ಸಿಬಿ ಪುರದಲ್ಲಿ ನಾಮಪತ್ರ ಸಲ್ಲಿಸಿದ ಕುಮಾರಸ್ವಾಮಿ
ಬೆಂಗಳೂರು, ಮಾರ್ಚ್ 26: ಈ ಬಾರಿಯ ಲೋಕಸಭಾ ಚುನಾವಣೆ ಅನೇಕ ಕುತೂಹಲಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ. ಜೆಡಿಎಸ್ ಪಕ್ಷದ ವಿಷಯದಲ್ಲಿ ಹೇಳುವುದಾದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರನ್ನೂ ಮತ್ತು ಹಾಸನ ಕ್ಷೇತ್ರದಿಂದ ಎಚ್ ಡಿ ದೇವೇಗೌಡರು ಕಣಕ್ಕಿಳಿದಿರುವಾಗ ಪಕ್ಷವು ಭಾರಿ ನಿರೀಕ್ಷೆಗಳನ್ನು ಹೊಂದಿದೆ.
ರಾಮನಗರ ಶಾಸಕ ಎಚ್ ಡಿ ಕುಮಾರಸ್ವಾಮಿ ಅವರು ಇದೀಗತಾನೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಈ ಸಂದರ್ಭದಲ್ಲಿ 'ಒನ್ಇಂಡಿಯಾಕನ್ನಡ' ಪ್ರತಿನಿಧಿ ಜತೆ ಚಿಟ್ ಚಾಟ್ ನಡೆಸಿದ ಜೆಡಿಎಸ್ ಪಕ್ಷದ ಮುಖಂಡ, ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಮಾಲೀಕ ಡಾ. ಟಿಎ ಶರವಣ ಅವರು ತಮ್ಮ ಅನಿಸಿಕೆಯನ್ನು ಹೀಗೆ ಹಂಚಿಕೊಂಡಿದ್ದಾರೆ.
ಗೌಡ್ರ 80ನೇ ಹುಟ್ಟುಹಬ್ಬಕ್ಕೆ ಮತದಾರರ ಕಾಣಿಕೆ:
'ದೇವೇಗೌಡರು 1996ರಲ್ಲಿ ಪ್ರಧಾನಿಯಾಗಿದ್ದ ದಿನಗಳು ಮರುಕಳಿಸಬೇಕು. ಹಾಗೆಯೆ, ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಿನ ದಿನಗಳು ಮರುಕಳಿಸಬೇಕು. ಅದಕ್ಕೆ ರಾಜ್ಯದ ಮತದಾರರು ಜೆಡಿಎಸ್ ಪಕ್ಷಕ್ಕೆ ಮತ ನೀಡಿ, ಕನಿಷ್ಠ 12- 15 ಸ್ಥಾನಗಳನ್ನು ರಾಜ್ಯದಿಂದ ಗೆಲ್ಲಿಸಿಕೊಡಬೇಕು' ಟಿಎ ಶರವಣ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
'ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡರು ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುವ 2 ದಿನಗಳ ನಂತರ (ಮೇ 18) ತಮ್ಮ 81ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಕರ್ನಾಟಕದ ಜನತೆ ಗೌಡರಿಗೆ ಈ ಬಾರಿ ಭರ್ಜರಿ ಹುಟ್ಟುಹಬ್ಬದ ಕಾಣಿಕೆ ನೀಡುವಂತಾಗಬೇಕು' ಎಂದು ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಟಿಎ ಶರವಣ ಅವರು ಆಶಿಸಿದ್ದಾರೆ.
'ಪ್ರಾದೇಶಿಕ ಪಕ್ಷಗಳ ಬಗ್ಗೆ ಮಲತಾಯಿ ಧೋರಣೆ/ ಅಸಡ್ಡೆ ಮುಂದುವರಿದಿದೆ. ಆದರೂ ಅನೇಕ ರಾಜ್ಯಗಳಲ್ಲಿ ನಮ್ಮಂತಹ ಪ್ರಾದೇಶಿಕ ಪಕ್ಷಗಳದ್ದೇ ರಾಜ್ಯಭಾರ ನಡೆದಿದೆ. ಅದು ಕರ್ನಾಟಕದಲ್ಲೂ ಕಾಣುವಂತಾಗಬೇಕು. ರಾಷ್ಟ್ರಮಟ್ಟದಲ್ಲೂ ಪಕ್ಷಕ್ಕೆ ಉತ್ತಮ ನೆಲೆ ಒದಗಿಸಿಕೊಡಬೇಕು' ಎಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ.
'ಕಳೆದ ಐದಾರು ವರ್ಷಗಳಲ್ಲಿ ರಾಜ್ಯವನ್ನು ಬಿಜೆಪಿ ಹಾಳು ಮಾಡಿದೆ. ಅದೇ ರೀತಿ ರಾಷ್ಟ್ರಮಟ್ಟದಲ್ಲಿ ಐದಾರು ದಶಕಗಳಲ್ಲಿ ಕಾಂಗ್ರೆಸ್ ಪಕ್ಷವು ದೇಶವನ್ನು ದುಃಸ್ಥಿತಿಗೆ ತಳ್ಳಿದೆ. ಆದರೆ ನಮ್ಮದು ಸಮಾಜಮುಖಿ ಪಕ್ಷ. ದೇಶ ಮತ್ತು ರಾಜ್ಯದ ಪ್ರಗತಿಗಾಗಿ ಕಂಕಣಬದ್ಧವಾಗಿರುವ ಪಕ್ಷ.
ಹೆಸರಿಗೆ ತಕ್ಕಂತೆ ಜಾತ್ಯಾತೀತವಾಗಿದೆ. ಜಾತ್ಯಾತೀತವಾಗಿ ಎಲ್ಲ ಸಮುದಾಯದ ಅಭ್ಯರ್ಥಿಗಳಿಗೂ ಚುನಾವಣೆಯಲ್ಲಿ ಅವಕಾಶ ನೀಡಲಾಗಿದೆ. ಅವರನ್ನು ಆರಿಸಿ ಕಳುಹಿಸುವ ಜವಾಬ್ದಾರಿ ರಾಜ್ಯದ ಮತದಾರರ ಮೇಲಿದೆ. ಜನ ತಮ್ಮ ಪಕ್ಷವನ್ನು ಆಶಿರ್ವದಿಸುತ್ತಾರೆ' ಎಂದು ಶರವಣ ಅವರು ಅಭಿಪ್ರಾಯಪಟ್ಟಿದ್ದಾರೆ. (ಸ್ಯಾಂಡಲ್ ವುಡ್ ಗೆ 'ಬಂಗಾರದ ಮನುಷ್ಯ' ಶರವಣ)