ಕೊನೆಯ ದಿನದ ಪ್ರಚಾರದಲ್ಲಿ ಮಾತಿನ ಮಲ್ಲಯುದ್ಧ
ಬೆಂಗಳೂರು, ಏ. 16 : ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬಿದ್ದಿದೆ. ಕೊನೆಯ ದಿನ ವಿವಿಧ ಪಕ್ಷದ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು. ತಮ್ಮ ಮಾತಿನ ಮೂಲಕ ಪ್ರತಿಪಕ್ಷದವರಿಗೆ ತಿರುಗೇಟು ನೀಡಿದರು. ಕೊನೆಯ ದಿನದ ಪ್ರಚಾರದಲ್ಲಿ ಕೇಳಿಬಂದ ಹೇಳಿಕೆಗಳು ಇಲ್ಲಿವೆ.
ಸಿಎಂ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣ, ಬಿಜೆಪಿ ನಾಯಕ ಆರ್.ಅಶೋಕ್, ಪವರ್ ಸ್ಟಾರ್ ಪವನ್ ಕಲ್ಯಾಣ್, ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಮುಂತಾದವರು ಕೊನೆಯ ದಿನದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಪ್ರಚಾರದ ನಡುವೆ ತಮ್ಮ ಹೇಳಿಕೆಗಳ ಮೂಲಕ ಪ್ರತಿಪಕ್ಷದವರನ್ನು ತಿವಿದರು ಅವುಗಳ ಒಂದು ಝಲಕ್ ಇಲ್ಲಿದೆ. [ಬಹಿರಂಗ ಪ್ರಚಾರಕ್ಕೆ ಬಿತ್ತು ತೆರೆ]
ದೇವೇಗೌಡರು ಮೈಸೂರಿಗೆ ಬರುತ್ತಿರಬೇಕು
"ಮೈಸೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಸೋತರೆ ತಾವು ಮೈಸೂರಿಗೆ ಬರುವುದಿಲ್ಲ" ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, "ಮೈಸೂರಿನಲ್ಲಿ ಜೆಡಿಎಸ್ ಸೋಲು ಖಚಿತ ಆದರೆ, ದೇವೇಗೌಡರು ಮೈಸೂರಿಗೆ ಬರುತ್ತಿರಬೇಕು, ನಿಲ್ಲಿಸಬಾರದು" ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಇದ್ದಕ್ಕಿದ್ದ ಹಾಗೆ ಮಾಯವಾಗುತ್ತಾರೆ
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಗುಡುಗಿದ್ದಾರೆ. "ಗಣರಾಜ್ಯೋತ್ಸವಕ್ಕೆ, ಸ್ವಾತಂತ್ರ್ಯೋವಕ್ಕೆ ಬರುವ ಪ್ರಧಾನಿ ನಂತರ ಇದ್ದಕ್ಕಿದ್ದಂತೆ ಮಾಯವಾಗಿ ಬಿಡುತ್ತಾರೆ" ಎಂದು ಹೇಳಿದ್ದಾರೆ.
ಸೋನಿಯಾಗೆ ಬಡತನದ ಬಗ್ಗೆ ಏನು ಗೊತ್ತು?
"ಸದಾ ಹವಾನಿಯಂತ್ರಿತ ಬಂಗಲೆಯಲ್ಲಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಬಡತನ, ಹಸಿವು, ಜನರ ಕಷ್ಟಗಳ ಬಗ್ಗೆ ಏನು ಗೊತ್ತು?" ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿಂದುತ್ವ ನೆನಪಾಗುತ್ತದೆ
"ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರಿಗೆ ಹಿಂದುತ್ವ ನೆನಪಾಗುತ್ತದೆ" ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ ಹಿಂದುತ್ವ ಮರೆತು ಹೋಗುತ್ತದೆ ಎಂದು ಅವರು ಕುಟುಕಿದ್ದಾರೆ.
ರಾಜಭವನದಲ್ಲಿ ತೀರ್ಪು ಬರೆಯಲಾಗಿತ್ತು
"ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ರಾಜಭವನದಲ್ಲಿ ತೀರ್ಪು ಬರೆಯಲಾಗಿತ್ತು" ಎಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಚಂದ್ರೇಗೌಡ ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.