ಬೆಂಗಳೂರು ಮತದಾರರನ್ನು ಎಬ್ಬಿಸಲು ಬೀದಿನಾಟಕ
ಬೆಂಗಳೂರು, ಏ.8 : ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆ ಚುನಾವಣಾ ಆಯೋಗವು ಮತದಾರರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಗ ನಡೆಸುತ್ತಿರುವ ಬೀದಿ ನಾಟಕ ಕಲಾ ಜಾಥಾಕ್ಕೆ ಸೋಮವಾರ ಚಾಲನೆ ಸಿಕ್ಕಿದೆ.
ಮತದಾರರ ಜಾಗೃತಿಗಾಗಿ ಚುನಾವಣಾ ಆಯೋಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಬೀದಿ ನಾಟಕ ಕಲಾ ಜಾಥಾಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಸೋಮವಾರ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್ ಕುಮಾರ್ ಝಾ, "ಯಾವುದೇ ಆಮಿಷಕ್ಕೆ ಬಲಿಯಾಗದೆ ಮತಗಟ್ಟೆಗೆ ಬಂದು ನಿರ್ಭೀತರಾಗಿ ಮತದಾನ ಮಾಡುವಂತೆ ಜನರಿಗೆ ಅರಿವು ಮೂಡಿಸಬೇಕು" ಎಂದು ಕಲಾ ತಂಡಗಳಿಗೆ ಮನವಿ ಮಾಡಿದರು. ಚಿತ್ರಗಳಲ್ಲಿ ನೋಡಿ ಕಲಾತಂಡಗಳ ಜಾಥಾ
ಮತದಾನದ ಅರಿವು ಮೂಡಿಸಲು ಜಾಥಾ
ಏ.17ರಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯುವುದರಿಂದ ಜನರಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಕಲಾ ತಂಡಗಳ ಮೂಲಕ ಜಾಥಾವನ್ನು ನಡೆಸುತ್ತಿದೆ.
ಸೋಮವಾರ ಜಾಥಾಕ್ಕೆ ಚಾಲನೆ
ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂಭಾಗದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಸೋಮವಾರ ಕಲಾ ತಂಡಗಳ ಜಾಥಾಕ್ಕೆ ಚಾಲನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಥ್
ಚುನಾವಣಾ ಆಯೋಗದ ಈ ಅರಿವು ಮೂಡಿಸುವ ಪ್ರಯತ್ನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈ ಜೋಡಿಸಿದ್ದು, ಆಯೋಗದೊಂದಿಗೆ ಸೇರಿ ಕಲಾ ತಂಡಗಳ ಜಾಥಾ ನಡೆಸುತ್ತಿದೆ. ಜಾಥಾದ ಮೂಲಕ ಯಾವುದೇ ಆಮಿಷಕ್ಕೆ ಬಲಿಯಾಗದೆ ಮತಗಟ್ಟೆಗೆ ಬಂದು ನಿರ್ಭೀತರಾಗಿ ಮತದಾನ ಮಾಡುವಂತೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ.
35 ಕಲಾತಂಡಗಳು
35 ಕಲಾ ತಂಡಗಳು ಪ್ರತಿದಿನ 5 ಪ್ರದರ್ಶನಗಳಂತೆ ಏಪ್ರಿಲ್ 15ದರವರೆಗೆ ಒಟ್ಟು 1150 ಪ್ರದರ್ಶನಗಳನ್ನು ನಡೆಸಲಿದ್ದು, ಜನರಲ್ಲಿ ಜಾಗೃತಿ ಮೂಡಿಸಲಿವೆ. ಇದಕ್ಕಾಗಿ 35 ಲಕ್ಷವನ್ನು ವೆಚ್ಚ ಮಾಡಲಾಗುತ್ತಿದೆ. ಕಲಾ ತಂಡಗಳಿಗೆ ತರಬೇತಿ ನೀಡಲು 6 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ.
ಅಧಿಕಾರಿಗಳು ಪಾಲ್ಗೊಂಡಿದ್ದರು
ಕಲಾ ತಂಡಗಳ ಜಾಥಾಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ, ವಿಶೇಷಾಧಿಕಾರಿ (ತಾಂತ್ರಿಕ) ರಮೇಶ್, ವಿಶೇಷಾಧಿಕಾರಿ ಕೆ.ಎಸ್. ಬೇವಿನಮರದ ಹಾಗೂ ವಿಶೇಷಾಧಿಕಾರಿ (ತರಬೇತಿ) ರಾಘವೇಂದ್ರ ಮುಂತಾದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮತದಾನದ ಪ್ರಮಾಣ
ಬೆಂಗಳೂರಿಗರು ಮತ ಹಾಕಲು ಬರುವುದಿಲ್ಲ ಎಂಬ ಆರೋಪಗಳು ಹಿಂದಿನಿಂದಲೂ ಇವೆ. 2009ರ ಚುನಾವಣೆಯಲ್ಲಿ ಶೇ 54.60 ರಷ್ಟು ಮತದಾನವಾಗಿತ್ತು. 2004ರಲ್ಲಿ ಶೇ 64ರಷ್ಟು ಮತದಾನವಾಗಿತ್ತು. ಆದ್ದರಿಂದ ಚುನಾವಣಾ ಆಯೋಗ ಜಾಗೃತಿ ಅಭಿಯಾನ ನಡೆಸುತ್ತಿದೆ.