ವಿಧಾನಪರಿಷತ್ ಕಲಾಪಕ್ಕೆ ಬಂದ ಜಯಲಲಿತಾ!
ಬೆಂಗಳೂರು, ಜು. 24 : ಕರ್ನಾಟಕದಲ್ಲಿ ಶೀಘ್ರದಲ್ಲೇ ಹೊಸ ಕೈಗಾರಿಕಾ ನೀತಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ಮುಂದಿನ ವರ್ಷದಲ್ಲಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಜಿಮ್ ಆಯೋಜಿಸಲಾಗುವುದು ಎಂದು ಸಿಎಂ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಗುರುವಾರದ ವಿಧಾನಪರಿಷತ್ ಕಲಾಪದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಕೈಗಾರಿಕೆಯ ಪ್ರಗತಿ, ಉದ್ಯೋಗ ಸೃಷ್ಠಿ ಹಾಗೂ ಇತರೆ ವಿಷಯಗಳನ್ನು ಮುಂದಿಟ್ಟುಕೊಂಡು ನೂತನ ಕೈಗಾರಿಕಾ ನೀತಿ ತಯಾರಿಸಲಾಗಿದ್ದು, ಶೀಘ್ರದಲ್ಲೇ ಅದನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
2014-15ನೇ ಸಾಲಿಗೆ ಅನ್ವಯವಾಗುವಂತೆ ನೂತನ ಕೈಗಾರಿಕಾ ನೀತಿ ಜಾರಿಗೆ ಬರಲಿದೆ. ಹೊಸ ಕೈಗಾರಿಕಾ ನೀತಿ ಘೋಷಣೆಯಾದ ಬಳಿಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗುವುದು. ಜಾಗತಿಕ ಮಟ್ಟದ ಅನೇಕ ರಾಷ್ಟ್ರಗಳು ಬೆಂಗಳೂರು ನಗರದ ಕಡೆಗೆ ನೋಡುತ್ತಿದೆ. ರಾಜ್ಯದಲ್ಲಿ ಕೈಗಾರಿಕೆಗಳನ್ನು ಹೆಚ್ಚಿಸುವುದಕ್ಕೆ ಹಲವಾರು ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಲಾಪಕ್ಕೆ ಬಂದ ಜಯಲಲಿತಾ : ತಮಿಳುನಾಡು ಮುಖ್ಯಮಂತ್ರಿ ಜಯಲಿಲಿತಾ ಇಂದು ಕರ್ನಾಟಕದ ವಿಧಾನಸಭೆ ಕಲಾಪಕ್ಕೆ ಬಂದಿದ್ದರು. ಆಶ್ವರ್ಯ ಪಡಬೇಡಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕಾರ ಜಯಲಲಿತಾ ವಿಧಾನ ಪರಿಷತ್ತಿನಲ್ಲಿದ್ದರು.
ಗುರುವಾರದ ಕಲಾಪದ ವೇಳೆ ನಾಮ ನಿರ್ದೇಶಿತ ಸದಸ್ಯರಾದ ಜಯಮಾಲ ಅವರು ಹೇಳಿದ ಪ್ರಶ್ನೆಗೆ ಉತ್ತರ ನೀಡಲು ನಿಂತ ಸಿಎಂ ಸಿದ್ದರಾಮಯ್ಯ ನೋಡಿ ಜಯಲಲಿತಾ ಅವರೇ ಎಂದು ಮಾತು ಆರಂಭಿಸಿದರು. ತಕ್ಷಣ ತಮ್ಮ ತಪ್ಪಿನ ಅರಿವಾಗಿ ಜಯಮಾಲ ಎಂದು ಸರಿಪಡಿಸಿಕೊಂಡರು. ಇದನ್ನು ಗಮನಿಸಿದ ಕೆ.ಎಸ್.ಈಶ್ವರಪ್ಪ ಅವರು, "ನೋಡಿ ಜಯಲಲಿತಾ ಅವರ ತಂಟೆಗೆ ಮಾತ್ರ ಹೋಗಬೇಡಿ" ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದಾಗ ಸದನದಲ್ಲಿ ನಗುವಿನ ಅಲೆ ಎದ್ದಿತು. ["ಬಾಯಿ ಮುಚ್ಕೊಂಡು ಕುತ್ಕೊಳ್ಳಿ" ಅಂದ್ರು ಈಶ್ವರಪ್ಪ]
ಸೆಂಟ್ರಲ್ ಜೈಲಲ್ಲಿ ಗಾಂಜಾ ಸಿಗುತ್ತೆ : ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಗಾಂಜಾ ಸಿಗುತ್ತದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಇಂದು ಸರ್ಕಾರದ ಗಮನ ಸೆಳೆದಿದ್ದಾರೆ. ಗುರುವಾರದ ಕಲಾಪದಲ್ಲಿ ಮಾತನಾಡಿದ ಅವರು, ಖಾಸಗಿ ಮಾಧ್ಯಮವೊಂದರಲ್ಲಿ ಸೆಂಟ್ರಲ್ ಜೈಲಿನಲ್ಲಿ ಗಾಂಜಾ ಬಳಕೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಕಾರ್ಯಕ್ರಮವನ್ನು ಪ್ರಸಾರ ವಾಗುತ್ತಿದೆ ಎಂದು ಸಿಡಿಯನ್ನು ಪ್ರದರ್ಶಿಸಿದರು.
ಈಶ್ವರಪ್ಪ ಮಾತಿಗೆ ಪ್ರತಿಕ್ರಿಯೆ ನೀಡಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ ಕಲಾಪದ ನಿಯಮದಂತೆ ಮೊದಲು ಪ್ರಶ್ನೋತ್ತರ ಕಲಾಪ ಆಗಲಿ, ತದನಂತರ ವಿಶೇಷ ನಿಯಮದಡಿ ಈ ವಿಷಯ ಕುರಿತು ಚರ್ಚೆ ನಡೆಸೋಣ ಎಂದು ಹೇಳಿದರು. ಮೊದಲು ಮುಖ್ಯಮಂತ್ರಿಗಳಿ ಈ ಸಿಡಿ ನೋಡಲಿ ಎಂದು ಈಶ್ವರಪ್ಪ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಗೃಹ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸೂಚನೆ ನೀಡಿದರು.