ಬಿಜೆಪಿ ಆತ್ಮಾವಲೋಕನ ಸಭೆಯ ಮುಖ್ಯಾಂಶಗಳು
ಬೆಂಗಳೂರು, ಆ.27 : "ಪದೇ-ಪದೇ ಚುನಾವಣೆಗಳು ಎದುರಾಗಿರುವುದರಿಂದ ಜನರು ನಿರಾಶರಾಗಿದ್ದಾರೆ. ನಮ್ಮ ತಪ್ಪಿನಿಂದಾಗಿ ಬಳ್ಳಾರಿಯಲ್ಲಿ ಸೋಲಾಗಿದೆ" ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಬುಧವಾರ ಆತ್ಮಾವಲೋಕನ ಸಭೆ ನಡೆಯಿತು. ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸಿದ್ದೇಶ್ವರ್, ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸುರೇಶ್ ಅಂಗಡಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. [ಉಪ ಚುನಾವಣೆ ಫಲಿತಾಂಶ ಇಲ್ಲಿದೆ]
ಸಭೆಯ ನಂತರ ಮಾತನಾಡಿದ ಪ್ರಹ್ಲಾದ್ ಜೋಶಿ, ಉಪ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸೋಲಲು ನಮ್ಮ ತಪ್ಪು ಕಾರಣವಾಗಿದೆ. ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಶ್ರೀರಾಮುಲು ಅವರು ಪಣ ತೊಟ್ಟಿದ್ದರು. ಪದೇ-ಪದೇ ಚುನಾವಣೆಯಿಂದ ಜನ ನಿರಾಶೆಯಾಗಿದ್ದರಿಂದ ನಾವು ಸೋತಿದ್ದೇವೆ ಎಂದು ಹೇಳಿದರು. ಸಭೆಯ ಮುಖ್ಯಾಂಶಗಳು
ಉಪ ಚುನಾವಣೆ ಬಗ್ಗೆ ಚರ್ಚೆ
ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಇಂದು ಬಿಜೆಪಿ ಆತ್ಮಾವಲೋಕನ ಸಭೆಯ ನಡೆಯಿತು. ಸಭೆಯಲ್ಲಿ ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚೆ ನಡೆಸಲಾಯಿತು.
ಬಳ್ಳಾರಿ ಸೋಲಿನಲ್ಲಿ ಶ್ರೀರಾಮುಲು ಪಾತ್ರವಿಲ್ಲ
ಉಪ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸೋಲಲು ನಮ್ಮ ತಪ್ಪು ಕಾರಣವಾಗಿದೆ. ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಶ್ರೀರಾಮುಲು ಅವರು ಪಣ ತೊಟ್ಟಿದ್ದರು. ಪದೇ-ಪದೇ ಚುನಾವಣೆಯಿಂದ ಜನ ನಿರಾಶೆಯಾಗಿದ್ದರಿಂದ ನಾವು ಸೋತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷ ರಚನೆ
ರಾಜ್ಯದಲ್ಲಿ ಬಿಜೆಪಿಯ 17 ಸಂಸದರು, 4 ರಾಜ್ಯಸಭಾ ಸದಸ್ಯರು ಇರುವ ಬಿಜೆಪಿ ಸಂಸದೀಯ ಪಕ್ಷವನ್ನು ರಚನೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೇಂದ್ರದ ಅನುದಾನ, ಬಿಜೆಪಿ ಹೋರಾಟ, ಕ್ಷೇತ್ರದ ಅಭಿವೃದ್ಧಿ, ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧದ ಹೋರಾಟದ ಬಗ್ಗೆ ಈ ಪಕ್ಷದ ಚರ್ಚೆ ನಡೆಸಿ ಸಲಹೆ ನೀಡಲಿದೆ.
ಕಾಗೋಡು ಕಿಡಿ ಕಾರಿದ್ದು ಸತ್ಯ
ಸಭೆಯ ಬಳಿಕ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ರಾಜ್ಯ ಸರ್ಕಾರದ ಬಗ್ಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ನೀಡುತ್ತಿರುವ ಹೇಳಿಕೆ ಸರಿಯಾಗಿದೆ. ನಾನೂ 4 ಸಚಿವರಿಗೆ ಪತ್ರ ಬರೆದಿದ್ದು, ಸಚಿವರಿಂದ ಯಾವುದೇ ಉತ್ತರ ಬಂದಿಲ್ಲ. ರಾಜ್ಯಸ ಸರ್ಕಾರದ ಆಡಳಿತ ಯಂತ್ರ ಕುಸಿದಿರುವುದು ಸತ್ಯ ಎಂದು ಹೇಳಿದರು.
ಯಡಿಯೂರಪ್ಪ ಗರಂ
ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಸದರು ಸರಿಯಾಗಿ ಪ್ರಚಾರ ಮಾಡಲಿಲ್ಲ. ಸರಿಯಾಗಿ ಪ್ರಚಾರ ಮಾಡಿದ್ದರೆ, 2 ಕ್ಷೇತ್ರಗಳಲ್ಲಿ ಸೋಲುತ್ತಿರಲಿಲ್ಲ ಎಂದು ಸಭೆಯಲ್ಲಿ ತಿಳಿಸಿದ್ದಾರೆ. ಯಾವ ಸಂಸದರೂ ಪ್ರಚಾರಕ್ಕೆ ಬರಲಿಲ್ಲ. ಬಂದು ಪ್ರಚಾರ ಮಾಡಿದ್ದರೆ, ಶಿಕಾರಿಪುರದಲ್ಲಿ ಕಡಿಮೆ ಮತಗಳಲ್ಲಿ ಗೆಲ್ಲಬೇಕಾಗಿರಲಿಲ್ಲ ಎಂದು ಅವರು ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.