ಜಯಲಲಿತಾಗೆ 4 ವರ್ಷ ಜೈಲು: ಇದಾ ನಿಮ್ಮ ಸಂಸ್ಕೃತಿ?
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಹದಿನೆಂಟು ವರ್ಷಗಳ ಸುದೀರ್ಘ ರಾಜಕೀಯ ಜೀವನಕ್ಕೆ 'ಅಕ್ರಮಗಳಿಗೆ ಹಗರಣದ' ತೀರ್ಪು ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.
ತಮ್ಮ ನಾಯಕಿಯ ವಿರುದ್ದ ಈ ರೀತಿಯ ತೀರ್ಪು ಬರಬಹುದೆನ್ನುವ ಮುನ್ಸೂಚನೆ ಅರಿತಿದ್ದ ತಮಿಳುನಾಡು ಎಐಡಿಎಂಕೆ ಪಕ್ಷದ ಮುಖಂಡರ ಮತ್ತು ಅವರ ಚೇಲಾಗಳ ನಡುವಳಿಕೆ ಪರಪ್ಪನ ಅಗ್ರಹಾರದ ಮುಂದೆ ಮಾತ್ರ ಹೇಸಿಗೆ ಹುಟ್ಟಿಸುವಂತಿತ್ತು.
ನ್ಯಾಯಾಲಯ ಜಯಾ ತಪ್ಪಿತಸ್ಥೆ ಎಂದು ಮಧ್ಯಾಹ್ನದ ಹೊತ್ತಿಗೆ ನೀಡಿದ್ದ ಆದೇಶದ ನಂತರ ತಮಿಳುನಾಡಿನಲ್ಲಿ ಅಘೋಷಿತ ಬಂದ್ ಆಚರಿಸಲಾಗುತ್ತಿದೆ. ಇತ್ತ, ಎಐಡಿಎಂಕೆ ಮುಖಂಡರು ಮತ್ತು ಅವರ ಸಹಚರರ ಬೀದಿರಂಪಾಟಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಸುತ್ತಮುತ್ತಲ ಪ್ರದೇಶ ಸಾಕ್ಷಿಯಾಗಿದ್ದು ಮಾತ್ರ ದುರಂತವೇ ಸರಿ. (ಜೈಲಿನತ್ತ ಅಮ್ಮಾ, ಜಯಲಲಿತಾಗೆ 4 ವರ್ಷ ಜೈಲು)
ಬೆಂಗಳೂರಿಗೆ ಬಂದಿದ್ದ ಅಲ್ಲಿನ ಮುಖಂಡರಿಗೆ ಮತ್ತು ಹಲವಾರು ಅನುಯಾಯಿಗಳಿಗೆ ಜಯಲಲಿತಾ ಮೇಲೆ ಯಾವ ಕೇಸಿನ ವಿಚಾರಣೆ ಇಲ್ಲಿ ನಡೆಯುತ್ತಿದೆ ಎನ್ನುವುದೇ ತಿಳಿದಿಲ್ಲ. ಈ ಕೇಸು ಕರ್ನಾಟಕದಲ್ಲಿ ಯಾಕೆ ವಿಚಾರಣೆ ನಡೆಯುತ್ತಿದೆ ಎಂದೂ ಅರಿಯದ ಜನರ ದಡ್ಡತನ ಅವರ ಕುರುಡು ಪ್ರೇಮಕ್ಕೆ ಹಿಡಿದ ಕನ್ನಡಿಯಂತಾಗಿತ್ತು.
ಪರಪ್ಪನ ಅಗ್ರಹಾರದ ಮುಂದೆ ಪ್ರತಿಭಟನೆ ನಡೆಸುತ್ತಿದ್ದವರಿಗೆ ರಾಜ್ಯ ಪೊಲೀಸರು ಲಾಠಿ ಏಟಿನ ರುಚಿ ಚೆನ್ನಾಗಿ ತೋರಿಸಿದ್ದರೂ, ಪೊಲೀಸರನ್ನೇ ಏಕವಚನದಿಂದ ಹೀಯಾಳಿಸುತ್ತಿದ್ದದ್ದು ಮಾತ್ರ ಇದಾ ನಿಮ್ಮ ಸಂಸ್ಕೃತಿ ಅನಿಸುವಂತಿತ್ತು.
ಅಮ್ಮ ಜೈಲಿಗೆ ಹೋಗಿದ್ದಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಅರಿಯದ ಕಾರ್ಯಕರ್ತರು ಜಯಮ್ಮ ಜೈಲಿಗೆ ಹೋಗಲು ಕರ್ನಾಟಕ ಕಾರಣವೆಂದು ಸರಕಾರ ಮತ್ತು ಪೊಲೀಸರ ವಿರುದ್ದ ಧಿಕ್ಕಾರ ಕೂಗುತ್ತಿದ್ದದ್ದು ಮಾತ್ರ ಹಾಸ್ಯಾಸ್ಪದವಾಗಿತ್ತು.
ಕರ್ನಾಟಕ ನೊಂದಣಿ ವಾಹನಗಳ ಮೇಲೆ ಚೆನ್ನೈನಲ್ಲಿ ಪ್ರತಿಭಟನೆಕಾರರು ದಾಳಿ ನಡೆಸುತ್ತಿರುವುದು ಇವರ ಕುರುಡು ಜ್ಞಾನಕ್ಕೆ ನೀಡಬಹುದಾದ ಬಿರುದು. ಪ್ರತಿಭಟನೆಯಿಂದ, ಹಿಂಸಾಚಾರದ ಮೂಲಕ ಕಾನೂನು ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಈ ಪ್ರತಿಭಟನಾಕಾರರಿಗೆ ಅರಿತಂತಿಲ್ಲ.
ಸದಾ ದ್ವೇಷ ರಾಜಕಾರಣಕ್ಕೆ ಹೆಸರಾದ ತಮಿಳುನಾಡಿನಲ್ಲಿ ರಾಜಕೀಯ ಜಿದ್ದಾಜಿದ್ದಿ ಹೊಸದೇನಲ್ಲ. ಎರಡು ಪ್ರಮುಖ ಪಕ್ಷಗಳ ಮುಖಂಡರ ನಡುವಣ ಜಿದ್ದು, ಪ್ರತಿಷ್ಟೆ ಅವರ ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು.
ಆದರೆ ಎಐಡಿಎಂಕೆ ಪಕ್ಷದ ಮುಖಂಡರು ಮತ್ತು ಅವರ ಚೇಲಾಗಳು ಕರ್ನಾಟಕದಲ್ಲಿ ತಮ್ಮ ಬುದ್ದಿ ತೋರಿಸಿದ್ದು ಮಾತ್ರ ಎರಡು ರಾಜ್ಯಗಳ ನಡುವಣ ಸಂಬಂಧಕ್ಕೆ ಧಕ್ಕೆ ತಂದರೂ ಆಶ್ಚರ್ಯ ಪಡಬೇಕಾಗಿಲ್ಲ.
ದೇಶದಲ್ಲಿ ಯಾರೂ ಕಾನೂನಿಗಿಂತ ದೊಡ್ದವರಲ್ಲ ಎನ್ನುವ ಸತ್ಯವನ್ನು ಅರಿಯದ ಇವರದ್ದು ಇದೇನಾ ಸಂಸ್ಕೃತಿ ?