ಬಾದಾಮಿ : ಕಾರ್ಯಚರಣೆ ನಿಲ್ಲಿಸಿ ಎಂದ ಗ್ರಾಮಸ್ಥರು
ಬಾಗಲಕೋಟೆ, ಆ.8 : ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕ ತಿಮ್ಮಣ್ಣ ಹಟ್ಟಿಯನ್ನು ರಕ್ಷಿಸುವ ಕಾರ್ಯಾಚರಣೆಯನ್ನು ನಿಲ್ಲಿಸಿ ಎಂದು ಅವರ ತಂದೆ ಹನುಂತ ಹಟ್ಟಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ತಿಮ್ಮಣ್ಣ ಬಾವಿಗೆ ಬಿದ್ದು ಆರು ದಿನಗಳು ಕಳೆದಿದ್ದು ಇನ್ನೂ ಹೊರತೆಗೆಯಲು ಸಾಧ್ಯವಾಗಿಲ್ಲ.
ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ಕೊಳವೆ ಬಾವಿಗೆ ಬಿದ್ದಿರುವ 6 ವರ್ಷದ ತಿಮ್ಮಣ್ಣನನ್ನು 6 ದಿನಗಳಾದರೂ ಹೊರತೆಗೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಕಾರ್ಯಾ ಚರಣೆ ಸ್ಥಗಿತಗೊಳಿಸಿ ಕೊಳವೆ ಬಾವಿಯಲ್ಲಿಯೇ ಬಾಲಕನ ಸಮಾಧಿ ಮಾಡುವ ಬಗ್ಗೆ ಚಿಂತನೆ ನಡೆದಿದೆ.
ಸಮಯ 20.30 : ಬಾಲಕ ತಿಮ್ಮಣ್ಣ ಹಟ್ಟಿ ತಂದೆ ಹನುಮಂತ ಹಟ್ಟಿ ಪುನಃ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಮಯ 2 ಗಂಟೆ : ಸಂಜೆಯ ವೇಳೆಗೆ ಕಾರ್ಯಾಚರಣೆ ನಿಲ್ಲಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸೂಳಿಕೇರಿ ಗ್ರಾಮಸ್ಥರು ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಮಯ 1 ಗಂಟೆ : ಕಾರ್ಯಾಚರಣೆಯನ್ನು ನಿಲ್ಲಿಸುವ ಕುರಿತು ಸೂಳಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ನೇತೃತ್ವದಲ್ಲಿ ಸಭೆ
12 ಗಂಟೆ : ಜೆಸಿಬಿ ಕಾರ್ಯಾಚರಣೆಯ ಮೂಲಕ ಬಾಲಕನನ್ನು ಹೊರತೆಯಲು ಇನ್ನು ಮೂರು ದಿನಗಳು ಬೇಕಾಗಬಹುದು. ಬಾಲಕನ ತಂದೆ ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಸಿಎಂ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ್ ಹೇಳಿದ್ದಾರೆ.
ಸಮಯ 11 ಗಂಟೆ : ಮಗನನ್ನು ರಕ್ಷಿಸುವ ಕಾರ್ಯಾಚರಣೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ ಹನುಮಂತ ಹಟ್ಟಿ, ಕಾರ್ಯಾಚರಣೆ ನಡೆಯವು ಸ್ಥಳದಿಂದ ಮನೆಗೆ ಹೋದ ಕುಟುಂಬದ ಸದಸ್ಯರು.
ಸಮಯ 10 ಗಂಟೆ : ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಸಮಯ 9 ಗಂಟೆ : ಕೊಳವೆ ಬಾವಿಗೆ ಸಮಾನಾಂತರವಾಗಿ ಸುರಂಗ ಕೊರೆಯುವ ಕಾರ್ಯವನ್ನು ಶುಕ್ರವಾರ ಮುಂದುವರೆಸಲಾಗಿದೆ.
ಈ ಕುರಿತು ಜಿಲ್ಲಾಡಳಿತ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. "ನನ್ನ ಮಗ ವಾಪಸ್ ಬರಲ್ಲ, ಅಗೆತ ನಿಲ್ಲಿಸಿ ನಮ್ಮ ಬೆಳೆ ಹಾಳಾಗುವುದನ್ನು ನಿಲ್ಲಿಸಿ, ಎಂದು ತಿಮ್ಮಣ್ಣ ಹಟ್ಟಿ ತಂದೆ ಮತ್ತು ತಾಯಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. [ಗುರುವಾರದ ಕಾರ್ಯಾಚರಣೆ ವಿವರಗಳು]
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮತ್ತು ಸಿಎಂ ಹಾಗೂ ಸಂಬಂಧಿತ ಸಚಿವರಿಗೆ ದುರಂತದ ಬಗ್ಗೆ ಸಮಗ್ರ ವರದಿ ನೀಡಲು ಬೆಂಗಳೂರಿಗೆ ತೆರಳಿದ್ದರು. ಅವರು ಶುಕ್ರವಾರ ಬೆಳಗ್ಗೆ ಪುನಃ ದುರಂತ ನಡೆದ ಸ್ಥಳಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ನಂತರ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.