ಎ.ಕೃಷ್ಣಪ್ಪ ಸಾವಿಗೆ ಕಂಬನಿ ಮಿಡಿದ ಗಣ್ಯರು
ಬೆಂಗಳೂರು, ಏ. 24 : ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ತುಮಕೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಎ.ಕೃಷ್ಣಪ್ಪ ಅವರ ನಿಧನಕ್ಕೆ ಎಲ್ಲಾ ಪಕ್ಷಗಳ ನಾಯಕರು ಕಂಬನಿ ಮಿಡಿದಿದ್ದಾರೆ. ಬುಧವಾರ ಸಂಜೆಯೇ ಕೃಷ್ಣಪ್ಪ ನಿವಾಸಕ್ಕೆ ತೆರಳಿದ ವಿವಿಧ ನಾಯಕರು ಮೃತರ ಅಂತಿಮ ದರ್ಶನ ಪಡೆದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು, ಅಭಿಮಾನಿಗಳು ಕೃಷ್ಣಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಿದರು. [ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ವಿಧಿವಶ]
ಗುರುವಾರ ಕೆ.ಆರ್.ಪುರಂ ನಲ್ಲಿರುವ ಸೌತ್ ಈಸ್ಟ್ ಏಷ್ಯನ್ ಕಾಲೇಜಿನ ಅವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಕಾಲೇಜಿನ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕೃಷ್ಣಪ್ಪ ಸಾವಿಗೆ ಕಂಬನಿ ಮಿಡಿದ ನಾಯಕರು
ಸಮರ್ಥ ನಾಯಕನನ್ನು ಕಳೆದುಕೊಂಡಿದೆ
ಎ.ಕೃಷ್ಣಪ್ಪ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷ್ಣಪ್ಪ ಅವರು ಪಕ್ಷಾತೀತವಾಗಿ ಗೆಳೆಯರನ್ನು ಸಂಪಾದಿಸಿದವರು ಎಂದು ಹೇಳಿರುವ ಸಿದ್ದರಾಮಯ್ಯ, ಅವರ ನಿಧನದಿಂದ ಹಿಂದುಳಿದ ವರ್ಗ ಸಮರ್ಥ ನಾಯಕನೊಬ್ಬನನ್ನು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದಿದ್ದಾರೆ.
ಜೆಡಿಎಸ್ ಗೆ ಪರೀಕ್ಷೆ ಎದುರಾಗುತ್ತಿದೆ
ಜೆಡಿಎಸ್ ಪಕ್ಷಕ್ಕೆ ಪರೀಕ್ಷೆ ಮೇಲೆ ಪರೀಕ್ಷೆಗಳು ಎದುರಾಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ. ಕೃಷ್ಣಪ್ಪ ಅವರ ನಿಧನದಿಂದಾಗಿ ಪಕ್ಷ ಸಂಘಟನೆಗೆ ತುಂಬಾ ಪೆಟ್ಟು ಬೀಳಲಿದೆ ಎಂದು ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದ್ದರು
ಎ.ಕೃಷ್ಣಪ್ಪ ಅವರ ಸಾವಿಗೆ ಕಂಬನಿ ಮಿಡಿದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೃಷ್ಣಪ್ಪ ಅವರ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆದ ನಂತರ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದ್ದರು. ಅವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.
ತುಂಬಲಾರದ ನಷ್ಟ
ಜೆಡಿಎಸ್ ರಾಜ್ಯಾಧ್ಯಕ್ಷ ಕೃಷ್ಣಪ್ಪ ಅವರ ಸಾವು ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಬೇಸರದ ಸಂಗತಿ
ಹಿಂದುಳಿದ ವರ್ಗಗಳಿಗೆ ಸಮರ್ಥ ನಾಯಕತ್ವ ನೀಡಿದ್ದ ಹಾಗೂ ಸಚಿವರಾಗಿ ಉತ್ತಮ ಕಾರ್ಯಗಳನ್ನು ಮಾಡಿದ್ದ ಎ.ಕೃಷ್ಣಪ್ಪ ಅವರು ನಮ್ಮನ್ನು ಅಗಲಿರುವುದು ಬೇಸರದ ಸಂಗತಿ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಒಳ್ಳೆಯ ಸ್ನೇಹಿತರು
30 ವರ್ಷಗಳಿಂದ ನಾನು ಮತ್ತು ಕೃಷ್ಣಪ್ಪ ಉತ್ತಮ ಸ್ನೇಹಿತರು. ಹಿಂದೆ ನಾವು ಒಂದೇ ಪಕ್ಷದಲ್ಲಿದ್ದಾಗ ತುಂಬಾ ಆತ್ಮೀಯರಾಗಿದ್ದೆವು. ತುಮಕೂರಿನಲ್ಲಿ ಅವರ ನನ್ನ ಎದುರಾಳಿಯಾದರೂ, ಎದುರಿಗೆ ಸಿಕ್ಕಾಗ ತುಂಬಾ ಆತ್ಮೀಯರಾಗಿ ಮಾತನಾಡುತ್ತಿದ್ದರು ಎಂದು ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಪ್ರತಿಕ್ರಿಯೆ ನೀಡಿದ್ದಾರೆ.