ಕೆಲವರಿಗೆ ಜೈಲಿಗೆ ಹೋಗುವುದು ಫ್ಯಾಷನ್: ಅಣ್ಣಾ ಹಜಾರೆ
ಬೆಂಗಳೂರು, ಮೇ.26: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗುವುದು ದೇಶ ಭಕ್ತಿಯ ಸಂಕೇತವಾಗಿತ್ತು. ಆದರೆ ಈಗ ಕೆಲವರಿಗೆ ಜೈಲಿಗೆ ಹೋಗುವುದೇ ಒಂದು ಫ್ಯಾಷನ್ ಆಗಿದೆ ಎಂದು ಅಣ್ಣಾ ಹಜಾರೆ ಕೇಜ್ರಿವಾಲ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಅಸಲಿ ಆಜಾದಿ ಅಭಿಯಾನ ಕಾರ್ಯಕ್ರಮದ ಉದ್ಘಾಟನೆಗೂ ಮುನ್ನಾ ಮಾತನಾಡಿದ ಅಣ್ಣಾ ಹಜಾರೆಯಾವರು, ಕೇಜ್ರಿವಾಲ್ರ ಆಟಾಟೋಪದ ಕುರಿತಾಗಿ ನಾನು ಅವರಿಗೆ ಯಾವುದೇ ಸಲಹೆ ನೀಡುವುದಿಲ್ಲ. ಯಾಕೆಂದರೆ ಅವರು ಈಗ ನನ್ನ ವ್ಯಾಪ್ತಿಯಲ್ಲಿ ಇಲ್ಲ ಎಂದರು.
ನಿತಿನ್ ಗಡ್ಕರಿ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಬಿಡುಗಡೆ ಮಾಡಿ ಜಾಮೀನಿಗಾಗಿ ಠೇವಣಿ ಹಣ ನೀಡುವುದಿಲ್ಲ ಎನ್ನುವ ಕೇಜ್ರಿವಾಲ್ ಮೊಂಡುವಾದವನ್ನು ಒಪ್ಪಲು ಸಾಧ್ಯವಿಲ್ಲ. ಆರೋಪ ಮಾಡಿದವರು ನ್ಯಾಯಾಲಯದಲ್ಲಿ ಅಗತ್ಯವಾದ ಸ್ಯಾಕ್ಷ್ಯಾಧಾರಗಳನ್ನು ಸಲ್ಲಿಸಬೇಕು. ಅದನ್ನು ಬಿಟ್ಟು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವುದು ತಪ್ಪು ಎಂದು ಕೇಜ್ರಿವಾಲ್ ಬಗ್ಗೆ ಅಸಮಾಧನವನ್ನು ಅಣ್ಣಾ ಹಜಾರೆ ವ್ಯಕ್ತಪಡಿಸಿದರು.[ಜೂನ್ 6ರವರೆಗೆ ಕೇಜ್ರಿವಾಲ್ ಗೆ ನ್ಯಾಯಾಂಗ ಬಂಧನ]
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಮುಂದಾಗುತ್ತಿದ್ದಾರೆ, ಈ ಸನ್ನಿವೇಶದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ಅಣ್ಣಾ ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಉದ್ಯಮಿಗಳನ್ನು ಓಲೈಸುವ ದೃಷ್ಟಿಯಿಂದ ರೈತರ ಜಮೀನುಗಳಿಗೆ ಕೈ ಹಾಕಬೇಡಿ ಎಂದು ಅವರು ನಿಯೋಜಿತ ಪ್ರಧಾನಿ ನರೇಂದ್ರಮೋದಿಗೆ ಸಲಹೆ ನೀಡಿದರು.
ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಮಾತನಾಡಿ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಯಾವುದೇ ರಂಗದಲ್ಲಿ ವೈಯಕ್ತಿಕ ಮೌಲ್ಯಗಳು ಕುಸಿಯುತ್ತಿವೆ. ಒಂದು ಪ್ರಕರಣದ ವಿಚಾರಣೆಗೆ 20 ವರ್ಷಗಳು ತೆಗೆದುಕೊಳ್ಳುತ್ತದೆ. ಪ್ರಜಾಪ್ರಭುತ್ವ ಇಂದು ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಎನ್ನುವಂತಾಗಿದೆ ಎಂದು ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.