ಕಾಂಗ್ರೆಸ್ಸಿಗೆ ಪಕ್ಷಾಂತರ:ಶಾಸಕ ಚೆಲುವರಾಯಸ್ವಾಮಿ ಸ್ಪಷ್ಟನೆ
ಬೆಂಗಳೂರು, ಆ 27: ಕಳೆದ ಕೆಲವು ತಿಂಗಳಿನಿಂದ ಜೆಡಿಎಸ್ ಪಕ್ಷದಲ್ಲಿ ಕಾಣಿಸಿಕೊಂಡಿರುವ ಭಿನ್ನಮತದ ಬಗ್ಗೆ ಶಾಸಕ ಚೆಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದು, ತಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದು ಹೌದು ಎಂದು ಒಪ್ಪಿಕೊಂಡಿದ್ದಾರೆ.
ನಗರದಲ್ಲಿ ಬುಧವಾರ (ಆ 27) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಚೆಲುವರಾಯಸ್ವಾಮಿ, ಪಕ್ಷದಲ್ಲಿ ಭಿನ್ನಮತ ಇದೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದು ರಾಜಕಾರಣಿಗಳು ಬಳಸುವ ಮಾಮೂಲು ಪದವನ್ನು ಬಳಸಿ ನಾವು ಯಾರೂ ಜೆಡಿಎಸ್ ತೊರೆಯುವುದಿಲ್ಲ ಎಂದು ಹೇಳಿದ್ದಾರೆ.
ಹಿಂದಿನಿಂದಲೂ ನನಗೆ ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದವರು. ಕ್ಷೇತ್ರದ ಅಭಿವೃದ್ದಿ ಸಂಬಂಧ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಮಾಧ್ಯಮಗಳು ಅದನ್ನೇ ದೊಡ್ಡ ಸುದ್ದಿ ಮಾಡಿವೆ ಎಂದು ಚೆಲುವರಾಯಸ್ವಾಮಿ ಮಾಧ್ಯಮದ ಮೇಲೆ ಬೆರಳು ತೋರಿಸಿದ್ದಾರೆ. (ದೇವೇಗೌಡ ಖಡಕ್ ನುಡಿ)
ನನ್ನನ್ನು ಪಕ್ಷದಲ್ಲಿ ಖಳನಾಯಕನಂತೆ ಬಿಂಬಿಸಲಾಗುತ್ತಿದೆ. ನಾನು ಪಕ್ಷದ ಕಷ್ಟದ ದಿನದಿಂದಲೂ ಜೊತೆಗಿದ್ದವನು. ಮುಂದೆಯೇ ಇರುತ್ತೇನೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಚೆಲುವರಾಯಸ್ವಾಮಿ ಸ್ಪಷ್ಟ ಪಡಿಸಿದ್ದಾರೆ.
ಜೆಡಿಎಸ್ ಮುಖ್ಯಸ್ಥ ದೇವೇಗೌಡರಿಗೆ ಪಕ್ಷದ ಕೆಲವು ಶಾಸಕರ ಮೇಲೆ ಮನಸ್ತಾಪ ಇದ್ದದ್ದು ನಿಜ. ಗೌಡ್ರು ಪಕ್ಷದ ಪ್ರಶ್ನಾತೀತ ನಾಯಕರು. ಶಾಸಕರಲ್ಲಿದ್ದ ಗೊಂದಲ ನಿವಾರಣೆಯಾಗಿದೆ. ಈಗ ಪಕ್ಷದಲ್ಲಿ ಗೊಂದಲವೂ ಇಲ್ಲ, ಅಸಮಾಧಾನವೂ ಇಲ್ಲ ಎಂದು ಚೆಲುವರಾಯಸ್ವಾಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ಸಿನತ್ತ ಮುಖಮಾಡಿದ್ದ ಕೆಲವು ಶಾಸಕರು
ಶಾಸಕರಾದ ಚೆಲುವರಾಯಸ್ವಾಮಿ, ಜಮೀರ್ ಅಹಮದ್, ಮಾಗಡಿ ಶಾಸಕ ಬಾಲಕೃಷ್ಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆಂದು ಭಾರೀ ಸುದ್ದಿಯಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಚೆಲುವರಾಯಸ್ವಾಮಿ ಮತ್ತು ಜಮೀರ್ ಅವರನ್ನು ಸಿಎಂ ಸಿದ್ದರಾಮಯ್ಯ ತನ್ನ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು.
ದೇವೇಗೌಡ ಅಸಮಾಧಾನ
ಲೋಕಸಭಾ ಚುನಾವಣೆಯಲ್ಲಿನ ದಯನೀಯ ಸೋಲಿನ ನಂತರ ಮೇಲಿನ ಮೂವರು ಶಾಸಕರು ಕಾಂಗ್ರೆಸ್ ಸೇರಲು ಬಯಸಿದ್ದರು ಎನ್ನುವ ಸುದ್ದಿಯಿಂದ ದೇವೇಗೌಡ ತೀವ್ರ ಅಸಮಾಧಾನಗೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಖಡಕ್ ಸಂದೇಶವನ್ನೂ ರವಾನಿಸಿದ್ದರು.
ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ ನಾನಲ್ಲ
ನಾನು ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ. ಇದನ್ನು ಗೌಡರಿಗೆ ಮತ್ತು ಕುಮಾರಸ್ವಾಮಿಗೆ ತಿಳಿಸಿದ್ದೇನೆ. ಒಂದು ಸಮುದಾಯದವರನ್ನು ಬಿಟ್ಟು ಬೇರೆಯವರನ್ನು ನೇಮಕ ಮಾಡಿ ಎಂದು ಸಲಹೆ ನೀಡಿದ್ದೇನೆ - ಚೆಲುವರಾಯಸ್ವಾಮಿ
ಗೌಡರು ಹಾಸನದಲ್ಲಿ ನೆಲೆಸಲು ಕಾರಣಯಾರು?
ದೇವೇಗೌಡರು ಹಾಸನದಲ್ಲಿ ನೆಲೆಸಲು ಯಾರು ಕಾರಣ ಎಂದು ನನಗೆ ತಿಳಿದಿಲ್ಲ. ಹಾಸನ ಕ್ಷೇತ್ರದ ಮೇಲಿನ ಪ್ರೀತಿಯಿಂದ ಅವರು ಆ ನಿರ್ಧಾರ ತೆಗೆದುಕೊಂಡಿರಬಹುದು - ಚೆಲುವರಾಯಸ್ವಾಮಿ
ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ
ಸದ್ಯ ಪಕ್ಷ ಹಿನ್ನಡೆ ಅನುಭವಿಸುತ್ತಿರಬಹುದು. ಆದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತೇವೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.