ಜನಶ್ರೀ ಬಿಟ್ಟ ಶಶಿ: ಪತ್ರಿಕೋದ್ಯಮದಲ್ಲಿ ಹೀಗೂ ಉಂಟೆ?
ಬೆಂಗಳೂರು, ಅ.15: ಇತ್ತಿತ್ಲಾಗೆ ಬಿಡಿ. ಮಂದಿಗೆ ಕೆಲಸ ಬಿಡುವುದು ಮತ್ತೊಂದು ಉದ್ಯೋಗ ಗಿಟ್ಟಿಸುವುದು ನೀರು ಕುಡಿದಷ್ಟೇ ಸಲೀಸಾಗಿದೆ. ಆದರೂ ಈ ಎರಡೂ ಪ್ರಕ್ರಿಯೆಗಳ ಮಧ್ಯೆ ಒಂದಷ್ಟು ಸೂಕ್ಷ್ಮಗಳು/ ಧರ್ಮಸೂಕ್ಷಗಳು ಘಟಿಸುತ್ತವೆ. ಅದು ಆ ವ್ಯಕ್ತಿಯ ಮಾನದಂಡವೂ ಆಗಿಬಿಡುತ್ತದೆ.
ಇಂದಿನ ದಿನಮಾನದಲ್ಲಿ ಇದು ಯಾವುದೇ ಒಂದು ನಿರ್ದಿಷ್ಟ ಉದ್ಯಮಕ್ಕೆ ಸೀಮಿತವಾಗಿಲ್ಲ. ಹೇಳಬೇಕು ಅಂದರೆ ಪತ್ರಿಕೋದ್ಯಮ/ ಮಾಧ್ಯಮವೂ ಹೊರತಲ್ಲ. ಇಂದು ಇಲ್ಲಿದ್ದವರು ನಾಳೆ ಇನ್ನೆಲ್ಲೋ.
ಕೆಲಸ ಬಿಟ್ಟ ಬಳಿಕ ಸಂಸ್ಥೆಯ ಮಾಜಿ ಉದ್ಯೋಗಿ ಎನ್ನಿಸಿಕೊಳ್ಳುವ ವ್ಯಕ್ತಿ ಕಂಪನಿಯನ್ನು ವಾಚಾಮಗೋಚರ ಹರಾಜು ಹಾಕುವುದು ಸಾಮಾನ್ಯವಾಗುತ್ತಿದೆ. ಅವನು ಹಂಗಿದ್ದ ಇವನು ಹಿಂಗಿದ್ದ. ಇವನಿಂದಲೇ ನಾನು ಕೆಟ್ಟಿದ್ದು. ಅವನಿಂದಲೇ ನಾನು ಕೆಲಸ ಬಿಡಬೇಕಾಗಿ ಬಂದಿದ್ದು ಎಂದೆಲ್ಲಾ ಲೆಫ್ಟ್ ರೈಟ್ ತೆಗೆದುಕೊಂಡುಬಿಡುತ್ತಾನೆ ಆ ಮಾಜಿ ಉದ್ಯೋಗಿ.
ಆದರೆ ಇಲ್ಲೊಬ್ಬರು ಇದ್ದಾರೆ. ಶಶಿಧರ ನಾರಾಯಣ ರಾವ್ ಅಂತ. ಹಿರಿಯ ಪತ್ರಕರ್ತ. ಇವರು ಮೊನ್ನೆಮೊನ್ನೆಯವರೆಗೂ ಜನಶ್ರೀ ನ್ಯೂಸ್ ಚಾನೆಲಿನಲ್ಲಿ ಕ್ರೈಂ ನೋಡಿಕೊಳ್ಳುತ್ತಿದ್ದ ಸಹೃದಯಿ. ಅದೇನಾಯಿತೋ ಶಶಿ ಇದೀಗ ಜನಶ್ರೀ ನ್ಯೂಸ್ ಚಾನೆಲ್ ಬಿಟ್ಟಿದ್ದಾರೆ. ಆದರೆ ವಿಷಯ ಅದಲ್ಲ.
ಅವರು ಕೆಲಸಕ್ಕೆ ಗುಡ್ ಬೈ ಹೇಳಿರುವ ರೀತಿ-ನೀತಿ ಇದೆಯಲ್ಲಾ ಅದು ನಿಜಕ್ಕೂ ಅನುಕರಣೀಯ. ಅದನ್ನು ಧಾರಾಳವಾಗಿ heights of creativity ಪಟ್ಟಿಗೆ ಸೇರಿಸಬಹುದು. ಜನಶ್ರೀ ನ್ಯೂಸ್ ಚಾನೆಲಿನ ಹೊಸ್ತಿಲಲ್ಲಿ ನಿಂತು 'I love u janasri... Good bye' ಎಂದು ಹೇಳಿದ್ದಾರೆ ಶಶಿ. ಕೆಲಸ ಬಿಡುತ್ತಿರುವಾಗ I love u janasri ಎಂದು ಹೇಳುವುದಿದೆಯಲ್ಲಾ ಅದು ಸೌಜನ್ಯ/ಕೃತಜ್ಞತೆಯ ಪರಮಾವಧಿ.
ಒಮ್ಮೆ ಚಿತ್ರವನ್ನು ನೋಡಿ- ಅಲ್ಲಿರುವ Exit ಬೋರ್ಡ್- ಚಂದ್ರನಷ್ಟೇ ಪ್ರಶಾಂತಮೊಗದಲ್ಲಿರುವ ಶಶಿ - ಆತ ಕೈಬೀಸುತ್ತಿರುವುದು. ಇದೆಲ್ಲಾ facebookನಲ್ಲಿ ಪೋಸ್ಟ್ ಆಗಿದೆ. ತನ್ಮೂಲಕ ಗೆಳೆಯ ಶಶಿಯ Status ನಿಜಕ್ಕೂ ಹೆಚ್ಚಿದೆ. ಶಶಿಯ ಮುಂದಿನ ಪಯಣ ಆತ ಬಯಸಿದಂತೇ ಆಗಿರಲಿ ... All the best Shashi!