ರಾಘವೇಶ್ವರ ಶ್ರೀಗಳಿಗೆ ಬ್ಲ್ಯಾಕ್ ಮೇಲ್: ಸರಕಾರಕ್ಕೆ ನೋಟೀಸ್
ಬೆಂಗಳೂರು, ಏ 19: ಶ್ರೀರಾಮಚಂದ್ರಾಪುರ ಮಠದ ಶ್ರೀಮುದ್ರಾಘವೇಶ್ವರ ಭಾರತೀ ಸ್ವಾಮೀಜಿಗಳ ವಿರುದ್ದದ ಬ್ಲ್ಯಾಕ್ ಮೇಲ್ ಕೇಸಿನ ವಿಚಾರಣೆ ಹೊಸ ತಿರುವು ಪಡೆದುಕೊಂಡಿದೆ. ಆರೋಪಿಗೆ ಜಾಮೀನು ನೀಡಿದ ಕ್ರಮವನ್ನು ಪ್ರಶ್ನಿಸಿ ರಾಜ್ಯ ಉಚ್ಚನ್ಯಾಯಾಲಯ ಆರೋಪಿಗೆ ಮತ್ತು ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ಈ ಕೇಸಿಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಮೊದಲ ಆರೋಪಿ ಮಲ್ಲಿಕಾರ್ಜುನ ಪಾಟೀಲ್ ಗೆ ಸಿಟಿ ಮೆಟ್ರೋಪಾಲಿಟನ್ ನ್ಯಾಯಾಲಯ ಜಾಮೀನು ನೀಡಿತ್ತು. ಆರೋಪಿಗೆ ಜಾಮೀನು ನೀಡಿಕೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ರಾಜ್ಯ ಉಚ್ಚನ್ಯಾಯಾಲಯವು ಈಗ ನೋಟೀಸ್ ಜಾರಿ ಮಾಡಿದೆ.
ಶ್ರೀಮಠದ ಮೇಲೆ ತಾವು ಹೂಡಿದ್ದ ಸಾರ್ವಜನಿಕ ಹಿತಾಸಕ್ತಿಯ ಪ್ರಕರಣವನ್ನು ಹಿಂದಕ್ಕೆ ಪಡೆದುಕೊಳ್ಳಲು ದೊಡ್ಡ ಮೊತ್ತವನ್ನು ಕೇಳಿದ್ದ ಈ ಪ್ರಕರಣದ ಆರೋಪಿಗಳಾದ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಚಂದನ್ ಪೊಲೀಸರ ಬಲೆಗೆ ಬಿದ್ದು ಬಂಧಿತರಾಗಿದ್ದರು.
ಸದರಿ ಪ್ರಕರಣದ ಒಂದನೆಯ ಆರೋಪಿ ಮಲ್ಲಿಕಾರ್ಜುನ ಪಾಟೀಲಿಗೆ ಮೆಟ್ರೋಪಾಲಿಟನ್ ನ್ಯಾಯಾಲಯವು ಏಪ್ರಿಲ್ ಎರಡರಂದು ಜಾಮೀನು ನೀಡಿತ್ತು. ಆದರೆ, ಆರೋಪಿಯ ವಿರುದ್ಧ ಪ್ರಭಲವಾದ ಸಾಕ್ಷ್ಯಾಧಾರಗಳಿದ್ದು ಮತ್ತು ಆರೋಪಿಯು ನ್ಯಾಯಾಲಯದ ಅಮೂಲ್ಯ ಸಮಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹಾಗಾಗಿ, ಆರೋಪಿಗೆ ಜಾಮೀನು ನೀಡಿದ್ದನ್ನು ಶ್ರೀಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ ಜಿ ಭಟ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. (ಗೋಕರ್ಣ ದೇಗುಲ ಹಸ್ತಾಂತರ ಕೇಸ್ ಕ್ಲೋಸ್)
ಇದಕ್ಕೆ ಸ್ಪಂದಿಸಿದ ನ್ಯಾ. ಆನಂದ ಬೈರಾರೆಡ್ಡಿ ಅವರಿದ್ದ ನ್ಯಾಯಪೀಠ ಬ್ಲ್ಯಾಕ್ ಮೇಲ್ ನಂತಹ ಗುರುತರವಾದ ಆರೋಪ ಹಾಗೂ ನ್ಯಾಯಾಲಯದ ದುರ್ಬಳಕೆ ಮಾಡಿದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸರಿಯಾಗಿ ಪರಿಶೀಲಿಸದೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸರ್ಕಾರಕ್ಕೆ ಹಾಗೂ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದೆ.
ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯಾಗಿರುವ ಚಂದನ್ ಅವರ ಜಾಮೀನು ಅರ್ಜಿ ವಿಚಾರಣೆ ಇದೇ ಏಪ್ರಿಲ್ 21ರಂದು ಒಂದನೇ ಎಸಿಎಂಎಂ ನ್ಯಾಯಲಯದಲ್ಲಿ ನಡೆಯಲಿದೆ.
ಈ ಪ್ರಕರಣದಲ್ಲಿನ ಇತರ ಆರೋಪಿಗಳಾಗಿರುವ ಗೋಕರ್ಣ ಹಿತರಕ್ಷಣಾ ಸಮಿತಿಯ ಸದಸ್ಯರಾದ ರಾಜಗೋಪಾಲ ಅಡಿ, ಶೇಷಾನಂದ ಅಡಿ, ಗೋಪಾಲ ಗಾಯತ್ರಿ ಮತ್ತು ಅಮಿತ ನಾಡ್ಕರ್ಣಿ ಈ ನಾಲ್ವರ ನಿರೀಕ್ಷಣಾ ಜಾಮೀನಿನ ಅರ್ಜಿಯು ಏಪ್ರಿಲ್ 21ರಂದು 12ನೇ ತ್ವರಿತ ನ್ಯಾಯಲಯದಲ್ಲಿ ನಡೆಯಲಿದೆ.
ಪ್ರಕರಣದ ಬಗ್ಗೆ: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ದ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ದಾಖಲಾಗಿತ್ತು. ಅದನ್ನು ಹಿಂದಕ್ಕೆ ಪಡೆಯಲು ಮಲ್ಲಿಕಾರ್ಜುನ ಪಾಟೀಲ್ ಮತ್ತು ಚಂದನ್ ಎನ್ನುವವರು ಹತ್ತು ಲಕ್ಷ ರೂಪಾಯಿಗಳ ಬೇಡಿಕೆಯನ್ನು ಇಟ್ಟಿದ್ದರು.
ರಹಸ್ಯ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳಿಬ್ಬರು ಸಿಕ್ಕಿಬಿದ್ದಿದ್ದರು. ಶ್ರೀಮಠದ ಅಧಿಕಾರಿ ಕೆ ಜಿ ಭಟ್ ಅವರು ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ಮಾರ್ಚ್ 25ರಂದು ಗಿರಿನಗರ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದರು. ಅಂದಿನಿಂದ ಇಂದಿನವರೆಗೂ ಅನೇಕ ಗೊಂದಲಗಳು ಸೃಷ್ಟಿಯಾಗುತ್ತಲೇ ಇವೆ. ಪಟ್ಟಭದ್ರ ಹಿತಾಶಕ್ತಿಗಳು ಶ್ರೀಮಠದ ವಿರುದ್ದ ವ್ಯವಸ್ಥಿತ ಪಿತೂರಿ ಮಾಡುತ್ತಲೇ ಇದ್ದಾರೆ ಎನ್ನುವುದು ರಾಮಚಂದ್ರಾಪುರ ಮಠದ ಆರೋಪ.
(image courtesy : http://www.srimath.org)