ಮಹಾನಗರ ಪಾಲಿಕೆಗಳಿಗೆ 100 ಕೋಟಿ ಅನುದಾನ
ಬೆಂಗಳೂರು, ಏ. 29 : ಬೆಂಗಳೂರು ಹೊರತು ಪಡಿಸಿ ರಾಜ್ಯದ 10 ಮಹಾನಗರ ಪಾಲಿಕೆಗಳ ಅಭಿವೃದ್ಧಿಗಾಗಿ ಸರ್ಕಾರ ಮೂರು ವರ್ಷಗಳಲ್ಲಿ 100 ಕೋಟಿಗಳಂತೆ ಸಾವಿರ ಕೋಟಿ ರೂ. ಅನುದಾನ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆಲಿಕಲ್ಲು ಸಹಿತ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಪರಿಹಾರ, ಸಕಾಲ ಸೇವೆ ಸರಳ ಮುಂತಾದ ಮಹತ್ವದ ತೀರ್ಮಾನಗಳಿಗೆ ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸೋಮವಾರ ಸಚಿವ ಸಂಪುಟ ಸಭೆ ನಡೆಯಿತು, ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಬೆಂಗಳೂರು ಹೊರತು ಪಡಿಸಿ ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಮೂರು ವರ್ಷದಲ್ಲಿ ತಲಾ 100 ಕೋಟಿ ರೂ. ಗಳಂತೆ ಸಾವಿರ ಕೋಟಿ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.
ಸರ್ಕಾರ ಹೊಸದಾಗಿ ರಚನೆ ಮಾಡಿರುವ ತುಮಕೂರು, ಶಿವಮೊಗ್ಗ, ವಿಜಾಪುರ ಮಹಾನಗರ ಪಾಲಿಕೆಗಳಿಗೂ ಈ ಅನುದಾನ ನೀಡಲಾಗುತ್ತದೆ. 2014-15ರಲ್ಲಿ 20 ಕೋಟಿ ರೂ., 2015-16 ಹಾಗೂ 2016-17ರಲ್ಲಿ ತಲಾ 40 ಕೋಟಿ ರೂ. ಸೇರಿ ಮೂರು ವರ್ಷದಲ್ಲಿ 100 ಕೋಟಿ ರೂ. ಅನುದಾನ ನೀಡಲಾಗುವುದು. ಆದರೆ, ಈ ಅನುದಾನವನ್ನು ಬಿಬಿಎಂಪಿಗೆ ನೀಡಲಾಗುವುದುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
1000 ಕೋಟಿ ಅನುದಾನ
ಬೆಂಗಳೂರು ಹೊರತು ಪಡಿಸಿ ರಾಜ್ಯದ 10 ಮಹಾನಗರ ಪಾಲಿಕೆಗಳ ಅಭಿವೃದ್ಧಿಗಾಗಿ ಸರ್ಕಾರ ಮೂರು ವರ್ಷಗಳಲ್ಲಿ 100 ಕೋಟಿಗಳಂತೆ ಸಾವಿರ ಕೋಟಿ ರೂ. ಅನುದಾನ ನೀಡಲು ತೀರ್ಮಾನ ಕೈಗೊಂಡಿದೆ. ಸರ್ಕಾರ ಹೊಸದಾಗಿ ರಚನೆ ಮಾಡಿರುವ ತುಮಕೂರು, ಶಿವಮೊಗ್ಗ, ವಿಜಾಪುರ ಮಹಾನಗರ ಪಾಳಿಕೆಗಳಿಗೂ ಈ ಅನುದಾನ ನೀಡಲಾಗುತ್ತದೆ.
ಸಕಾಲ ಸೇವೆ ಇನ್ನು ಸರಳ
ಸಕಾಲ ಸೇವೆಯಡಿ ಪಡೆಯುತ್ತಿದ್ದ ನಾನಾ ಪ್ರಮಾಣ ಪತ್ರಗಳಿಗೆ ಸ್ಟಾಂಪ್ ಪೇಪರ್ನಲ್ಲಿ ಅಫಿಡವಿಟ್ ಸಲ್ಲಿಸಲು ಸರ್ಕಾರ ವಿನಾಯಿತಿ ನೀಡಿದೆ. ನಾಗರಿಕರು ಪ್ರಮಾಣ ಪತ್ರ ಪಡೆಯಲು ಸ್ವಯಂ ಘೋಷಣೆ ಪತ್ರ ನೀಡಿದರೆ ಸಾಕು. ಇನ್ನು ಎರಡು ತಿಂಗಳಲ್ಲಿ 24 ನಾನಾ ಇಲಾಖೆಯ ಅಧಿಕಾರಿಗಳು ಸ್ವಯಂ ಘೋಷಣೆ ಮಾದರಿಯನ್ನು ಸಿದ್ಧಪಡಿಸಲಿದ್ದಾರೆ. ಎರಡು ತಿಂಗಳ ಬಳಿಕ ಸ್ಟಾಂಪ್ ಪೇಪರ್ನಲ್ಲಿ ಅಫಿಡವಿಟ್ ಸಲ್ಲಿಸಬೇಕಿಲ್ಲ. ಆದರೆ, ತಪ್ಪು ಮಾಹಿತಿ ನೀಡಿ ಪ್ರಮಾಣ ಪತ್ರ ಪಡೆದರೆ ಆರು ತಿಂಗಳು ಜೈಲು ಹಾಗೂ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಆಲಿಕಲ್ಲು ಮಳೆಗೆ ಪರಿಹಾರ
ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಸುರಿದ ಆಲಿಕಲ್ಲು ಸಹಿತ ಮಳೆಯಿಂದಾಗಿ 1.73 ಲಕ್ಷ ಹೆಕ್ಟೇರ್ ತೋಟಗಾರಿಕೆ ಹಾಗೂ ಕೃಷಿ ಬೆಳೆ ನಾಶವಾಗಿತ್ತು. ಮಳೆಯಿಂದ ಆಗಿರುವ ಬೆಳೆ ಹಾನಿಗೆ ಕೇಂದ್ರ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಿಂತ ಹೆಚ್ಚು ಪರಿಹಾರ ನೀಡಲು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಒಬ್ಬ ರೈತನಿಗೆ ಒಂದು ಹೆಕ್ಟೇರ್ ಗೆ ಸೀಮಿತವಾಗಿ ಬೆಳೆ ಪರಿಹಾರ ನಿಗದಿ ಪಡಿಸಲಾಗಿದೆ. ಮಳೆಯಾಶ್ರಿತ ಭೂಮಿಯಾಗಿದ್ದರೆ 15 ಸಾವಿರ ರೂ., ನೀರಾವರಿ ಪ್ರದೇಶವಾಗಿದ್ದರೆ 25 ಸಾವಿರ ರೂ., ಬಹುಆಶ್ರಿತ ಭೂಮಿ ಯಾಗಿದ್ದರೆ 40 ಸಾವಿರ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ.
ಕಸ್ತೂರಿ ರಂಗನ್ ವರದಿಗೆ ಅಸ್ತು
ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಡಾ.ಕಸ್ತೂರಿರಂಗನ್ ವರದಿಯನ್ನು ಭಾಗಶಃ ಒಪ್ಪಿರುವ ರಾಜ್ಯ ಸರ್ಕಾರ, 36 ಶಿಫಾರಸುಗಳ ಪೈಕಿ ಕೆಲವನ್ನು ಬಿಟ್ಟು ಉಳಿದ ಅಂಶಗಳಿಗೆ ಒಪ್ಪಿಗೆ ನೀಡಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಸಂಪುಟ ಉಪಸಮಿತಿ ವರದಿಯಲ್ಲಿ ಹೇಳಿರುವ 1580 ಜೈವಿಕ ಸೂಕ್ಷ್ಮ ಹಳ್ಳಿಗಳ ಪೈಕಿ 850 ಹಳ್ಳಿಗಳನ್ನು ಮಾತ್ರ ಪಟ್ಟಿಗೆ ಸೇರಿಸಲಾಗುತ್ತದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಕಲ್ಲು, ಮರುಳು ಗಣಿಗಾರಿಕೆಗೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ.
ಸ್ವಯಂ ನಿವೃತ್ತಿ ನೀಡಲು ತೀರ್ಮಾನ
ರಾಷ್ಟ್ರೀಯ ಆರೋಗ್ಯ ಮಿಷನ್ ನ 10 ಲಕ್ಷ ರೂ. ಅನುದಾನವನ್ನು ದುರುಪಯೋಗ ಪಡಿಸಿಕೊಂಡ ಆರೋಪಕ್ಕೆ ಗುರಿಯಾಗಿ, ಅಮಾನತ್ತಾಗಿರುವ ರಾಮನಗರ ಹಿರಿಯ ವೈದ್ಯಾಧಿಕಾರಿಯಾಗಿದ್ದ ಡಾ.ಎಚ್.ಎಸ್. ಶಿವಾನಂದ ಅವರಿಗೆ ಕಡ್ಡಾಯವಾಗಿ ಸ್ವಯಂ ನಿವೃತ್ತಿ ನೀಡಲು ಸರ್ಕಾರ ನಿರ್ಧರಿಸಿದೆ.
20 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದ ರಾಮನಗರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಕೆ. ತಿಮ್ಮಪ್ಪ ಅವರನ್ನು ಸೇವೆಯಿಂದ ವಜಾ ಮಾಡಲು ಒಪ್ಪಿಗೆ ಪಡೆಯಲಾಗಿದೆ.