ದೇವೇಗೌಡರ ವಿರುದ್ಧ ಕಣಕ್ಕಿಳಿದ್ರು ಎಚ್ ಡಿ ರೇವಣ್ಣ
ಹಾಸನ, ಏ.7: ಹಾಸನದ ಸುಪುತ್ರ ಎಚ್ ಡಿ ದೇವೇಗೌಡ ಅವರ ವಿರುದ್ಧವೇ ಅವರ ಹಿರಿಯ ಪುತ್ರ ಎಚ್ ಡಿ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರಾ? ದೊಡ್ಡಗೌಡ್ರ ಕುಟುಂಬದಲ್ಲಿ ಬಂಡಾಯ ರಾಜಕಾರಣ ಮನೆ ಮಾಡಿದೆಯಾ? ಇಳಿಯವಯಸ್ಸಿನಲ್ಲಿ ದೇವೇಗೌಡರಿಗೆ ಇದೆಂಥಾ ಪುತ್ರ ಕಾಟ? ಮುಂದೇನು? ಎಂದು ಹಾಸನದ ರಾಜಕೀಯ ಚಿತ್ರಣ ಅರಿಯದ ಮುಗ್ಧ ಜನ ಕೇಳುತ್ತಿದ್ದಾರೆ.
ಏಕೆ ಅಂಥಾದ್ದೇನಾಯ್ತು? ಅಂತ ಕೇಳುವುದಕ್ಕೆ ಮುನ್ನ, ಹಾಸನದ ಸುಪುತ್ರ, ಮಾಜಿ ಪ್ರಧಾನಿ ದೇವೇಗೌಡ ವಿರುದ್ಧ ಎಚ್ ಡಿ ರೇವಣ್ಣ ಅವರು ಸ್ಪರ್ಧಿಸುತ್ತಿರುವುದು ನಿಜ. ಆದರೆ ಅದು ದೇವೇಗೌಡರ ಸುಪುತ್ರ, ಶಾಸಕ ಎಚ್ ಡಿ ರೇವಣ್ಣ ಅವರಲ್ಲ.
ಬದಲಿಗೆ ಚಿಕ್ಕಮಗಳೂರಿನ ಕೆಂಪನಹಳ್ಳಿಯ ದೊಡ್ಡೇಗೌಡರ ಪುತ್ರರಾಗಿರುವ ಎಚ್ ಡಿ ರೇವಣ್ಣ ಎಂಬುವವರು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎಚ್ ಡಿ ದೇವೇಗೌಡ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಇವರ ಪಕ್ಷ ಯಾವುದು ಅಂದರೆ ಕರುನಾಡು ಪಾರ್ಟಿ.
2009ರಲ್ಲಿಯೂ ಕಣಕ್ಕಿಳಿದಿದ್ದ ಈ ರೇವಣ್ಣ ಸುಮಾರು 15 ಸಾವಿರ ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆಗ ಕೆಡಿ ರೇವಣ್ಣ ಆಗಿದ್ದರು. ಕೆ ಅಂದ್ರೆ ಕೆಂಪನಹಳ್ಳಿ. ಡಿ ಅಂದ್ರೆ ದೊಡ್ಡೇಗೌಡ ಎಂಬುದು ರೇವಣ್ಣ ಹೆಸರಿನ ಹಿಂದಿದ್ದ ಇನ್ಶಿಯಲ್ಸ್ ವಿವರ. ಬದಲಾದ ಕಾಲಮಾನದಲ್ಲಿ ಕೆಡಿ ರೇವಣ್ಣ ಈ ಬಾರಿ ಎಚ್ ಡಿ ರೇವಣ್ಣ ಆಗಿಬಿಟ್ಟಿದ್ದಾರೆ. ಅಧಿಕೃತವಾಗಿ ಹೆಸರು ಬದಲಾಯಿಸಿಕೊಂಡು ಎಚ್ ಡಿ ರೇವಣ್ಣ ಆಗಿದ್ದಾರೆ - ಎಚ್ ಅಂದ್ರೆ ತಾತ ಹುಚ್ಚೇಗೌಡರ ಹೆಸರು ಮತ್ತು ಡಿ ಅಂದ್ರೆ ದೊಡ್ಡೇಗೌಡರ ಹೆಸರು ಎಂದು ಬದಲಾಯಿಸಿಕೊಂಡಿದ್ದಾರೆ.
ಅಂದ ಹಾಗೆ ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಪುತ್ರ ಎಚ್ ಡಿ ರೇವಣ್ಣ ಅವರು ತಮ್ಮ ತಂದೆಯ ಚುನಾವಣಾ ಪ್ರಚಾರದ ಉಸ್ತುವಾರಿಯನ್ನು ಹೊತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ರೇವಣ್ಣರು ಜಿಲ್ಲೆಯ ರಾಜಕಾರಣದಲ್ಲಿ ಬಲಿಷ್ಠ ಹಿಡಿತ ಹೊಂದಿದ್ದು, ಜನಪ್ರಿಯವಾಗಿದ್ದಾರೆ. ಇದೇ ಹಾಲಿ ಅಭ್ಯರ್ಥಿ ಎಚ್ ಡಿ ರೇವಣ್ಣ ಅವರ ಕಣ್ಣಿಗೆ ಬಿದ್ದಿರುವುದು. ಮಾಜಿ ಪ್ರಧಾನಿ ಪುತ್ರ ರೇವಣ್ಣ ಅವರ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಮತದಾರರನ್ನು ಗೊಂದಲಕ್ಕೆ ಸಿಲುಕಿಸಿ, ಎಷ್ಟು ಸಾಧ್ಯವೋ ಅಷ್ಟು ಮತ ಗಳಿಸುವ ದೂರದುದ್ದೇಶ ಕೆಡಿ ರೇವಣ್ಣ ಅಲ್ಲಲ್ಲ ಎಚ್ ಡಿ ರೇವಣ್ಣ ಅವರದ್ದಾಗಿದೆ.
ಸಾಮಾನ್ಯವಾಗಿ ಎಲ್ಲ ಚುನಾವಣೆಗಳಲ್ಲೂ ಇಂತಹ ವಿಚಿತ್ರ ಎದುರಾಳಿಗಳು ಕಾಣಸಿಗುತ್ತಾರೆ. ಅವುಗಳ ಹಿಂದೆ ರಾಜಕೀಯ ಉದ್ದೇಶವೂ ಇರುತ್ತದೆ. ಉದ್ದೇಶಪೂರ್ವಕವಾಗಿ ಪ್ರತಿಪಕ್ಷಗಳು ಕಣದಲ್ಲಿರುವ ಜನಪ್ರಿಯ ಬಲಾಢ್ಯ ಅಭ್ಯರ್ಥಿಗಳಿಗೆ ಇರುಸುಮುರುಸು ಉಂಟುಮಾಡಲು ಅವರದೇ ಹೆಸರಿನ ಅಭ್ಯರ್ಥಿಗಳನ್ನು ಹುಡುಕಾಡಿ ಹುಡಕಾಡಿ ತಂದು ನಿಲ್ಲಿಸುತ್ತಾರೆ. ಅವರೋ ಹರಕೆಯ ಕುರಿಯಾಗಿರುತ್ತಾರೆ. ಆದರೆ ಉಳಿದವರಿಗೆ ಬಿಟ್ಟಿ ಮನರಂಜನೆಯಾಗಿರುತ್ತದೆ.
ಈ ಬಾರಿ ಬಳ್ಳಾರಿಯಲ್ಲೇ ತೆಗೆದುಕೊಳ್ಳಿ. ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಬಿ ಶ್ರೀರಾಮುಲು ವಿರುದ್ಧ ಯಾರೆಲ್ಲಾ ಇಂತಹ ವಿಚಿತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ದುರ್ಬೀನು ಹಾಕಿಕೊಂಡು ನೋಡಿದಾಗ ಸಿ ಶ್ರೀರಾಮುಲು, ಸಿ ರಾಮುಲು, ಶ್ರೀರಾಮುಲು ಮುಂತಾದ ಕಾಂಬಿನೇಷನ್ ಗಳಲ್ಲಿ ಕಾಣಸಿಗುತ್ತಾರೆ. ಶುಭವಾಗಲಿ!