ರಾಜ್ಯಪಾಲರ ಜೊತೆ ಬಿಎಸ್ವೈ ಚರ್ಚೆ: ಡಿನೋಟಿಫಿಕೇಷನಾ?
ಬೆಂಗಳೂರು, ಸೆ 19: ನೂತನ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಬಿಜೆಪಿಯ ಹಿರಿಯ ಮುಖಂಡರು ಒಬ್ಬಬ್ಬರಾಗಿ ಭೇಟಿ ಮಾಡುತ್ತಿದ್ದಾರೆ. ಈಗ ಸರದಿ ಮಾಜಿ ಸಿಎಂ ಯಡಿಯೂರಪ್ಪನವರದ್ದು. ಬಿಎಸ್ವೈ, ರಾಜ್ಯಪಾಲರನ್ನು ಗುರುವಾರ (ಸೆ 18) ಭೇಟಿ ಮಾಡಿ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಡಿನೋಟಿಫಿಕೇಷನ್ ಆರೋಪ ಕೇಳಿ ಬರುತ್ತಿರುವ ಈ ಸಮಯದಲ್ಲಿ ಯಡಿಯೂರಪ್ಪನವರ ಈ ಭೇಟಿ ಭಾರೀ ಕುತೂಹಲಕ್ಕೀಡು ಮಾಡಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾಗಿದೆ.
ರಾಜಭವನದಲ್ಲಿ ಸುಮಾರು ನಲವತ್ತು ನಿಮಿಷ ರಾಜ್ಯಪಾಲರ ಜೊತೆ ಮಾತನಾಡಿದ ಯಡಿಯೂರಪ್ಪ, ಮಾತುಕತೆಯ ನಂತರ ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ ಎಂದು ಮಾಧ್ಯಮದವರಿಗೆ ಉತ್ತರಿಸಿ, ದೆಹಲಿ ವಿಮಾನ ಹತ್ತಿದ್ದಾರೆ. (ಕರ್ನಾಟಕಕ್ಕೆ ಇನ್ನು ವಜುಭಾಯ್ ವಾಲಾ ರಾಜ್ಯಪಾಲರು)
ರಾಜ್ಯಪಾಲರಾಗಿ ವಜುಭಾಯಿ ವಾಲಾ ಅಧಿಕಾರ ಸ್ವೀಕರಿಸಿದ ನಂತರ, ಅವರನ್ನು ಭೇಟಿಯಾಗಿರಲಿಲ್ಲ. ಇಂದು ದಿನ ನಿಗದಿಯಾಗಿತ್ತು. ರಾಜ್ಯ ಅಭಿವೃದ್ದಿಯ ವಿಚಾರದ ಜೊತೆಗೆ ಸಹಜವಾಗಿ ರಾಜ್ಯ ರಾಜಕೀಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಿತು ಎಂದು ಯಡಿಯೂರಪ್ಪ ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟಿದ್ದಾರೆ.
ಅರ್ಕಾವತಿ ಡಿನೋಟಿಫಿಕೇಷನ್
ಪ್ರಮುಖವಾಗಿ ಅರ್ಕಾವತಿ ಡಿನೋಟಿಫಿಕೇಷನ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ, ಸಿದ್ದರಾಮಯ್ಯ ಸರಕಾರದ ವಿರುದ್ದ ತಿರುಗಿಬೀಳಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಯಡಿಯೂರಪ್ಪ - ರಾಜ್ಯಪಾಲರ ಭೇಟಿ ಮಾಡಿ ಹಲವು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. (ಚಿತ್ರ: ಬಿಎಸ್ವೈ ಟ್ವಿಟರ್ ಪೇಜ್)
ಇಬ್ಬರು ಪ್ರಮುಖ ಬಿಜೆಪಿ ಮುಖಂಡರ ಭೇಟಿ
ಪ್ರಲ್ಹಾದ್ ಜೋಶಿ ಮತ್ತು ಮಾಜಿ ಸಿಎಂ ಶೆಟ್ಟರ್ ಅವರು ರಾಜ್ಯಪಾಲರನ್ನು ರಹಸ್ಯವಾಗಿ ಭೇಟಿಯಾಗಿದ್ದರು. ಹಿಂದಿನ ಬಿಜೆಪಿ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿ, ಅಸೆಂಬ್ಲಿ ಚುನಾವಣೆಯಲ್ಲಿ ಸೋಲೂ ಅನುಭವಿಸಿದ್ದ ಬಿಜೆಪಿ ಈಗ ಅದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ದ ತಿರುಗಿಬೀಳಲು ಸಜ್ಜಾಗುತ್ತಿದೆ.
ಪ್ರಕರಣ ದಾಖಲಿಸಲು ಅನುಮತಿ
ಸಿದ್ದರಾಮಯ್ಯನವರ ವಿರುದ್ದ ಅರ್ಕಾವತಿ ಡಿನೋಟಿಫಿಕೇಷನ್ ವಿಚಾರದಲ್ಲಿ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಅವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ರಾಜ್ಯಪಾಲರ ಅನುಮತಿ ಪಡೆಯಲು ಸಜ್ಜಾಗುತ್ತಿದೆ ಎನ್ನುವ ವಿಚಾರವೂ ಈಗ ಗುಪ್ತವಾಗಿ ಉಳಿದಿಲ್ಲ.
ಹೈಕಮಾಂಡಿಗೆ ದುಡ್ಡು ನೀಡಲು ಡಿನೋಟಿಫಿಕೇಶನ್
ಕಳೆದ ಸದನ ಕಲಾಪವನ್ನು ನುಂಗಿ ಹಾಕಿದ್ದ ಡಿನೋಟಿಫಿಕೇಷನ್ ವಿವಾದ ತಾರಕಕ್ಕೇರಿದ್ದಾಗ, ಲೋಕಸಭಾ ಚುನಾವಣೆಗೆ ಹೈಕಮಾಂಡಿಗೆ ದುಡ್ಡು ಹೊಂದಿಸಲು ಸಿದ್ದರಾಮಯ್ಯ ಈ ಅಕ್ರಮ ಎಸಗಿದ್ದಾರೆ. ಈ ಸಂಬಂಧ ಸಿಬಿಐ ತನಿಖೆಯಾಗಬೇಕೆಂದು ಬಿಜೆಪಿ ಒತ್ತಾಯಿಸಿತ್ತು. (ಚಿತ್ರ: ಪಿಟಿಐ)
ಸೊಪ್ಪುಹಾಕದ ಸಿದ್ದರಾಮಯ್ಯ ಸರಕಾರ
ಬಿಜೆಪಿ ಆರೋಪಕ್ಕೆ ತಿರುಗಿಬಿದ್ದಿದ್ದ ಸಿದ್ದು, ಮುಖ್ಯಮಂತ್ರಿಯಾಗಿದ್ದ ಶೆಟ್ಟರ್ ಡಿನೋಟಿಫಿಕೇಷನ್ ಹಗರಣದಲ್ಲಿ ನೇರವಾಗಿ ಶಾಮೀಲಾಗಿದ್ದರು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಮಾತೇ ಇಲ್ಲ, ಸದನ ಸಮಿತಿಯಿಂದ ತನಿಖೆ ನಡೆಸಲಾಗುವುದೆಂದು ಸಿದ್ದು ತಿರುಗೇಟು ನೀಡಿದ್ದರು. (ಚಿತ್ರ: ಪಿಟಿಐ)