ಅಧಿಕೃತ: ಬಂಡೆಯನ್ನು ಸಾಯಿಸಿದ್ದು ಪೊಲೀಸ್ ಗುಂಡು
ಸಿಐಡಿ ವರದಿಯ ಪ್ರಕಾರ ಪೊಲೀಸ್ ಇಲಾಖೆಯ ಸರ್ವಿಸ್ ಪಿಸ್ತೂಲಿನಿಂದ ಹಾರಿದ ಗುಂಡು ಪಿಎಸ್ಸೈ ಮಲ್ಲಿಕಾರ್ಜುನ ಬಂಡೆಗೆ ತಗುಲಿ, ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದರರ್ಥ ಘಟನಾ ಸ್ಥಳದಲ್ಲಿ ಸರ್ವಿಸ್ ಪಿಸ್ತೂಲ್ ಹಿಡಿದು ನಿಂತಿದ್ದವರು ಮತ್ತೊಬ್ಬ ಪಿಎಸ್ಸೈ ಮುರುಳಿ. ಮುರುಳಿ ಅವರ ಕೈಯಲ್ಲಿದ್ದ 9 ಎಂಎಂ ಸರ್ವಿಸ್ ಪಿಸ್ತೂಲಿಂದ ಹಾರಿದ ಗುಂಡು ಬಂಡೆ ಹೊಕ್ಕು, ಅವರ ಸಾವಿಗೆ ಕಾರಣವಾಗಿದೆ. ಸಿಐಡಿ ಮುಖ್ಯಸ್ಥ ಬಿಪಿನ್ ಗೋಪಾಲಕೃಷ್ಣ ನೇತೃತ್ವದಲ್ಲಿ ಬಂಡೆ ಸಾವಿನ ಪ್ರಕರಣದ ತನಿಖೆ ನಡೆದಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ತಾವು ಈ ಹಿಂದೆ ಅನುಮಾನಿಸಿದ್ದಂತೆ ಇಲಾಖೆಯವರೇ ತಮ್ಮ ಪತಿಗೆ ಗುಂಡಿಟ್ಟಿ ಸಾಯಿಸಿದ್ದಾರೆ. ಹಾಗಾಗಿ ಪ್ರಕರಣದ ಬಗ್ಗೆ ಮತ್ತೊಮ್ಮೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
2014ರ ಜನವರಿ 8 ರಂದು ಖತರ್ನಾಕ್ ರೌಡಿ ಮುನ್ನಾ ದರಬದಾರ್ (Munna Darbadar) ವಿರುದ್ಧ ಸ್ಥಳೀಯ ಪೊಲೀಸ್ ತಂಡ ಕಾರ್ಯಾಚರಣೆಗೆ ತೆರಳಿತ್ತು. ತಂಡದಲ್ಲಿ ಬಂಡೆ ಜತೆಗೆ ಪಿಎಸ್ಸೈ ಮುರಳಿ ಅವರೂ ಸಹ ಇದ್ದರು. ಆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪಿಎಸ್ಸೈ ಮುರಳಿ ಅವರಿಂದ ಪಿಸ್ತೂಲು ಕಸಿದುಕೊಂಡ ಮುನ್ನಾ, ನೇರವಾಗಿ ಪಾಯಿಂಟ್ ಬ್ಲಾಂಕಿನಲ್ಲಿ ಬಂಡೆ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.