ರೈತರಿಗೆ 12ಕೋಟಿ ಮೋಸ: ಜೇವರ್ಗಿ ವ್ಯಾಪಾರಿ ಪರಾರಿ
ಬಿಎನ್ ಪಾಟೀಲ್ ಎಂಬ ವ್ಯಾಪಾರಿಯೇ ಈ ಕಥಾನಕದ ಕಳನಾಯಕ. ಈತ ದೇಶ ತೊರೆದಿರುವ ಸಾಧ್ಯತೆಯಿದೆ ಎಂದು ಗುಲ್ಬರ್ಗಾ ಪೊಲೀಸರು ಹೇಳುತ್ತಿದ್ದಾರೆ.
ಅಂಖಡೇಶ್ವರಿ ಸಗಟು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷರಾಗಿದ್ದ ಬಿಎನ್ ಪಾಟೀಲ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಏಪ್ರಿಲ್ 15ರಂದು. ಅಂದು ಸ್ಕಾರ್ಪಿಯೋ ವಾಹನದಲ್ಲಿ ಜೇವರ್ಗಿಯಿಂದ ಗುಲ್ಬರ್ಗಾಕ್ಕೆ ಬಂದಿದ್ದ ಪಾಟೀಲ್ ಸುಮಾರು 280 ಗ್ರಾಂ ತೂಕದ ಚಿನ್ನದ ಬಿಸ್ಕತ್ ಗಳನ್ನು ಖರೀದಿ ಮಾಡಿದ್ದಾರೆ. ಜತೆಗೆ ಆತನ ಬಳಿ 13 ಲಕ್ಷ ರೂ. ನಗದು ಹಣ ಇತ್ತು.
ಚುನಾವಣೆ ಸಂದರ್ಭವಾಗಿದ್ದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದೂ, ಕಾನೂನು ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬ ಅರಿವಿದ್ದರೂ ಅಷ್ಟೊಂದು ಚಿನ್ನ ಮತ್ತ ನಗದು ಹೊಂದಿದ್ದ ಪಾಟೀಲ್ ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅತ್ತ, ತಮ್ಮ ಸ್ಕಾರ್ಪಿಯೋದ ಚಾಲಕನನ್ನು ಊರಿಗೆ ವಾಪಸ್ ಕಳುಹಿಸಿದ್ದಾರೆ. ಆ ನಂತರವಷ್ಟೇ ಪಾಟೀಲ್ ನಾಪತ್ತೆ ಪ್ರಕರಣ ಬಿಚ್ಚಿಕೊಂಡಿದೆ. ಕೆಲವರು ಹೇಳುವಂತೆ ಪಾಟೀಲ್ ಅಂದು ಸಂಜೆ ಬೆಂಗಳೂರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರಂತೆ.
ಈ ಮಧ್ಯೆ, ಪಾಟೀಲ್ ಸೋದರರು ಏಪ್ರಿಲ್ 16ರಂದು ನಗರದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ತಮ್ಮ ಸೋದರ ಪಾಟೀಲ್ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಸುದ್ದಿ ಹಬ್ಬುತ್ತಿದ್ದಂತೆ ಪಾಟೀಲ್ ಜತೆ ವ್ಯವಹಾರ ಹೊಂದಿದ್ದ ರೈತರು/ ಬೆಳೆಗಾರರು ಆತಂಕಗೊಂಡು ಆತನನ್ನು ತಕ್ಷಣ ಪತ್ತೆ ಹಚ್ಚುವಂತೆ ಸ್ಥಳೀಯ ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ.
ಪಾಟೀಲ್ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ಪಾಟೀಲ್ ಕುಟುಂಬಸ್ಥರು ಪ್ರಕರಣದಲ್ಲಿ ಪೊಲೀಸರ ಜತೆ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಕೊನೆಗೆ ಒತ್ತಡ ಹೆಚ್ಚಾದಾಗ ಸೋದರರು ಪೊಲೀಸರ ಸಮ್ಮುಖದಲ್ಲಿ ಪಾಟೀಲ್ ಗೆ ಸೇರಿದ ಬ್ಯಾಂಕ್ ಲಾಕರ್ ಅನ್ನು ತೆರೆದು ನೋಡಿದಾಗ ಪಾಟೀಲ್ ಪಾಸ್ ಪೋರ್ಟ್ ಅಲ್ಲಿಂದ ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ. ಇದರಿಂದ ಪಾಟೀಲ್ ಪಾಸ್ ಪೋರ್ಟ್ ತೆಗೆದುಕೊಂಡು ಹೋಗಿದ್ದು, ದೇಶ ಬಿಟ್ಟಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಅಂದಹಾಗೆ ಕಾಣೆಯಾಗಿರುವ ಪಾಟೀಲ್, ಬೆಳೆಗಾರರಿಂದ ತೊಗರಿ ಬೇಳೆ ಮತ್ತು ಹತ್ತಿಯನ್ನು ಖರೀದಿ ಮಾಡಿ, ರಿಟೇಲ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು. ಆ ವೇಳೆ, ಬೆಳೆಗಾರರಿಗೆ ಚಿಕ್ಕ ಚೀಟಿಯಲ್ಲಿ ವ್ಯವಹಾರದ ಬಗ್ಗೆ ಬರೆದು ತಾವು ನೀಡಬೇಕಿರುವ ಮೊತ್ತವನ್ನು ನಮೂದಿಸಿ ಕೊಡುವ ಪರಿಪಾಠ ಬೆಳೆಸಿಕೊಂಡಿದ್ದರು. ಹೀಗೆ 200ಕ್ಕೂ ಹೆಚ್ಚು ರೈತರಿಗೆ ಪಾಟೀಲ್ 12 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಕೇಳಿಬಂದಿದೆ.