ಬ್ರಾಹ್ಮಣರ ವಿರುದ್ದ ದಲಿತರು ತಿರುಗಿ ಬೀಳಲಿದ್ದಾರೆ
ಬೆಂಗಳೂರು, ಜೂ 14: ಎಲ್ಲಾ ಜಾತಿ ವರ್ಗಗಳೂ ಸಮಾನತೆಯಿಂದ ಬದುಕುವ ದಿನ ಬರಬೇಕು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಮಾಜಕ್ಕಿದು ದುಷ್ಪರಿಣಾಮ ಬೀರಲಿದೆ. ಅಸ್ಪೃಶ್ಯತೆ ಹೀಗೇ ಮುಂದುವರಿದರೆ ದಲಿತರು ಬ್ರಾಹ್ಮಣರ ವಿರುದ್ದ ತಿರುಗಿ ಬೀಳಲಿದ್ದಾರೆಂದು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಎಚ್ಚರಿಕೆ ನೀಡಿದರು.
ನಗರದದ ಗಾಂಧಿ ಭವನದಲ್ಲಿ ಶನಿವಾರ (ಜೂ 14) ಹಮ್ಮಿಕೊಂಡಿದ್ದ ಮೈಲಾರ ಮಹದೇವ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ರಾಜ್ಯಪಾಲರು, ಸಮಾನತೆಯ ಸಮಾಜ ನಿರ್ಮಾಣ ಆಗಬೇಕೆನ್ನುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು ಕೂಡಾ ಆಗಿತ್ತು ಎಂದು ನುಡಿದರು.
ರಾಜ್ಯದಲ್ಲಿ ಧಾರ್ಮಿಕ ಮುಖಂಡರು ಮತ್ತು ಸ್ವಾಮೀಜಿಗಳಿಗೆ ಬರವಿಲ್ಲ. ಅಸ್ಪೃಶ್ಯತೆ ವಿರುದ್ದ ಇವರು ಧ್ವನಿ ಎತ್ತಿ ಸಮಾಜದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಸಹಕರಿಸಲಿ ಎಂದು ರಾಜ್ಯಪಾಲರು ಸಲಹೆ ನೀಡಿದರು. [ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!]
ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತೆಗೆ ನಿಷೇಧವಿದೆ. ಆದರೂ, ಅಲ್ಲಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇದರ ಆಚರಣೆಗಳು ನಡೆಯುತ್ತಲೇ ಬರುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಧಾರ್ಮಿಕ ಮುಖಂಡರ ಮತ್ತು ಮಠಾಧೀಶರ ಮಾತಿಗೆ ಹೆಚ್ಚಿನ ಒತ್ತು ಇರುತ್ತದೆ. ಸ್ವಾಮೀಜಿಗಳು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಯಾಕೆ ಮುಂದೆ ಬರಬಾರದೆಂದು ಭಾರದ್ವಾಜ್ ಪ್ರಶ್ನಿಸಿದರು.
ಜಾತಿರಹಿತ ಸಮಾಜ ನಿರ್ಮಾಣವಾಗಬೇಕೆನ್ನುವುದು ನನ್ನ ಕನಸು. ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕೆಂದು ರಾಜ್ಯಪಾಲರು ಕೇಳಿ ಕೊಂಡರು.
ಗಾಂಧೀಜಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು. ಇಲ್ಲದಿದ್ದರೆ ನಾವು ಇಂದಿಗೂ ಬ್ರಿಟಿಷರ ಗುಲಾಮಗಿರಿಯಲ್ಲಿ ಬದುಕಬೇಕಾಗಿತ್ತು. ದೇಶದಲ್ಲಿ ವರ್ಣಭೇದದ ಆಧಾರದ ಮೇಲೆ ವಿಭಾಗಿಸುವುದು ಸರಿಯಲ್ಲ.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದಲಿತರು ಬ್ರಾಹ್ಮಣರ ವಿರುದ್ದ ತಿರುಗಿ ಬೀಳುವ ದಿನ ದೂರವಿಲ್ಲ ಎಂದು ರಾಜ್ಯಪಾಲ ಭಾರದ್ವಾಜ್ ಎಚ್ಚರಿಸಿದರು.