ಗೌಡರ ಬಜೆಟಿಗೆ ಉಘೇ ಉಘೇ ಎಂದ ದೇವೇಗೌಡ್ರು
ನವದೆಹಲಿ, ಜು 16: ನಮ್ಮವರೊಬ್ಬರು ರೈಲ್ವೆ ಬಜೆಟ್ ಮಂಡಿಸಿದ್ದಾರೆ. ಅದರಲ್ಲೂ ಉತ್ತಮ ಬಜೆಟ್ ಮಂಡಿಸಿದ್ದಾರೆಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ , ರೈಲ್ವೆ ಸಚಿವ ಸದಾನಂದ ಗೌಡರ ಬೆನ್ನುತಟ್ಟಿದ್ದಾರೆ.
ಸೀಮಿತ ಪರಿಮಿಧಿಯಲ್ಲಿ ಸದಾನಂದ ಗೌಡ್ರು ಉತ್ತಮ ಬಜೆಟ್ ಮಂಡಿಸಿದ್ದಾರೆ. ರೈಲ್ವೆ ಇಲಾಖೆಯ ಸಂಪನ್ಮೂಲ ಕ್ರೋಢೀಕರಣಕ್ಕೆ ಪ್ರಯಾಣದ ದರ ಏರಿಕೆ ಅನಿವಾರ್ಯತೆಯಾಗಿತ್ತು ಎನ್ನುವುದನ್ನು ನಾನು ಅರಿತಿದ್ದೇನೆಂದು ದೇವೇಗೌಡ್ರು ಹೇಳಿದ್ದಾರೆ.
ನಷ್ಟದಲ್ಲಿರುವ ದೇಶದ ಪ್ರತಿಷ್ಠಿತ ರೈಲ್ವೆ ಇಲಾಖೆಯನ್ನು ಸರಿದಾರಿಗೆ ತರುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಸದಾನಂದ ಗೌಡ್ರು ದಿಟ್ಟ ಹೆಜ್ಜೆ ಇಟ್ಟಿದ್ದಾರೆಂದು ದೇವೇಗೌಡ್ರು ರೈಲ್ವೆ ಸಚಿವರ ಬೆನ್ನುತಟ್ಟಿದ್ದಾರೆ. (ಸದಾನಂದ ಗೌಡರ ಚೊಚ್ಚಲ ಬಜೆಟ್)
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ (ಜು 16) ಮಾತನಾಡುತ್ತಿದ್ದ ಗೌಡ್ರು, ರೈಲ್ವೆ ಇಲಾಖೆ ಸರಿಯಾದ ದಾರಿಯಲ್ಲಿ ಸಾಗದಿದ್ದರೆ ದೇಶದ ಜನಜೀವನ ಅಸ್ತವ್ಯಸ್ತವಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಈಶಾನ್ಯ ಭಾರತಕ್ಕೆ ಜನರು ತೆರಳಲೂ ಆಗುವುದಿಲ್ಲ ಎಂದು ರೈಲ್ವೆ ಸಂಪರ್ಕದ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ.
ಕಾವೇರಿ ನದಿನೀರು ಹಂಚಿಕೆಯ ತೀರ್ಪಿನ ವಿಚಾರಣೆಯ ಬಗ್ಗೆ ಗೌಡ್ರ ಅಭಿಪ್ರಾಯ, ಸ್ಲೈಡಿನಲ್ಲಿ...
ಸದಾನಂದ ಗೌಡರ ಸಮರ್ಥಿಸಿಕೊಂಡ ಗೌಡ್ರು
ವಿದೇಶಿ ನೇರ ಬಂಡವಾಳ (FDI) ಹೂಡಿಕೆಯನ್ನು ಸಮರ್ಥಿಸಿಕೊಂಡ ದೇವೇಗೌಡ್ರು, ಹಾಲಿ ಪರಿಸ್ಥಿತಿಯಲ್ಲಿ ಇಲಾಖೆಗೆ ಇದರ ತುರ್ತು ಅವಶ್ಯಕತೆಯಿದೆ. ಮೋದಿ ಸರಕಾರದ ಈ ನಡೆ ಸ್ವಾಗತಾರ್ಹ ಎಂದಿದ್ದಾರೆ.
ಇದೊಂದು ಉತ್ತಮ ಬಜೆಟ್
ಮುಂದಾಲೋಚನೆಯಿಂದ ಮಂಡಿಸಿದ ರೈಲ್ವೆ ಬಜೆಟ್ ಇದು. ಇಲಾಖೆಯ ಸಂಪನ್ಮೂಲ ಸಂಗ್ರಹಣೆಗೆ ಸದಾನಂದ ಗೌಡ್ರು ಮಹತ್ವ ನೀಡಿದ್ದು ಸರಕಾರದ ದೂರದೃಷ್ಟಿಯ ಸಂಕೇತ. ಇದೇ ರೀತಿಯಲ್ಲಿ ಸರಕಾರ ಮುಂದಿನ ದಿನದಲ್ಲಿ ಕೆಲಸ ಮಾಡಿಕೊಂಡು ಹೋಗುಲಿ ಎಂದು ಆಶಿಸುತ್ತೇನೆ -ದೇವೇಗೌಡ
ಆದಷ್ಟು ಬೇಗ ಹೊಸಮಾರ್ಗ ಕಾರ್ಯಾರಂಭವಾಗಲಿ
ರೈಲ್ವೆ ಬಜೆಟಿನಲ್ಲಿ ರಾಜ್ಯಕ್ಕೆ ಘೋಷಿಸಲಾದ ಹೊಸ ರೈಲು ಮಾರ್ಗ, ಮಾರ್ಗ ಪರಿವರ್ತನೆ ಮುಂತಾದವುಗಳು ಆದಷ್ಟು ಬೇಗ ಕಾರ್ಯುರೂಪಕ್ಕೆ ಬರಲಿ. ರಾಜ್ಯ ಸರಕಾರ ಕೂಡಾ ರೈಲ್ವೆ ಇಲಾಖೆ ಜೊತೆ ಸಹಕರಿಸಲಿ ಎಂದು ದೇವೇಗೌಡ ಹೇಳಿದ್ದಾರೆ.
ಕಾವೇರಿ ನದಿನೀರು ತೀರ್ಪಿನ ವಿಚಾರಣೆ
ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ರಾಜ್ಯದ ಹಿತಾಶಕ್ತಿ ನಮಗೆ ಮೊದಲ ಆದ್ಯತೆ. ಕಾವೇರಿ ನದಿ ನ್ಯಾಯಾಧೀಕರಣ ಸುಪ್ರೀಂಕೋರ್ಟಿನ ಅನುಮತಿ ಪಡೆಯುವಂತೆ ತಮಿಳುನಾಡಿಗೆ ಸೂಚಿಸಿದೆ. ಈ ಬಗ್ಗೆ ಅವಶ್ಯಕತೆ ಬಿದ್ದಲ್ಲಿ ನಮ್ಮ ರಾಜ್ಯದ ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತೇನೆ.
ನನ್ನ ಅಭಿಪ್ರಾಯವನ್ನು ಸಿಎಂಗೆ ತಿಳಿಸಿದ್ದೇನೆ
ಕಾವೇರಿ ವಿಚಾರದಲ್ಲಿ ನನ್ನ ಅಭಿಪ್ರಾಯ ಮತ್ತು ನಿಲುವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ಈಗಾಗಲೇ ತಿಳಿಸಿದ್ದೇನೆ. ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿದಾಗ ನಾವು ಯಾವು ರೀತಿ ಹೆಜ್ಜೆಯಿಡಬೇಕೆಂದು ತಿಳಿಸಿದ್ದೇನೆ - ದೇವೇಗೌಡ