ಹಿಂದಿ ಹೇರಿಕೆ. ಕರವೇ ನಾರಾಯಣ ಗೌಡ್ರ ಲೇಖನ - 3
ಇದನ್ನು ನಾನು 'ಹಿಂದಿ ಮಾಫಿಯಾ' ಎಂದೇ ಕರೆಯಲು ಬಯಸುತ್ತೇನೆ. ಇಂಥ ಹಿಂದಿ ಮಾಫಿಯಾದ ವಿರುದ್ಧ ತೊಡೆತಟ್ಟಿ ನಿಂತಿದ್ದು ತಮಿಳುನಾಡಿನ ಜನರು ಮತ್ತು ಅಲ್ಲಿಯ ಸರ್ಕಾರ. ತಮಿಳಿಗರ ನಿರಂತರ ಹೋರಾಟ, ಬಲಿದಾನದಿಂದಾಗಿಯೇ 1976ರಲ್ಲಿ ಕೇಂದ್ರ ಸರ್ಕಾರ ಆಡಳಿತ ಭಾಷೆ ಕಾಯ್ದೆಗೆ ತಿದ್ದುಪಡಿ ತಂದು ತಮಿಳುನಾಡನ್ನು ಆ ಕಾಯ್ದೆಯಿಂದ ಹೊರಗೆ ಇಟ್ಟಿತು.
ಅದರರ್ಥವೇನು? ಹಿಂದಿಯೇತರ ರಾಜ್ಯಗಳ ಜನರಿಗೆ ದೇಶದ ಆಡಳಿತ ಭಾಷೆ ಕಾಯ್ದೆಯಿಂದ ಸಮಸ್ಯೆಯಾಗುತ್ತಿದೆ ಎಂದಲ್ಲವೇ? ತಮಿಳುನಾಡಿಗೆ ಯಾವ ಮಾನದಂಡವನ್ನು ಇಟ್ಟುಕೊಂಡು ಈ ವಿಶೇಷ ಅವಕಾಶವನ್ನು ಒದಗಿಸಲಾಯಿತೋ ಅದೇ ಮಾನದಂಡ ಕರ್ನಾಟಕ, ಕೇರಳ, ಆಂಧ್ರ, ಒಡಿಸ್ಸಾ, ಅಸ್ಸಾಂ, ಮಣಿಪುರ, ಮಹಾರಾಷ್ಟ್ರದಂಥ ರಾಜ್ಯಗಳಿಗೂ ಅನ್ವಯಿಸುವುದಿಲ್ಲವೇ?
ಇವತ್ತು ಕರ್ನಾಟಕಕ್ಕೆ ಆಗಬೇಕಾಗಿರುವುದೂ ಅದೇ. ಹೇಗೆ 1976ರ ಸಂವಿಧಾನ ತಿದ್ದುಪಡಿಯಲ್ಲಿ ಆಡಳಿತ ಭಾಷೆ ಕಾಯ್ದೆಯಿಂದ ತಮಿಳುನಾಡನ್ನು ಹೊರಗೆ ಇಡಲಾಯಿತೋ ಹಾಗೆಯೇ ಕರ್ನಾಟಕವನ್ನೂ ಹೊರಗೆ ಇಡಬೇಕಿದೆ. ತನ್ಮೂಲಕ ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕಾಗಿದೆ.
ಮೊದಲು ನಮ್ಮ ಶಾಲಾ ಪಠ್ಯಕ್ರಮಗಳಿಂದ ಹಿಂದಿಯನ್ನು ಹೊರಗೆ ಇಡಬೇಕಿದೆ. ಕನ್ನಡ ಮತ್ತು ಇಂಗ್ಲಿಷ್ ನಂತರ ಕನ್ನಡದ ಜನರು ಯಾವುದೇ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಪಡೆದುಕೊಳ್ಳುವ ಅವಕಾಶ ಕಲ್ಪಿಸಬೇಕಿದೆ. ಹಿಂದಿಯೇ ಏಕೆ? ತಮಿಳು, ತೆಲುಗು, ಫ್ರೆಂಚ್, ಜರ್ಮನ್, ಮಲೆಯಾಳ, ಅಸ್ಸಾಮಿ ಹೀಗೆ ಯಾವುದೇ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕನ್ನಡಿಗರಿಗೆ ಒದಗಿಸಬೇಕಿದೆ.
ಆದರೆ ಇದು ಅಷ್ಟು ಸುಲಭದ ವಿಷಯವಾಗೇನೂ ಇಲ್ಲ. ಯಾಕೆಂದರೆ 'ಹಿಂದಿ ಮಾಫಿಯಾ' ಈಗ ಹೆಚ್ಚು ಹೆಚ್ಚು ಬಲಶಾಲಿಯಾಗಿದೆ ಮತ್ತು ಕ್ರಿಯಾಶೀಲವಾಗಿದೆ. ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲೇ ಅದು ಹೊರಡಿಸಿದ ಎರಡು ಆದೇಶಗಳು ಇದಕ್ಕೆ ಸಾಕ್ಷಿ.
ಸರ್ಕಾರಿ ಅಧಿಕಾರಿಗಳು ಸಾಮಾಜಿಕ ತಾಣಗಳಲ್ಲಿ ಹಿಂದಿಯನ್ನೇ ಬಳಸಬೇಕು ಎಂದು ನೀಡಿದ ಆದೇಶ ಒಂದಾದರೆ, ಎಲ್ಲ ರಾಜ್ಯಗಳು ಕೇಂದ್ರ ಸರ್ಕಾರದೊಂದಿಗೆ ಹಿಂದಿಯಲ್ಲೇ ವ್ಯವಹರಿಸಬೇಕು ಎಂಬ ಆದೇಶ ಮತ್ತೊಂದು. ಈ ಎರಡು ಆದೇಶಗಳು ಹೊರಗೆ ಬಂದಾಗ ನನಗೆ ಪ್ರಾಮಾಣಿಕವಾಗಿ ಅನಿಸಿದ್ದು- ಹೀಗಿದ್ದ ಮೇಲೆ ಈ ಕೇಂದ್ರ ಸರ್ಕಾರವಾದರೂ ಯಾಕೆ ಬೇಕು? ಈ ಒಕ್ಕೂಟ ವ್ಯವಸ್ಥೆಯಾದರೂ ಯಾಕೆ ಬೇಕು? ನಾವು (ಹಿಂದಿಯೇತರ ರಾಜ್ಯಗಳು) ಭಾರತದಲ್ಲಿ ಯಾಕಾದರೂ ಇರಬೇಕು?