ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಸಚಿವ ಜಾರ್ಜ್ ರಾಜೀನಾಮೆಗೆ ಸದನದಲ್ಲಿ ಒತ್ತಡ

|
Google Oneindia Kannada News

ಬೆಂಗಳೂರು, ಜು. 18 : ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ವಿಧಾನಸಭೆಯಲ್ಲಿ ಶುಕ್ರವಾರ ಬಿಜೆಪಿ ಸದಸ್ಯರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಬಿಜೆಪಿ ಸದಸ್ಯರ ಗದ್ದಲದಿಂದಾಗಿ ಸದನವನ್ನು ಅರ್ಧಗಂಟೆ ಕಾಲ ಮುಂದೂಡಲಾಯಿತು.

ಮುಂಗಾರು ಅಧಿವೇಶನದ ಶುಕ್ರವಾರದ ಕಲಾಪ ಆರಂಭವಾಗುತ್ತಿದ್ದಂತೆ, ಕಪ್ಪು ಪಟ್ಟಿ ಧರಿಸಿ ಬಂದಿದ್ದ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಜೆಡಿಎಸ್​ ಶಾಸಕರು ಬಿಜೆಪಿಗೆ ಜೊತೆ ಕೈಜೋಡಿಸಿದ್ದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗದ್ದಲವೆಬ್ಬಿಸಿದರು.

Vidhana Soudha

ಸ್ಪೀಕರ್ ಕಾಗೋಡು ತಿಮ್ಮಪ್ಪ ಬಿಜೆಪಿ ಶಾಸಕರೊಂದಿಗೆ ನಡೆಸಿದ ಮಾತುಕತೆ ಫಲ ನೀಡಲಿಲ್ಲ. ಮಾಜಿ ಸಚಿವ ಸುರೇಶ್ ಕುಮಾರ್, ಕಾರ್ಕಳ ಶಾಸಕ ಸುನೀಲ್ ಕುಮಾರ್ ಮುಂತಾದವರು ಗದ್ದಲ ಮುಂದುವರೆಸಿದ್ದರಿಂದ ಸದನವನ್ನು ಅರ್ಧಗಂಟೆಗಳ ಕಾಲ ಮುಂದೂಡಲಾಯಿತು. ಸದ್ಯ 12.15ರಿಂದ ಕಲಾಪವನ್ನು ಪುನಃ ಆರಂಭಿಸಲಾಗಿದೆ. [ಗುರುವಾರ ಸದನದಲ್ಲಿ ಏನಾಯ್ತು?]

ಸದನದಲ್ಲಿ ಶುಕ್ರವಾರ ನಡೆದಿದ್ದೇನು? : ಶುಕ್ರವಾರದ ಕಲಾಪದಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಕರ್ನಾಟಕ ಕಾಮುಕರ ರಾಜ್ಯವಾಗುತ್ತಿದೆ. ರಾಜ್ಯದಲ್ಲಿ ಏಳು ದಿನಗಳಲ್ಲಿ 10 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ, ಕಳೆದ 24 ಗಂಟೆಗಳಲ್ಲಿ 5 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು, ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಶಾಸಕರ ಗದ್ದಲದಿಂದ ಅಸಮಾಧಾನಗೊಂಡ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸದನವನ್ನು ನಡೆಸಲು ಬಿಡಿ ನಂತರ ಚರ್ಚೆ ಮಾಡೋಣ. ಸದನದ ಕಾರ್ಯ-ಕಲಾಪ ನಡೆಸುವುದು ಹೇಗೆ ಎಂದು ನನಗೆ ಗೊತ್ತು ಎಂದರು. ಶಿಕ್ಷಣ ಇಲಾಖೆ ಬೇಡಿಕೆ ಮೇಲಿನ ಚರ್ಚೆಗೆ ಸಚಿವರು ಉತ್ತರ ಕೊಡಬೇಕು, ನಂತರ ಅತ್ಯಾಚಾರ ಪ್ರಕರಣದ ಬಗ್ಗೆ ಚರ್ಚೆ ನಡೆಸೋಣ ಎಂದು ಹೇಳಿದರು.

ಬಿಜೆಪಿ ಶಾಸಕರ ಆಕ್ರೋಶಕ್ಕೆ ತುತ್ತಾದ ಸಿಎಂ : ಅತ್ಯಾಚಾರ ಪ್ರಕರಣದ ಕುರಿತ ಚರ್ಚೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಆಡಳಿತದಲ್ಲಿದ್ದಾಗ ಅತ್ಯಾಚಾರ ಮಾಡಿದವರೇ ಸಚಿವರಾಗಿದ್ದರು, ಸದನದಲ್ಲಿ ನೀಲಿಚಿತ್ರ ನೋಡಿದ್ದರು, ಈಗ ಸಭ್ಯರಂತೆ ಚರ್ಚೆ ಮಾಡುತ್ತಾರೆ ನಾಚಿಕೆಯಾಗಬೇಕು ಎಂದು ಹೇಳಿದರು.

ಮುಖ್ಯಮಂತ್ರಿಗಳ ಈ ಹೇಳಿಕೆ ವಿಪಕ್ಷ ಬಿಜೆಪಿಯ ಶಾಸಕರನ್ನು ಕೆರಳಿಸಿತು. ಸರ್ಕಾರ ಪ್ರಕರಣಗಳ ಬಗ್ಗೆ ಸರಿಯಾದ ಉತ್ತರ ನೀಡುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಜನರಿಗೆ ಅನಿಸುತ್ತಿಲ್ಲ, ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ, ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್ತಿನಲ್ಲೂ ಪ್ರತಿಧ್ವನಿ : ಶುಕ್ರವಾರ ಮೇಲ್ಮನೆ ಕಲಾಪ ಆರಂಭವಾದ ತಕ್ಷಣ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ವಿಷಯದ ಕುರಿತು ಚರ್ಚೆಗೆ ನಿಲುವಳಿ ಸೂಚನೆ ಯಡಿ ಅವಕಾಶ ನೀಡುವಂತೆ ಆಗ್ರಹಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಎಸ್.ಆರ್.ಪಾಟೀಲ್, ಸದನದ ನಿಯಮಾವಳಿಯಂತೆ ಪ್ರಶ್ನೋತ್ತರ ಕಲಾಪದ ನಂತರ ಈ ವಿಷಯದ ಬಗ್ಗೆ ಚರ್ಚೆ ನಡೆಸೋಣ ಉತ್ತರ ನೀಡಲು ಸರ್ಕಾರ ಸಿದ್ಧವಿದೆ ಎಂದರು. ಆದರೆ, ಬಿಜೆಪಿಯ ಸದಸ್ಯರು ತಕ್ಷಣ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಈ ವಿಚಾರಕ್ಕೆ ಜಟಾಪಟಿ ನಡೆದಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

English summary
27 days Karnataka Assembly Monsoon session Day 20 highlights. What happened in the Assembly today?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X