ಸಿಎಂ ಸಿದ್ದರಾಮಯ್ಯ ಕಿವಿ ಹಿಂಡಿದ ರಾಜ್ಯಪಾಲರು!
ಬೆಂಗಳೂರು, ಮೇ 1 : ಸಿಎಂ ಸಿದ್ದರಾಮಯ್ಯ ಸರ್ಕಾರದ ಮೇಲೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರ ವಿದೇಶ ಪ್ರವಾಸ, ಉಮಾಶ್ರೀ ಪಿಎಚ್ ಡಿ ವಿವಾದ, ಸಚಿವರ ಕಾರ್ಯವೈಖರಿ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ಸಿಎಂ ಕಿವಿ ಹಿಂಡಿದ್ದಾರೆ. ರಾಜ್ಯಪಾಲರಿಂದ ಕಿವಿ ಹಿಂಡಿಸಿಕೊಂಡ ಸಿಎಂ ಇದೊಂದು ಸೌಹಾರ್ದಯುತ ಭೇಟಿ ಎಂದು ಹೇಳಿದ್ದಾರೆ.
ಗುರುವಾರ ಸಿಎಂ ಸಿದ್ದರಾಮಯ್ಯ ರಾಜಭವನಕ್ಕೆ ಭೇಟಿ ನೀಡಿದ್ದರು. ಭೇಟಿಯ ವೇಳೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ. ನಿಮ್ಮ ಸರ್ಕಾರದ ಕೆಲವು ಸಚಿವರು ಇನ್ನೂ ಚುನಾವಣೆ ಗೆದ್ದ ಸಂಭ್ರಮದಲ್ಲಿಯೇ ಇದ್ದಾರೆ, ಜನರ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. [ಅನಂತಮೂರ್ತಿ ಯಾರು ಎಂದ ರಾಜ್ಯಪಾಲರು]
ವಿಧಾನಪರಿಷತ್ ನಾಮನಿರ್ದೇಶನದ ಕುರಿತು ಮಾತುಕತೆ ನಡೆಸಿರುವ ಸಿಎಂಗೆ ರಾಜ್ಯಾಪಲರು ಯು.ಆರ್.ಅನಂತಮೂರ್ತಿ ಅವರನ್ನು ನಾಮನಿರ್ದೇಶನ ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯಪಾಲರ ವಿರುದ್ಧವೇ ವಾಗ್ದಾಳಿ ನಡೆಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತಮೂರ್ತಿ ಅವರನ್ನು ನಾಮನಿರ್ದೇಶನ ಮಾಡದಂತೆ ಸಲಹೆ ನೀಡಿದ್ದಾರೆ. ಸಿಎಂ, ರಾಜ್ಯಪಾಲರ ಭೇಟಿಯ ಪ್ರಮುಖ ಅಂಶಗಳು
ಸಚಿವರ ದುಂದು ವೆಚ್ಚದ ಬಗ್ಗೆ ಗರಂ
ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ರಸಾದ್ 2 ಕೋಟಿ ವೆಚ್ಚದಲ್ಲಿ ಸರ್ಕಾರಿ ಬಂಗಲೆ ನವೀಕರಣ ಮಾಡಿದ್ದು, ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ವಿಧಾನಸೌಧದ ತಮ್ಮ ಕೊಠಡಿ ನವೀಕರಣ ಮಾಡಿರುವುದು ಮುಂತಾದ ವಿಚಾರಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಪಾಲರು, ರಾಜ್ಯದಲ್ಲಿರುವ ಬರ ಪರಿಸ್ಥಿತಿ ಬಗ್ಗೆ ಗಮನಹರಿಸಿ ಎಂದು ಸೂಚಿಸಿದ್ದಾರೆ.
ಪಿಎಚ್ ಡಿ ವಿವಾದ
ನಿಮ್ಮ ಸಂಪುಟದ ಸಚಿವರೊಬ್ಬರು ಪಿಎಚ್ ಡಿ ಪದವಿ ಪಡೆಯಲು ವಿಶ್ವವಿದ್ಯಾಲಯದ ನಿಯಮಾವಳಿಗಳನ್ನು ಬದಲಿಸಲು ಮುಂದಾಗಿದ್ದಾರೆ ಎಂದು ಸಚಿವೆ ಉಮಾಶ್ರೀ ಕಾರ್ಯವೈಖರಿ ಬಗ್ಗೆ ಮಾತನಾಡಿದ ರಾಜ್ಯಪಾಲರು, ಸಚಿವರಾದ ಆರ್.ವಿ ದೇಶಪಾಂಡೆ ಮತ್ತು ಉಮಾಶ್ರೀ ಅವರ ಕಾರ್ಯವೈಖರಿಯನ್ನು ಸರಿಪಡಿಸುವಂತೆ ಸಲಹೆ ನೀಡಿದ್ದಾರೆ.
ಮತ್ತೇಕೆ ವಿದೇಶ ಪ್ರವಾಸ
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಶಾಸಕರು ಅಧ್ಯಯನದ ಹೆಸರಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳಬೇಕೆ ಎಂದು ಪ್ರಶ್ನಿಸಿದ ರಾಜ್ಯಪಾಲರು, ಹಿಂದೆ ಇದೇ ವಿಷಯದ ಬಗ್ಗೆ ನಾನು ನಿಮಗೆ ಹಲವಾರು ಸಲಹೆ ನೀಡಿದ್ದೆ. ಪುನಃ ಶಾಸಕರು ವಿದೇಶ ಪ್ರವಾಸ ಹೋಗುವ ಕುರಿತು ವಿವಾದವೆದ್ದಿದೆ. ಸರ್ಕಾರವನ್ನು ಪದೇ ಪದೇ ಏಕೆ ವಿವಾದಕ್ಕೆ ಸಿಲುಕಿಸುತ್ತೀರಿ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.
ಅಧಿಕಾರಿಗಳನ್ನು ನಿಯಂತ್ರಿಸಿ
ಐಎಎಸ್ ಅಧಿಕಾರಿಗಳ ವರ್ಗಾವಣೆ ವಿವಾದದ ಕುರಿತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಂಘರ್ಷ ಮಾಡಿಕೊಂಡಿದ್ದೀರಿ. ಅಧಿಕಾರಿಗಳ ಸಭೆ ಕರೆದು ಎಲ್ಲಾ ವಿಚಾರಗಳನ್ನು ಬಗೆರಿಸಿ, ಅಧಿಕಾರಿಗಳು ಜನರ ಕೆಲಸವನ್ನು ಮಾಡುವಂತೆ ಅವರನ್ನು ನಿಯಂತ್ರಣ ಮಾಡಿ ಎಂದು ಸಿಎಂಗೆ ಕಿವಿ ಹಿಂಡಿದ್ದಾರೆ.
ಅನಂತಮೂರ್ತಿ ದೂರವಿಡಿ
ವಿಧಾನಪರಿಷತ್ ನಾಮನಿರ್ದೇಶನದ ಕುರಿತು ಮಾತನಾಡಿರುವ ರಾಜ್ಯಪಾಲರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತಮೂರ್ತಿ ಅವರನ್ನು ನಾಮನಿರ್ದೇಶನ ಮಾಡದಂತೆ ಸಲಹೆ ನೀಡಿದ್ದಾರೆ.