ಸಿಎಂ ಸಿದ್ದರಾಮಯ್ಯಗೆ ರೇಣುಕಾಚಾರ್ಯ ಬಹುಪರಾಕ್!
ದಾವಣಗೆರೆ, ಏ.23: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೂತಿ-ಮುಖ ನೋಡದೆ ಪರಸ್ಪರ ಕೆಸರೆರೆಚಾಟದಲ್ಲಿ ತಲ್ಲೀನರಾಗಿದ್ದ ರಾಜಕಾರಣಿಗಳು ಈಗ ತಣ್ಣಗಾದವರಂತೆ ಕಾಣುತ್ತಿದ್ದಾರೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪರಮಾಪ್ತ, ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಹಾಲಿ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರನ್ನು ಬಾಯ್ತುಂಬಾ ಹೊಗಳಿದ್ದಾರೆ.
ಗುಣಕ್ಕೆ
ಮತ್ಸರವೇ!?:
ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು 'ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ವ್ಯಕ್ತಿ. 8 ಬಾರಿ ಬಜೆಟ್ ಮಂಡಿಸಿದ್ದಾರೆ. 2 ಬಾರಿ ಉಪಮುಖ್ಯಮಂತ್ರಿಯಾಗಿ, ಈಗ ಮುಖ್ಯಮಂತ್ರಿಯಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ' ಎಂದು ವಾಚಾಮಗೋಚರ ಸಿದ್ದುರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ಸುದ್ದಿಗೋಷ್ಠಿ ಆರಂಭದಿಂದಲೂ ಸಿದ್ದರಾಮಯ್ಯ ಅವರನ್ನು ಒಂದೇ ಸಮನೆ ಹೊಗಳಿದ್ದನ್ನು ಕೇಳಿಸಿಕೊಂಡ ಪತ್ರಕರ್ತರಿಗೆ ರೇಣುಕಾಚಾರ್ಯರ ನಡೆ ನುಡಿಯ ಬಗ್ಗೆ ಸಂಶಯ ಬಂದು ಏನ್ಸಾರ್ ಕಾಂಗ್ರೆಸ್ ಸೇರಿಕೊಳ್ಳುವ ಪ್ರೋಗ್ರಾಂ ಏನಾದರೂ ಇಟ್ಕೊಂಡಿದ್ದೀರಾ' ಎಂದು ಕೇಳೇಬಿಟ್ಟರು.
ಅದಕ್ಕೆ ನಗೆಯಾಡುತ್ತಾ ಅಡ್ಡಡ್ಡ ತಲೆಯಾಡಿಸಿದ ರೇಣುಕಾಚಾರ್ಯರು ಗುಣಕ್ಕೆ ಮತ್ಸರವೇಕೆ? ಸಿದ್ದರಾಮಯ್ಯ ಅವರು ಸ್ವಯಂ ತಮ್ಮ ಜನಪ್ರಿಯತೆಯಿಂದ ಮುಖ್ಯಮಂತ್ರಿಯಾಗಿದ್ದಾರೆಯೇ ಹೊರತು ಕಾಂಗೈ ಹೈಕಮಾಂಡಿನ ಕೃಪಾಕಟಾಕ್ಷದಿಂದ ಅಲ್ಲ ಎಂದು ಒಂದು ರೌಂಡ್ ಕಾಂಗ್ರೆಸ್ ಪಕ್ಷವನ್ನು ಝಾಡಿಸಿದರು.
'ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಸಿದ್ದರಾಮಯ್ಯ ಅವರ ಪದತ್ಯಾಗ ಖಚಿತ. ಆದರೆ ಅವರು ಸುಮ್ಮನೆ ಕೂರುವುದಿಲ್ಲ. ತಮ್ಮ ಬೆಂಬಲಿಗ ಶಾಸಕರೊಂದಿಗೆ ಕಾಂಗ್ರೆಸ್ಸಿನಿಂದ ಹೊರಬರಲಿದ್ದಾರೆ' ಎಂದು ಅವರು ಭವಿಷ್ಯ ನುಡಿದರು.
ಅನಂತರ ಸ್ಪಷ್ಟನೆಯ ರೂಪದಲ್ಲಿ ಸ್ವತಃ ಅವರೇ 'ಬಿಎಸ್ ಯಡಿಯೂರಪ್ಪನವರೇ ನಮ್ಮ ನಾಯಕರು. ನಾನು ಅವರ ಆಪ್ತ. ಬಿಜೆಪಿಯಲ್ಲೇ ಇರುತ್ತೇನೆ' ಎಂದೂ ಘೋಷಿಸಿದರು.
ಮುಂದುವರಿದು ಮಾತನಾಡಿದ ಅವರು 'ನೋಡಿ, ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸದೆ ಕಾಂಗ್ರೆಸ್ ಹೈಕಮಾಂಡ್ ಸಮನ್ವಯ ಸಮಿತಿ ರಚಿಸಿ ಅವರಿಗೆ ಮೂಗುದಾರ ಹಾಕಿದೆ. ಈ ಮೂಲಕ ಇನ್ನೂ ಉತ್ತಮ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಬ್ರೇಕ್ ಹಾಕಿದೆ' ಎಂದು ಟೀಕಿಸಿದರು.