿದರು ಇಲ್ಲಿದೆ ನೋಡಿ [ಬಜೆಟ್ ಮುಖ್ಯಾಂಶಗಳು ಇಲ್ಲಿವೆ]
ಯಾವುದೇ ತೆರಿಗೆ ಹೊರೆ ಹಾಕಿಲ್ಲ
ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಬಜೆಟ್ ನೀಡಿದ್ದಾರೆ, ಇದು ಜನಪರ ಬಜೆಟ್ ಎಂದು ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ. ದೇಶದ ಜನರ ಮೇಲೆ ಯಾವುದೇ ತೆರಿಗೆ ಹೇರಿಕೆ ಮಾಡಿಲ್ಲ. ಎಲ್ಲಾ ವರ್ಗದವರಿಗೂ ಆದ್ಯತೆ ನೀಡಿಲಾಗಿದ್ದು, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅನಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ಶ್ರೀಮಂತರ ಬಜೆಟ್ ಇದು
ಅರುಣ್ ಜೇಟ್ಲಿ ಅವರು ಮಂಡಿಸಿರುವುದು ಕೆಲವು ಶ್ರೀಮಂತರ ಬಜೆಟ್ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಕ್ರಮಗಳನ್ನು ಘೋಷಿಸಿಲ್ಲ. ಕೆಲವು ಶ್ರೀಮಂತರಿಗೆ ಮತ್ತು ಉದ್ಯಮಗಳಿಗೆ ಸಹಾಯಕವಾಗುವ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಖರ್ಗೆ ದೂರಿದ್ದಾರೆ.
ಕೇಂದ್ರ ಸರ್ಕಾರದ್ದು ಘೋಷಣೆಗಳ ಬಜೆಟ್
ಕೇಂದ್ರ ಸರ್ಕಾರ ಯಾವುದೇ ಯೋಜನೆಗಳಿಲ್ಲದೆ ಕೇವಲ ಘೋಷಣೆಗಳ ಬಜೆಟ್ ಕೊಟ್ಟು ಜನರನ್ನು ವಂಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಕೊಡುಗೆ ಕೊಟ್ಟಿಲ್ಲ. ಅವರಿಗೆ ಬೇಕಾದ ನಗರಗಳಿಗೆ ಹಲವು ಯೋಜನೆಗಳನ್ನು ಘೋಷಣೆಮಾಡಲಾಗಿದೆ. ದೇಶಕ್ಕೆ 24 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ. ಆದರೆ, ಅದಕ್ಕಾಗಿ ಯಾವ ಯೋಜನೆ ಮಾಡುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಜನರ ಕಣ್ಣಿಗೆ ಮಣ್ಣೆರೆಚುವ ಬಜೆಟ್ ಎಂದು ಅವರು ಟೀಕಿಸಿದ್ದಾರೆ.
ನಮಗೆ ಜನಪ್ರಿಯ ಬಜೆಟ್ ಬೇಡ
ಆ ವಲಯಕ್ಕೆ 100 ಕೋಟಿ, ಈ ವಲಯಕ್ಕೆ 50 ಕೋಟಿ ಎಂದು ಬಜೆಟ್ ನಲ್ಲಿ ಹೇಳುವುದು ಜನಪ್ರಿಯತೆಗಾಗಿ ಇದರಿಂದ ಸಾಮಾನ್ಯ ಜನರಿಗೆ ಸಹಾಯಕವಾಗುವುದಿಲ್ಲ. ನಮಗೆ ಜನಪ್ರಿಯ ಬಜೆಟ್ ಬೇಡ, ಜನರ ಹಿತ ಕಾಯುವ ಬಜೆಟ್ ಬೇಕು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಇದು ಅಪಕ್ವವಾದ ಬಜೆಟ್
ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಚುನಾವಣೆಯ ಸಮಯದಲ್ಲಿ ಜನರಲ್ಲಿ ಬದಲಾವಣೆಯ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿ ಬಜೆಟ್ ಮೂಲಕ ಅವರ ನಿರೀಕ್ಷೆ ಹುಸಿಗಗೊಳಿಸಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಉದ್ಯೋಗ ಸೃಷ್ಟಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದೊಂದು ಅಪಕ್ಷವಾದ ಬಜೆಟ್ ಆಗಿದೆ ಎಂದು ಅವರು ದೂರಿದ್ದಾರೆ.
ಉತ್ತಮ ಬಜೆಟ್ ಮಂಡಿಸಿದ್ದಾರೆ
ಸಚಿವ ಅರುಣ್ ಜೇಟ್ಲಿ ಅವರು ಉತ್ತಮ ಬಜೆಟ್ ಮಂಡಿಸಿದ್ದಾರೆ. ಇದು ಜನಸಾಮಾನ್ಯರ ಬಜೆಟ್. ಎಲ್ಲಾ ವರ್ಗದ ಜನರಿಗೂ ಬಜೆಟ್ ನಲ್ಲಿ ಆದ್ಯತೆ ನೀಡಿದ್ದಾರೆ ಎಂದು ದಾವಣಗೆರೆ ಸಂಸದ ಮತ್ತು ವಿಮಾನಯಾನ ಖಾತೆ ರಾಜ್ಯ ಸಚಿವ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ. [ಬಜೆಟ್ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು?]
ಹೂಡಿಕೆ ದಾರ ಸ್ನೇಹಿ ಬಜೆಟ್
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ಕೊರತೆ ಇದೆ. ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ ಇದಕ್ಕೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಪ್ರಧಾನಿಯಾಗಿದ್ದ ವಾಜಪೇಯಿ ಅವರ ಕನಸಿನ ಯೋಜನೆಗಳಾದ ನದಿ ಜೋಡಣೆ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಹೆಚ್ಚಿನ ನೆರವು ನೀಡಲಾಗಿದ್ದು, ಹೂಡಿಕೆ ದಾರರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಪ್ರಯತ್ನವನ್ನು ಬಜೆಟ್ಟಿನಲ್ಲಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅತ್ಯುತ್ತಮ ಬಜೆಟ್ ಕೊಟ್ಟಿದ್ದಾರೆ
ಕೇಂದ್ರ
ಬಜೆಟ್
ಕುರಿತು
ಪ್ರತಿಕ್ರಿಯೆ
ನೀಡಿರುವ
ಮಾಜಿ
ಸಚಿವ
ಸಿಟಿ
ರವಿ
ಅವರು,
ಕುಸಿದು
ಹೋಗಿದ್ದ
ಆರ್ಥಿಕ
ಸ್ಥಿತಿಯನ್ನು
ಪುನಶ್ಚೇತನಗೊಳಿಸಲು
ಜೇಟ್ಲಿ
ಅವರು
ಹಲವಾರು
ಕ್ರಮಗಳನ್ನು
ಕೈಗೊಂಡಿದ್ದಾರೆ.
ಬಡವರು,
ಉದ್ಯಮಿಗಳು
ಸೇರಿದಂತೆ
ಎಲ್ಲಾ
ವರ್ಗಕ್ಕೂ
ಆದ್ಯತೆ
ನೀಡಲಾಗಿದೆ.
ಇದು
ಅತ್ಯುತ್ತಮ
ಬಜೆಟ್
ಎಂದು
ಸಿಟಿ
ರವಿ
ಹೇಳಿದ್ದಾರೆ.
ಜನರ ನಿರೀಕ್ಷೆಗೆ ತಕ್ಕ ಬಜೆಟ್
ನಮ್ಮ ಸರ್ಕಾರದ ಮೇಲೆ ಜನರು ಇಟ್ಟ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡಿಸಲಾಗಿದೆ ಎಂದು ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಹೇಳಿದ್ದಾರೆ. ಬಡವರ, ರೈತರ, ಹೂಡಿಕೆ ದಾರರ ಪರವಾಗಿ ಬಜೆಟ್ ಮಂಡಿಸಲಾಗಿದೆ. ಇದು ಜನರ ನಿರೀಕ್ಷೆಗೆ ತಕ್ಕಂತೆ ಇದೆ.
ಬಜೆಟ್ ನಲ್ಲಿ ಅದ್ಭುತಗಳು ನಡೆಯಲಿಲ್ಲ
ನರೇಂದ್ರ ಮೋದಿ ಸರ್ಕಾರದ ಮೊದಲ ಬಜೆಟ್ ಅದ್ಭುತಗಳನ್ನು ಮಾಡುತ್ತದೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ, ಜನರ ನಿರೀಕ್ಷೆ ಹುಸಿಯಾಗಿದೆ. ಜನರು ಪಕ್ಷಕ್ಕೆ ಸಂಪೂರ್ಣ ಬೆಂಬಲ ಕೊಟ್ಟರು. ಸರ್ಕಾರ ಮಾತ್ರ ಜನರಿಗೆ ಏನು ನೀಡಲಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.