ಅಧಿವೇಶನದ ಮೊದಲ ದಿನದ ಮುಖ್ಯಾಂಶಗಳು
ಬೆಂಗಳೂರು, ಜೂ.23 : 27 ದಿನಗಳ ದೀರ್ಘಕಾಲದ ರಾಜ್ಯ ವಿಧಾನಮಂಡಲದ ಅಧಿವೇಶನ ಸೋಮವಾರ ಆರಂಭವಾಗಿದೆ. ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ನಂತರ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೇಲಿನ ಬೇಡಿಕೆಗಳ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು.
ಸೋಮವಾರ
ಮಧ್ಯಾಹ್ನ
12
ಗಂಟೆಗೆ
ಮೊದಲ
ದಿನದ
ಕಲಾಪಗಳು
ಆರಂಭಗೊಂಡವು.
ವಿಧಾನಸಭೆಯಲ್ಲಿ
ಸಭಾಧ್ಯಕ್ಷ
ಕಾಗೋಡು
ತಿಮ್ಮಪ್ಪ
ಸಂತಾಪ
ಸೂಚನೆಯೊಂದಿಗೆ
ಕಾರ್ಯಕಲಾಪವನ್ನು
ಆರಂಭಿಸಿದರು.
ವಿಧಾನಪರಿಷತ್ತಿನಲ್ಲಿ
ಸಭಾಪತಿ
ಡಿ.ಎಚ್.ಶಂಕರಮೂರ್ತಿ
ಸಂತಾಪ
ಸೂಚನೆ
ನಿರ್ಣಯ
ಮಂಡಿಸುವುದರೊಂದಿಗೆ
ಇಂದಿನ
ಮೊದಲ
ದಿನದ
ಕಲಾಪವನ್ನು
ಪ್ರಾರಂಭಿಸಿದರು.
ಉಭಯ ಸದನಗಳಲ್ಲಿ ಇತ್ತೀಚೆಗೆ ನಿಧನರಾದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ, ವಿಧಾನಸಭೆ ಮಾಜಿ ಸದಸ್ಯ ಕೆ.ಪ್ರಭಾಕರರೆಡ್ಡಿ, ಎಚ್.ಎಸ್.ಶಂಕರಲಿಂಗೇಗೌಡ, ಎ.ಕೃಷ್ಣಪ್ಪ, ಐ.ಐ.ಎಂ.ಜಯರಾಮಶೆಟ್ಟಿ, ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್.ಜನಾರ್ದನರೆಡ್ಡಿ, ನಟ, ನಿರ್ದೇಶಕ ಸಿ.ಆರ್. ಸಿಂಹ, ನೀರಾವರಿ ತಜ್ಞ ಡಾ.ಪರಮಶಿವಯ್ಯ ಮುಂತಾದವರಿಗೆ ಸಂತಾಪ ಸೂಚಿಸಲಾಯಿತು. [ಸೋಮವಾರದಿಂದ ವಿಧಾನಸಭೆ ಅಧಿವೇಶನ]
ಕೈ ಶಾಸಕರನ್ನು ನೇಪಾಳಕ್ಕೆ ಕಳುಹಿಸಿ : ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಪಕ್ಷದ ಶಾಸಕರು ಸದಸನಕ್ಕೆ ಗೈರು ಹಾಜರಾಗಿದ್ದಕ್ಕೆ ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿದ ವಿಷಯಕ್ಕೆ ಧ್ವನಿಗೂಡಿಸಿದ ಅವರು, ಸದನಕ್ಕೆ ಬಾರದೇ ಇರುವ ಸದಸ್ಯರನ್ನು ನೇಪಾಳಕ್ಕೆ ಕಳುಹಿಸಿ ಎಂದು ಛೇಡಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಆದ್ದರಿಂದ ತಡವಾಗಿ ಆಗಮಿಸುತ್ತಾರೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಉತ್ತರ ನೀಡಿದರು.
ಕಬ್ಬು ಬೆಳೆಗಾರರ ಸಮಸ್ಯೆ ಪ್ರತಿಧ್ವನಿ : ಮೊದಲ ದಿನದ ಕಲಾಪದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ "ನಮ್ಮ ಸರ್ಕಾರ ರೈತರ ಪರವಾಗಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡಿಲ್ಲ, ಮಾಡುವುದೂ ಇಲ್ಲ" ಎಂದು ಹೇಳಿದರು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂಬ ವಿಷಯ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿಗಳು ಈ ಸ್ಪಷ್ಟನೆಯನ್ನು ನೀಡಿದರು.
ಯಾರು ಮಂತ್ರಿಯಾಗುತ್ತಾರೆ : ಯಾವ ಶಾಸಕರು ಮಂತ್ರಿಯಾಗಬೇಕು ಎಂಬ ಬಗ್ಗೆ ವಿಧಾನಸಭೆಯಲ್ಲಿ ಇಂದು ಚರ್ಚೆ ನಡೆಯಿತು. ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಎಸ್.ಶಂಕರಲಿಂಗೇಗೌಡರು ಮೈಸೂರಿನವರು. ನನ್ನ ಒಳ್ಳೆಯ ಗೆಳೆಯರು. ನಾಲ್ಕು ಬಾರಿ ಶಾಸಕರಾಗಿದ್ದರು. ಮಂತ್ರಿಯಾಗುವ ಎಲ್ಲ ಅರ್ಹತೆ ಇತ್ತು. ಆದರೆ, ಆಗಲಿಲ್ಲವಲ್ಲ ಎಂಬ ಕೊರಗಿನಲ್ಲಿ ತೀರಿಕೊಂಡರು ಎಂದು ಹೇಳಿದರು.
ಸಿಎಂ ಮಾತಿಗೆ ತಿರುಗೇಟು ನೀಡಿದ ಸಿ.ಟಿ.ರವಿ ಅವರು ನಾಲ್ಕು ಬಾರಿ, ಐದು ಬಾರಿ ಗೆದ್ದವರು ನಿಮ್ಮ ಪಕ್ಷದಲ್ಲೂ ಇದ್ದಾರೆ. ಅವರನ್ನು ಏಕೆ ಮಂತ್ರಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ಕೊಟ್ಟ ಸಿಎಂ ನಾನು ಗೌಡರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಹೇಳಿಲ್ಲ. ಸಂತಾಪ ಸೂಚಿಸುವಾಗ ವಿಷಯ ಪ್ರಸ್ತಾಪಿಸಿದೆ ಅಷ್ಟೆ. ಎಲ್ಲಾ ಶಾಸಕರನ್ನು ಮಂತ್ರಿ ಮಾಡಲು ಅವಕಾಶವಿಲ್ಲ ಎಂದು ಚರ್ಚೆ ಕೊನೆಗೊಳಿಸಿದರು.
ಜೈಲಿನಿಂದ ಬಂದ ಶಾಸಕರು : ಮೊದಲ ದಿನದ ಅಧಿವೇಶನಕ್ಕೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಶಾಸಕರಾದ ಆನಂದ್ ಸಿಂಗ್, ಸತೀಶ್ ಸೈಲ್, ಸುರೇಶ್ ಬಾಬು, ನಾಗೇಂದ್ರ ಅವರು ಆಗಮಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯ ಇವರಿಗೆ ಕಲಾಪದಲ್ಲಿ ಪಾಲ್ಗೊಳ್ಳಲು ಷರತ್ತು ಬದ್ಧ ಅನುಮತಿ ನೀಡಿದೆ. ಕುಮಾರ ಕೃಪಾ ಅತಿಥಿ ಗೃಹದಲ್ಲಿರುವ ಇವರು, ಬಿಗಿ ಭದ್ರತೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿ ಕಲಾಪದಲ್ಲಿ ಪಾಲ್ಗೊಂಡರು.