ಮತ್ತೊಂದು ಹೋರಾಟಕ್ಕೆ ಸಿದ್ಧವಿರುವ ದೇವೇಗೌಡ್ರ ಸಂದರ್ಶನ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಮತ್ತು ಹಾಸನ ಕ್ಷೇತ್ರದ ಹುರಿಯಾಳು ದೇವೇಗೌಡರ ಬೆಂಗಳೂರಿನ ಪದ್ಮನಾಭನಗರ ನಿವಾಸದ ಸುತ್ತಮುತ್ತ ಗುರುವಾರ (ಏ 3) ತೆರಳಿದಾಗ ಅಲ್ಲಿ ಚುನಾವಣೆಯ ಕಾವು ಇನ್ನೂ ಏರಿದಂತಿರಲಿಲ್ಲ, ನಿವಾಸದ ಸುತ್ತಮುತ್ತ ಕಾರ್ಯಕರ್ತರ ಜೈಘೋಷವೂ ಅಷ್ಟಾಗಿ ಕೇಳಿ ಬರುತ್ತಿರಲಿಲ್ಲ.
ಎಂಬತ್ತರ ಹೊಸ್ತಿಲಲ್ಲೂ ಸದಾ ರಾಜಕೀಯ ಚಟುವಟಿಕೆಯಲ್ಲಿ ತೊಡಗಿರುವ ದೇವೇಗೌಡ್ರು, ತನ್ನ ನಿವಾಸಕ್ಕೆ ಬಂದಿದ್ದ ಕೆಲವು ಮುಖಂಡರ ಜೊತೆ ಗಹನವಾದ ಚರ್ಚೆಯಲ್ಲಿ ತೊಡಗಿದ್ದರು.
ಬನ್ನಿ ಸ್ವಾಮೀ.. ಕಾಫಿ ಕುಡೀರಿ ಎಂದು 'ಒನ್ ಇಂಡಿಯಾ'ಗೆ ಎಚ್ ಡಿ ದೇವೇಗೌಡ್ರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಪ್ರ: ನಮಸ್ಕಾರ ಸರ್, ಜನಪ್ರತಿನಿಧಿಗಳ ಭಾಷಾ ಪ್ರಯೋಗ ಯಾಕೆ ಇಷ್ಟು ಕೀಳು ಮಟ್ಟಕ್ಕೆ ಇಳಿತಾ ಇದೆ?
ದೇವೇಗೌಡ: ನೋಡಿ, ನಾನು ಈ ವಿಷಯದಲ್ಲಿ ಯಾರಿಗೂ ಬುದ್ದಿ ಹೇಳಲು ಹೋಗುವುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟೀಯ ಪಕ್ಷಗಳು. ಕೇರಳದಲ್ಲಿ ಕಮ್ಯೂನಿಸ್ಟ್ ಜೊತೆ ಟೈ ಅಪ್ ಆಗಿರೋದು ಬಿಟ್ರೆ, ನಮ್ಮದು ರೀಜನಲ್ ಪಾರ್ಟಿ. ನನ್ನ ಅನುಭವದ ಮೇಲೆ ನನ್ನ ಪಕ್ಷದ ಪ್ರತೀ ನಾಯಕರಿಗೆ, ಸ್ಥಳೀಯ ಮುಖಂಡರಿಗೆ, ಕಾರ್ಯಕರ್ತರಿಗೆ ಕೀಳು ಶಬ್ದ ಬಳಸಬಾರದೆಂದು ಕಟ್ಟಪ್ಪಣೆ ಮಾಡಿದ್ದೀನಿ. ನಾವು ಚಿಕ್ಕವರಿದ್ದೇವೆ, ಬೇರೆಯವರು ಏನು ಮಾತನಾಡುತ್ತಾರೆ ಅದಕ್ಕೆ ಪ್ರತಿಕ್ರಿಯೆ ವ್ಯಕ್ತ ಪಡಿಸುವುದಿಲ್ಲ.
ತೃತೀಯ ರಂಗದ ಸ್ವಯಂಘೋಷಿತ ಪ್ರಧಾನಿ ಅಭ್ಯರ್ಥಿ ನೀವೇನಾ, ಮುಂದೆ ಓದಿ..
ಅಭ್ಯರ್ಥಿಗಳ ಕೊರತೆ ಇತ್ತಾ?
ಪ್ರ: ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆ ಇತ್ತಾ?
ದೇವೇಗೌಡ: ಇಷ್ಟು ವರ್ಷದಿಂದ ರಾಜಕೀಯ ಮಾಡ್ಕೊಂಡು ಬರ್ತಾ ಇದ್ದೀನಿ ಲೆಕ್ಕಾಚಾರ ತಪ್ಪಿದವನಲ್ಲ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ (ಎರಡು ಕ್ಷೇತ್ರ ಹೊರತು ಪಡಿಸಿ) ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪೂರ್ವಯೋಜನೆ ಸಿದ್ದವಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಮೂರು ತಲೆಮಾರಿನ ಇತಿಹಾಸವಿದೆ, 130 ವರ್ಷಗಳ ಹಿಂದಿನ ಪಕ್ಷ. ನೆಹರೂ, ಇಂದಿರಾ ಈಗ ಸೋನಿಯಾ. ಆದರೂ, ಕಾಂಗ್ರೆಸ್ ಮತ್ತು ಬಿಜೆಪಿ ಯಾಕೆ ಮೂರು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಿತು? ನಮಗೆ ಇಬ್ಬರೂ ಸೇರಿ ಪೆಟ್ಟು ಮೇಲೆ ಪೆಟ್ಟು ಕೊಟ್ಟಿದ್ದಾರೆ. ಈ ನನ್ನ ಅನುಭವದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮೋದಿ ಹೆಸರು ಈ ದೇಶದಲ್ಲಿ ಜಪವಾಗುತ್ತಿದೆಯಲ್ಲಾ Why?. ಅಷ್ಟಿದ್ದರೂ ಬಿಜೆಪಿ ಯಾಕೆ ಮೂರ್ನಾಲ್ಕು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಿತು? ಬಿಜೆಪಿ ಮತ್ತು ಕಾಂಗ್ರೆಸ್ ಬರೀ ಜಾಹೀರಾತಿಗೆ ಎಷ್ಟು ಖರ್ಚು ಮಾಡುತ್ತಿದ್ದಾರೆ. ನಾನು ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ನನಗೆ ಎಲ್ಲಾ ಗೊತ್ತಿದೆ. ಈಗ ನಿಂತಿರುವ ಅಭ್ಯರ್ಥಿಗಳು ಗೆಲ್ತಾರೋ, ಸೋಲ್ತಾರೋ ಪ್ರಭಲರಾಗಿದ್ದಾರೆ. ಎರಡೂ ರಾಷ್ಟೀಯ ಪಕ್ಷಗಳು ದೇವೇಗೌಡರನ್ನು ಮುಗಿಸ ಬೇಕೂಂತ ನನ್ನ ಜಾತಿ, ನಡವಳಿಕೆ ಬಗ್ಗೆ ಪ್ರಶ್ನೆ ಮಾಡುತ್ತಾ ಇದ್ದಾರೆ. I don't care.
ಕಾರವಾರದಲ್ಲಿ ಶಿವಾನಂದ ನಾಯ್ಕ್
ಪ್ರ: ನಾಮಪತ್ರ ಸಲ್ಲಿಸಿದ ನಂತರ ಕಾರವಾರದಲ್ಲಿ ಶಿವಾನಂದ ನಾಯ್ಕ್ ಯಾಕೆ ಕೈಕೊಟ್ರು?
ದೇವೇಗೌಡ: ಆಪರೇಷನ್ ಕಮಲ ಎಂದು ಶುರು ಮಾಡಿದ್ರು, ಈಗ ಆಪರೇಷನ್ ಕ್ಯಾಂಡಿಡೇಟ್ ಶುರು ಮಾಡಿದ್ದಾರೆ. ಇನ್ನು ಯಾರು ಆಪರೇಷನ್ ಕ್ಯಾಂಡಿಡೇಟ್ ಸಿಗುವುದಿಲ್ಲ. ನಮಗೆ ಎಲ್ಲಾ ಸೀಟಲ್ಲಿ ಹೋರಾಟ ಮಾಡಲು ಆಗುವುದಿಲ್ಲ. ಹದಿನೈದು ಸೀಟಲ್ಲಿ ಹೋರಾಟ ಮಾಡುತ್ತೇವೆ. ನಾನು, ಕುಮಾರಸ್ವಾಮಿ, ಕೃಷ್ಣಪ್ಪ ಸ್ವತಃ ಅಭ್ಯರ್ಥಿಗಳಾಗಿದ್ದೇವೆ. ಜಮೀರ್ ಸೇರಿ ನಾವು ನಾಲ್ಕೂ ಜನ ಏರಿಯಾ ಹಂಚಿಕೊಂಡು ಪ್ರಚಾರ ಮಾಡುತ್ತೇವೆ, ಪ್ರಭಲ ಹೋರಾಟ ನೀಡುವುದಂತೂ ಖಂಡಿತ.
ಎಷ್ಟು ಸೀಟು ಗೆಲ್ತೀರಾ?
ಪ್ರ: ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ರಾಜ್ಯದ ಎಷ್ಟು ಕ್ಷೇತ್ರಗಳ ಮೇಲಿವೆ?
ದೇವೇಗೌಡ: ಅದೇ ಹೇಳಿಲ್ವೇನ್ರೀ.. ಹದಿನೈದು ಸೀಟಲ್ಲಿ ಪ್ರಭಲ ಪೈಪೋಟಿ ನೀಡುತ್ತೇವೆ. ಹಣದಿಂದಲ್ಲ, ನಾವು ಹಿಂದೆ ಮಾಡಿರುವ ಅಭಿವೃದ್ದಿ ಕೆಲಸದಿಂದ. ನಮ್ಮಲ್ಲಿ ದುಡ್ಡಿಲ್ಲ, ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಹೇಳಿದ್ದಂತೆ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳು ಸಮರ್ಥರಿದ್ದಾರೆ. ಈಗ ಅಹಿಂದ ಅಂತಾ ಮಾತಾಡ್ತಾರೆ, ಏನ್ರೀ ಅಹಿಂದಾ? ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಶೇ. 33 ಮೀಸಲಾತಿ ನೀಡಿದ್ದು ಯಾರು? ನಮ್ಮ ಸರಕಾರ. 'Women empowerment is our first priority' ಅಂತಾರಲ್ಲಾ, ಇಂದಿರಾ ಮತ್ತು ಸೋನಿಯಾ ಗಾಂಧಿ ಎಷ್ಟು ವರ್ಷ ಈ ದೇಶವನ್ನು ಆಳಿದ್ರಲ್ಲಾ, ಏನು ಮಾಡಿದ್ರು?
ಮೂರನೇ ರಂಗ ಏನಾಯಿತು?
ಪ್ರ: ಕೇಂದ್ರದಲ್ಲಿ ಮೂರನೇ ರಂಗದ ಮಾತುಕತೆಗಳು ಯಾವ ಹಂತದಲ್ಲಿದೆ ? ತೃತೀಯ ರಂಗದ ಸ್ವಯಂಘೋಷಿತ ಪ್ರಧಾನಿ ಅಭ್ಯರ್ಥಿ ನೀವೇನಾ? ಭಿತ್ತಿಪತ್ರಗಳು ಎಲ್ಲೆಡೆ ರಾರಾಜಿಸುತ್ತಿವೆ.
ದೇವೇಗೌಡ : (ಪ್ರಶ್ನೆಗೆ ನೇರ ಉತ್ತರವಿಲ್ಲ ) ಈಗ ಮೋದಿ ಎರಡು ಕಡೆ ಯಾಕ್ರೀ ಸ್ಪರ್ಧೆಗೆ ನಿಂತ್ರು? experiment ಮಾಡೋಕಾ ಅಥವಾ ತನ್ನ ಪ್ರಭಾವನ್ನು ಉತ್ತರಪ್ರದೇಶದಲ್ಲಿ ತೋರಿಸಲಿಕ್ಕಾ? ಅಲ್ಲಿ ಮುರಳಿ ಮನೋಹರ್ ಜೋಶಿ, ರಾಜನಾಥ್ ಸಿಂಗ್ ಇಲ್ವಾ? ಮೋದಿ ಏನು ಅಭಿವೃದ್ದಿಯ ಹರಿಕಾರಾನ? ಹಿಂದೂಸ್ಥಾನದಲ್ಲಿ ಯಾರೂ ಮಾಡದ ಅಭಿವೃದ್ದಿ ಮಾಡಿದ್ದಾರಾ? ಪ್ರಧಾನಿ ಯಾಗಿದ್ದವನು ನಾನಿಲ್ಲಿ ಕೂತಿದ್ದೀನಿ. ಏನು ಮಾಡೋಕಾಗುತ್ತೆ, ಕಾರ್ಪೋರೇಟರ್ ಹೌಸ್, ಮಿಡಿಯಾಗಳು ಮೋದಿಯನ್ನು 'ವೋ' ಎಂದು ಪ್ರಾಜೆಕ್ಟ್ ಮಾಡ್ತಾ ಇದೆ. ಮೋದಿ ಏನು ಪ್ರಧಾನಿ ಆಗ್ಬಿಡ್ತಾರಾ? Who is done what it will be decided on the floor of the house, I will go there and fight.
ಸಿದ್ರಾಮಯ್ಯ ಸರಕಾರಕ್ಕೆ ಎಷ್ಟು ಮಾರ್ಕ್?
ಪ್ರ: ಹನ್ನೊಂದು ತಿಂಗಳ ಸಿದ್ದರಾಮಯ್ಯ ಸರಕಾರಕ್ಕೆ ಎಷ್ಟು ಮಾರ್ಕ್ ಕೊಡ್ತೀರಾ?
ದೇವೇಗೌಡ : ನಾನು ಯಾರ್ರೀ ಅವರಿಗೆ ಮಾರ್ಕ್ ಕೊಡೋಕೆ? ಅವರು ಕೊಟ್ಟಿರುವ ಭರವಸೆಗಳು, ಈಡೇರಿಸುತ್ತಿರುವ ಭರವಸೆಗಳು. ಯಾವ ಯಾವ ಕ್ಷೇತ್ರಗಳಿಗೆ ಏನು ಮಾಡಿದ್ದಾರೆ. ಪ್ರತೀ ಅಸೆಂಬ್ಲಿ ಕ್ಷೇತ್ರಕ್ಕೆ ಯಾಕ್ರೀ ಅವರು ಹೋಗಬೇಕು. ಪ್ರತೀ ಕ್ಷೇತ್ರಕ್ಕೆ ಹೋಗಿ ರಭಸವಾಗಿ ಭಾಷಣ ಮಾಡಿದ್ರೆ ಅಭಿವೃದ್ದಿ ಆಗುತ್ತಾ? INCನಲ್ಲಿ ನನ್ನ ಪಕ್ಷದಿಂದ ಸೆಳೆದುಕೊಂಡ ಒಬ್ಬ ಲೀಡರ್ ಕಾಂಗ್ರೆಸ್ ಮ್ಯಾನ್ ಆಗಿಬಿಡ್ತಾನೆ.
ಪಜ್ವಲ್, ನಿಖಿಲ್ ಭವಿಷ್ಯ?
ಪ್ರ: ಒಂದು ವೇಳೆ NDAಗೆ ಕೇಂದ್ರದಲ್ಲಿ ಅಧಿಕಾರ ರಚಿಸಲು ಸೀಟಿನ ಕೊರತೆ ಬಿದ್ದರೆ, ಸರಕಾರ ರಚಿಸಲು ಜೆಡಿಎಸ್ ಬೆಂಬಲ ನೀಡುತ್ತಾ?
ದೇವೇಗೌಡ : Go to next question..
ಪ್ರ: ಪ್ರಜ್ವಲ್ ಮತ್ತು ನಿಖಿಲ್ ಗೌಡ ಅವರ ರಾಜಕೀಯ ಭವಿಷ್ಯದ ಬಗ್ಗೆ?
ದೇವೇಗೌಡ: ನಮ್ಮಪ್ಪ ರೈತ. ನಾನು ರಾಜಕೀಯದಲ್ಲಿ ಭವಿಷ್ಯ ಕಂಡಿದ್ನಾ. ಪ್ಲೀಸ್..ನಾನೇನು ಜ್ಯೋತಿಷಿನಾ ಅವರ ಭವಿಷ್ಯ ರೂಪಿಸಲು. ಅವರವರ ಹಣೆಬರಹದಲ್ಲಿ ಏನೇನು ಆಗುತ್ತಾ ಅದಾಗ್ಲಿ. I am least interested in this matter.