ಕುಮಾರಸ್ವಾಮಿ ಶ್ರೀಲಂಕಾಗೆ, ದೇವೇಗೌಡ್ರು ಅಣೆಕಟ್ಟಿಗೆ
ಬೆಂಗಳೂರು, ಜೂ 16: ಪಕ್ಷ ಸಂಘಟನೆಯ ಹೆಸರಿನಲ್ಲಿ ಜೆಡಿಎಸ್ ಶಾಸಕರು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರೆ, ಮಾಜಿ ಪ್ರಧಾನಿ ಮತ್ತು ಸಂಸದ ಎಚ್ ಡಿ ದೇವೇಗೌಡ ರಾಜ್ಯದ ಅಣೆಕಟ್ಟುಗಳಿಗೆ ಸೋಮವಾರ (ಜೂ 16) ಭೇಟಿ ನೀಡಲಿದ್ದಾರೆ.
ಶಾಸಕ ಮತ್ತು ತನ್ನ ಬಲಗೈ ಭಂಟ ವೈ ಎಸ್ ವಿ ದತ್ತಾ ಜೊತೆ ಗೌಡ್ರು, ಕಾವೇರಿ ನದಿ ಪ್ರದೇಶದ ವಿವಿಧ ಜಲಾಶಯಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯ ಅವಲೋಕನ ಮಾಡಲಿದ್ದಾರೆ. ಹಾಗೆಯೇ, ವಸ್ತುಸ್ಥಿತಿಯನ್ನು ಸವಿವರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಲಿದ್ದಾರೆಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ ತೀವ್ರ ಚರ್ಚೆಯಲ್ಲಿರುವ ಈ ಸಂದರ್ಭದಲ್ಲಿ, ಮಂಡಳಿ ರಚನೆ ಮಾಡದಂತೆ ಪ್ರಧಾನಿಯವರಿಗೆ ದೇವೇಗೌಡ್ರು ಮನವಿ ಮಾಡಲಿದ್ದಾರೆಂದು ವರದಿಯಾಗಿದೆ. (ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವೆ)
ಕಬಿನಿ, ಹೇಮಾವತಿ, ಕೆ ಆರ್ ಎಸ್ ಸೇರಿದಂತೆ ಕಾವೇರಿ ನದಿ ಭಾಗದ ವಿವಿಧ ಜಲಾಶಯಗಳಿಗೆ ಜೆಡಿಎಸ್ ಮುಖಂಡರ ಜೊತೆ ಗೌಡ್ರು ಭೇಟಿ ನೀಡಲಿದ್ದಾರೆ ಹಾಗೂ ಆ ಪ್ರದೇಶಗಳ ರೈತರ ಸಮಸ್ಯೆಗಳನ್ನೂ ಆಲಿಸಲಿದ್ದಾರೆಂದು ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ.
ಇತ್ತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಮತ್ತು ಮುಖಂಡರು ಸೋಮವಾರ ನಸುಕಿನಲ್ಲಿ ಶ್ರೀಲಂಕಾಗೆ ಹಾರಿದ್ದಾರೆ. ಗುರುವಾರ ಜೂನ್ 19ರಂದು ನಗರಕ್ಕೆ ವಾಪಸಾಗುವ ಸಾಧ್ಯತೆಯಿದೆ. (ಕೊಲಂಬೋದಲ್ಲಿ ಜೆಡಿಎಸ್ ಸಭೆ: ಖರ್ಚು ಯಾರದ್ದು)
ಶಾಸಕರಾದ ಎಚ್ ಡಿ ರೇವಣ್ಣ, ವೈ ಎಸ್ ವಿ ದತ್ತಾ, ಮಂಜುನಾಥ್ ಗೌಡ ಸಹಿತ ನಾಲ್ಕೈದು ಮಂದಿ ಪ್ರವಾಸಕ್ಕೆ ತೆರಳುತ್ತಿಲ್ಲ. ಹಾಗೆಯೇ, ಮೇಲ್ಮನೆ ಚುನಾವಣೆಯಲ್ಲಿ ತೊಡಗಿಸಿ ಕೊಂಡಿರುವುದರಿಂದ ಪುಟ್ಟಣ್ಣ ಮತ್ತು ಬಸವರಾಜ್ ಹೊರಟ್ಟಿ ಕೂಡಾ ಪ್ರವಾಸಕ್ಕೆ ತೆರಳಲಿಲ್ಲ.