ತೇಜಸ್ವಿನಿ ಅನಂತ ಕುಮಾರ್ ವಿರುದ್ಧ ಎಫ್ಐಆರ್
ಬಾಗಲಕೋಟೆ, ಸೆ. 10 : ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಸೇರಿದ 24.68 ಕೋಟಿ ರೂ. ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ವಿನಿ ಅನಂತ ಕುಮಾರ್ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸೆ.27ರಂದು ಈ ಪ್ರಕರಣದ ತನಿಖಾ ವರದಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ಬಾಗಲಕೋಟೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ನ್ಯಾಯಾಲಯ ನೀಡಿದ ಆದೇಶದಂತೆ ಬಾಗಲಕೋಟೆ ನಗರ ಪೊಲೀಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಪೊಲೀಸರು ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ.
ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ, ಸದಸ್ಯ ವೀರಣ್ಣ ಹಲಕುರ್ಕಿ, ಗೌರವ ಕಾರ್ಯದರ್ಶಿ ಮಹೇಶ್ ಅಥಣಿ, ಬೆಂಗಳೂರಿನ ನಾಲೆಡ್ಜ್ ಪಾರ್ಕ್ ಆಫ್ ಇಂಡಿಯಾದ ಟ್ರಸ್ಟಿಗಳಾದ ತೇಜಸ್ವಿನಿ ಅನಂತ ಕುಮಾರ್, ಜಿ.ಆರ್. ನಾರಾಯಣ ಮತ್ತು ಕೆ. ರಮೇಶ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. [ವೀರಣ್ಣ ಚರಂತಿಮಠ ಮನೆ ಮೇಲೆ ಐಟಿ ದಾಳಿ]
ಬಿವಿವಿಎಸ್ ಸಂಘದ ಆಜೀವ ಸದಸ್ಯರಾದ ಮಲ್ಲಣ್ಣ ಚೆನ್ನಪ್ಪ ಅವರು ದಾಖಲಿಸಿರುವ ಖಾಸಗಿ ದೂರನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು. ಅದರಂತೆ ಕಳೆದ ಜೂನ್ 5 ರಂದು ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಬಾಗಲಕೋಟೆ ನಗರ ಪೊಲೀಸರು ಜು. 19ರಂದು ಎಫ್ಐಆರ್ ದಾಖಲಿಸಿದ್ದಾರೆ. ತನಿಖಾ ವರದಿಯನ್ನು ಸೆ. 27ಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ಈ ಬಗ್ಗೆ ತಿಳಿದಿಲ್ಲ : ಎಫ್ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಅನಂತ ಕುಮಾರ್ ಪತ್ನಿ ತೇಜಸ್ವಿನಿ ಅವರು, "ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವ ಬಗ್ಗೆ ತಿಳಿದಿಲ್ಲ. ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಮ್ಮ ಟ್ರಸ್ಟ್ ಅನ್ನು ವಿಲೀನಗೊಳಿಸಿದ್ದೇವೆ. ಇದುವರೆಗೆ ನಾವು ನಡೆಸುತ್ತಿದ್ದ ಅಮೃತಾ ಕಾಲೇಜನ್ನು ಅವರು ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹಣಕಾಸಿನ ವ್ಯವಹಾರ ನಡೆದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.