ವಿದ್ಯುತ್ ಬಳಕೆ ಬಗ್ಗೆ ಲೆಕ್ಕ ಪರಿಶೋಧನೆ : ಸಿಎಂ
ಬೆಂಗಳೂರು, ಜು. 21 : "ಕರ್ನಾಟಕದಲ್ಲಿ ಇಂಧನ ಇಲಾಖೆ ಅಸ್ತಿತ್ವಕ್ಕೆ ಬಂದ ನಂತರ ಇದುವರೆಗೆ ವಿದ್ಯುತ್ ಬಳಕೆ ಪ್ರಮಾಣವನ್ನು ಲೆಕ್ಕ ಹಾಕಿಲ್ಲ. ಆದ್ದರಿಂದ, ಸರ್ಕಾರ ವಿದ್ಯುತ್ ಬಳಕೆ ಲೆಕ್ಕ ಪರಿಶೋಧನೆ ನಡೆಸಿ ವಿದ್ಯುತ್ ಸೋರಿಕೆ ಬಗ್ಗೆ ಮಾಹಿತಿ ಸಂಗ್ರಹಿಲಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ 45ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಭಾನುವಾರ ಸಂಜೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಕೆಪಿಸಿಎಲ್ ಹಾಗೂ ಕೆಪಿಟಿಸಿಎಲ್ ಅಧಿಕಾರಿ ಮತ್ತು ಸಿಬ್ಬಂದಿಯವರು ಅತ್ಯಂತ ಶ್ರಮ ವಹಿಸಬೇಕೆಂದು ಎಂದು ಕರೆ ನೀಡಿದರು.
ವಿದ್ಯುತ್ ಇಲಾಖೆ ಅಸ್ತಿತ್ವಕ್ಕೆ ಬಂದ ನಂತರ ಇಂದಿನವರೆಗೂ Energy Audit ನಡೆಸಿಲ್ಲ. ಇದು ಹೀಗೆ ಮುಂದುವರೆದರೆ ವಿದ್ಯುತ್ ಸೋರಿಕೆ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ. ಕುಟೀರ, ಭಾಗ್ಯಜ್ಯೋತಿ, ಕೈಗಾರಿಕೆಗಳು, ರೈತರ ಪಂಪ್ಸೆಟ್ ಹಾಗೂ ಮನೆಗಳಿಗೆ ಎಷ್ಟು ವಿದ್ಯುತ್ ಬಳಸಲಾಗುತ್ತದೆ ಎಂಬ ನಿಖರ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿತ್ರಗಳಲ್ಲಿ ನೋಡಿ ಸಮಾರಂಭ
ಸ್ವಂತ ಸಾಮರ್ಥ್ಯದಿಂದ ವಿದ್ಯುತ್ ಉತ್ಪಾದನೆ
ಕರ್ನಾಟಕದಲ್ಲಿ 6449 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಆಗುತ್ತಿದ್ದರೂ ಜನರ ಬೇಡಿಕೆಗನುಗುಣವಾಗಿ ಪೂರೈಸಲು ಆಗುತ್ತಿಲ್ಲ. ಆದ್ದರಿಂ ವಿದ್ಯುತ್ ಖರೀದಿ ಅಗತ್ಯವಾಗಿದೆ. ವಿದ್ಯುತ್ ಖರೀದಿ ಮಾಡದೆ ನಮ್ಮಲ್ಲಿರುವ ಜಲ, ಥರ್ಮಲ್ ಉಪಯೋಗಿಸಿ ಸ್ವಂತ ಸಾಮರ್ಥ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಸಿದ್ದರಾಮಯ್ಯ ಹೇಳಿದರು.
ಇಂಧನ ಸಚಿವರಿಗೆ ಸಲಹೆ
ಕೈಗಾರಿಕೆ, ಕೃಷಿ ಅಗತ್ಯಗಳಿಗೆ ಮತ್ತು ಖಾಸಗಿಯವರಿಗೆ ಎಷ್ಟು ವಿದ್ಯುತ್ ಪೂರೈಸಲಾಗುತ್ತಿದೆ ಎಂಬ ಬಗ್ಗೆ ಲೆಕ್ಕ ಇಡಬೇಕು. ವಿದ್ಯುತ್ ಸೋರಿಕೆ ಪತ್ತೆಗೆ ಇದು ನೆರವಾಗುತ್ತದೆ ಎಂದು ಹೇಳಿದ ಮುಖ್ಯಮಂತ್ರಿಗಳು, ಬೆಸ್ಕಾಂ ಹೊರತುಪಡಿಸಿ ವಿವಿಧ ವಿದ್ಯುತ್ ಕಂಪೆನಿಗಳಲ್ಲಿ ಶೇ 21 ರಿಂದ 22ರಷ್ಟು ವಿದ್ಯುತ್ ಸೋರಿಕೆ ಆಗುತ್ತಿದೆ ಇದರ ಬಗ್ಗೆ ಗಮನಹರಿಸುವಂತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸಲಹೆ ನೀಡಿದರು.
ವಿದ್ಯುತ್ ಘಟಕ ತೆರೆಯಲು ಅವಕಾಶ ಸಿಗುತ್ತಿಲ್ಲ
ರಾಜ್ಯದಲ್ಲಿ ವಿದ್ಯುತ್ ಘಟಕಗಳನ್ನು ತೆರೆಯಲು ಜಲ, ನೆಲದ ಸಮಸ್ಯೆಯಿದ್ದು, ಗಲಾಟೆಗಳು ನಡೆಯುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನಮಗೆ ವಿದ್ಯುತ್ ಘಟಕಗಳ ಸ್ಥಾಪನೆಗೆ ಅವಕಾಶ ದೊರೆಯದಂತಾಗುತ್ತದೆ. ಬೇಡಿಕೆಗನುಗುನವಾಗಿ ವಿದ್ಯುತ್ ಉತ್ಪಾದಿಸುವ ಗುರುತರವಾದ ಜವಾಬ್ದಾರಿಯಿದ್ದು, ಅದನ್ನು ಪೂರೈಸುವಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯವಶ್ಯವಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಲಾರ್ ಪವರ್ ಉತ್ಪಾದನೆ
ನಮ್ಮ ವಿದ್ಯುತ್ ನಿಗಮಗಳಿಗೆ ಸಿಇಓ ಗಳ ನೇಮಕ ಮಾಡುವುದರ ಮೂಲಕ ಬಿಸಿನೆಸ್ ಮಾಡೆಲ್ ತರಹ ಕೆಲಸ ನಿರ್ವಹಿಸಿ ಎಲ್ಲಾ ನಿಗಮಗಳನ್ನು ನಷ್ಟದಿಂದ ಹೊರ ತರುವ ಚಿಂತನೆ ನಡೆದಿದೆ ಎಂದು ಹೇಳಿದ ಡಿ.ಕೆ.ಶಿವಕುಮಾರ್, ಈ ವರ್ಷ ಸೋಲಾರ್ ಪಾಲಿಸಿಯಡಿ 1000 ಮೆ.ವ್ಯಾ. ಸೋಲಾರ್ ಪವರ್ ಉತ್ಪಾದಿಸುವುದು ಮುಖ್ಯಮಂತ್ರಿಗಳು ಬಯಕೆಯಿದ್ದು, ಅದನ್ನು ಈಡೇರಿಸಲು ಶ್ರಮಿಸಲಾಗುವುದು ಎಂದರು.
ಸ್ಥಾವರ ಸ್ಥಾಪಿಸಲು ಸ್ಥಳ ದೊರೆಯುತ್ತಿಲ್ಲ
ಬೆಂಗಳೂರು ನಗರದ ಸಮೀಪ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪಿಸಲು ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ರಾಜಧಾನಿಯ 150 ಕಿ.ಮೀ ವ್ಯಾಪ್ತಿಯಲ್ಲಿ ಸ್ಥಾವರ ಸ್ಥಾಪಿಸುವ ಯೋಚನೆ ನಮ್ಮದು. ಆದರೆ ಪಶ್ಚಿಮ ಘಟ್ಟದ ಕುರಿತು ಡಾ.ಕೆ. ಕಸ್ತೂರಿ ರಂಗನ್ ಸಮಿತಿ ವರದಿಯ ಪ್ರಕಾರ ಇಲ್ಲೆಲ್ಲೂ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದರು.
ಸೇವೆ ಸಲ್ಲಿಸಿದವರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ನಿಗಮದ ಸಹಾಯಕ ಪ್ರಧಾನ ಪ್ರಬಂಧಕರಾದ ಹುಚ್ಚಮಾಸ್ತಿಗೌಡ, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಿತೇಶ್ ಕುಮಾರ್ ಸಿಂಗ್ ಮುಂತಾದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಿಗಮದಲ್ಲಿ 25 ವರ್ಷದಿಂದ ಸೇವೆ ಸಲ್ಲಿಸಿದ ಉದ್ಯೋಗಿಗಳನ್ನು ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನೌಕರರ ಮಕ್ಕಳನ್ನು ಸನ್ಮಾನಿಸಲಾಯಿತು.