ಮಕ್ಕಳ ಶುಲ್ಕ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡ ತಂದೆ
ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯನ್ನು ಆದಿಶಕ್ತಿ ನಗರದ ನಿವಾಸಿ ರುದ್ರೇಶ್ (35) ಎಂದು ಗುರುತಿಸಲಾಗಿದೆ. ಪೇಂಟರ್ ಕೆಲಸ ಮಾಡುತ್ತಿದ್ದ ರುದ್ರೇಶ್ ಗುರುವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರುದ್ರೇಶ್ ಬಡವನಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತನ್ನ ಇಬ್ಬರು ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಸೇರಿಸಿದ್ದ. ಮೂರು ಮತ್ತು ಆರನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರ ಮಕ್ಕಳ ಶುಲ್ಕವನ್ನು ಏಪ್ರಿಲ್ ಕೊನೆಯ ವಾರದಲ್ಲಿಯೇ ಕಟ್ಟಬೇಕಾಗಿತ್ತು.
ಆದರೆ, ಶಾಲೆಯ ಆಡಳಿತ ಮಂಡಳಿ ಬಳಿ ಮನವಿ ಮಾಡಿಕೊಂಡಿದ್ದ ರುದ್ರೇಶ್ ಕಾಲವಕಾಶ ನೀಡುವಂತೆ ಕೋರಿದ್ದರು. ಶಾಲೆಯೂ ನೀಡಿದ ಕಾಲಾವಕಾಶದಲ್ಲೂ ಹಣ ಹೊಂದಿಸುವುದು ರುದ್ರೇಶ್ ಅವರಿಗೆ ಕಷ್ಟವಾಗಿದೆ. ಇದರಿಂದ ಮನನೊಂದ ಅವರು, ಗುರುವಾರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗುರುವಾರ ರುದ್ರೇಶ್ ಪತ್ನಿ ತವರಿಗೆ ಹೋಗಿದ್ದರು. ಮಕ್ಕಳು ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬರೇ ಇದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರಿಚಿತರು, ಬಂಧುಗಳು ಎಲ್ಲರಿಂದಲೂ ರುದ್ರೇಶ್ ಸಹಾಯ ಕೇಳಿದ್ದರು. ಎಲ್ಲಿಯೂ ಹಣ ದೊರೆಯದ ಕಾರಣ ಸಾವಿಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂಟಿ ಮಹಿಳೆ ಕತ್ತು ಸೀಳಿ ಕೊಲೆ : ತೋಟದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯನ್ನು ಕತ್ತುಸೀಳಿ ಕೊಲೆ ಮಾಡಿರುವ ಘಟನೆ ಸಕಲೇಶಪುರದ ಬೈರಕೆರೆ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಚಂದ್ರಿಕಾ(27) ಎಂದು ಗುರುತಿಸಲಾಗಿದೆ. ಕಳೆದ ಒಂಭತ್ತು ತಿಂಗಳಿನಿಂದ ಈಕೆ ಧರ್ಮಪ್ಪ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ವಾಸಿಸುತ್ತಿದ್ದಳು.
ಮಹಿಳೆಯ ಸಂಬಂಧಿಕ ಎಂದು ಹೇಳಲಾಗುವ ರಘು ಎಂಬಾತ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆತ ಮೂಡಿಗೆರೆಯಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. ತೋಟದ ಮಾಲೀಕ ಧರ್ಮಪ್ಪ ಗುರುವಾರ ಬೆಳಗ್ಗೆ ಚಂದ್ರಿಕಾ ಅವರನ್ನು ಕೆಲಸಕ್ಕೆ ಕರೆಯಲು ಹೋದಾಗ ಕೊಲೆ ಆಗಿರುವುದು ತಿಳಿದುಬಂದಿದೆ. ಸಕಲೇಶಪುರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.