ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಜನರಿಕ್ ಮಳಿಗೆ
ಬೆಂಗಳೂರು, ಮೇ.13 : ಬಡವರಿಗೆ ಅಗ್ಗದ ದರದಲ್ಲಿ ಔಷಧಿಗಳನ್ನು ಒದಗಿಸಲು ಸರ್ಕಾರದ ವತಿಯಿಂದ ಪ್ರತಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಜನರಿಕ್ ಔಷಧಿ ಮಳಿಗೆಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಜನರಿಕ್ ಔಷಧಿ ಮಳಿಗೆ ಸ್ಥಾಪನೆ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಯುಟಿ ಖಾದರ್, ಕಡಿಮೆ ದರದಲ್ಲಿ ಔಷಧಿಗಳು ದೊರೆಯುವಂತಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಜನರಿಕ್ ಔಷಧಿ ಮಳಿಗೆಯನ್ನು ಸರ್ಕಾರದ ವತಿಯಿಂದ ಆರಂಭಿಸಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಅಗ್ಗದ ದರದಲ್ಲಿ ಔಷಧಿಗಳು ದೊರೆಯುತ್ತವೆ. ಉತ್ತಮ ಸೌಲಭ್ಯಗಳು ದೊರೆಯುತ್ತವೆ ಇದರಿಂದ ಖಾಸಗಿ ಆಸ್ಪತ್ರೆಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಖಾದರ್ ಹೇಳಿದರು. ಜನರಿಕ್ ಮಳಿಗೆ ತೆರೆಯುವ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೂ ಮಾತುಕತೆ ನಡೆಸಲಾಗಿದ್ದು, ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]
ಪ್ರತಿ ತಾಲೂಕು ಜಿಲ್ಲೆಯಲ್ಲಿ ಜನರಿಕ್ ಮಳಿಗೆ
ಬಡವರಿಗೆ ಅಗ್ಗದ ದರದಲ್ಲಿ ಔಷಧಿಗಳು ದೊರೆಯಬೇಕು ಎಂಬ ಕಾರಣದಿಂದ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿಯೂ ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯಲಾಗುವುದು ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೇ 15ರಂದು ಸಕ್ಕರೆ ಕಾರ್ಖನೆಗೆ ಮುತ್ತಿಗೆ
ಸರ್ಕಾರ ಕಬ್ಬಿಗೆ ನಿಗದಿ ಪಡಿಸಿರುವ ಬೆಂಬಲ ದರ ನೀಡದಿದ್ದರೆ ಮೇ 15 ರಂದು ರಾಜ್ಯಾದ್ಯಂತ ರೈತರು ಸಕ್ಕರೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ ಹಣ ಕೂಡಿ ಇಲ್ಲವೇ ಸಕ್ಕರೆ ಕೊಡಿ ಎಂಬ ಚಳವಳಿ ನಡೆಸಲಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಬೆಳಗಾವಿ ಸೇರಿದಂತೆ ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿಲ್ಲ. ಆದ್ದರಿಂದ ರೈತರು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕೊನೆಯ ಸ್ಥಾನವಾದರೂ ಸಮಾಧಾನಕರ ಸಂಗತಿ
ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಈ ಬಾರಿಯೂ ಬೀದರ್ ಜಿಲ್ಲೆ ಕೊನೆಯ ಸ್ಥಾನ ಗಳಿಸಿದೆ. ಆದರೆ, ಸಮಾಧಾನಕರ ಸಂಗಂತಿ ಎಂದರೆ, ಕಳೆದ ವರ್ಷದ ಫಲಿತಾಂಶಕ್ಕಿಂತ ಶೇ. 7ರಷ್ಟು ಹೆಚ್ಚಳವಾಗಿದೆ. ಬೀದರ್ ಜಿಲ್ಲೆಯು 2010ರಲ್ಲಿ ಶೇ.32.27ರಷ್ಟು ಫಲಿತಾಂಶ ಪಡೆದಿತ್ತು. 2011ರಲ್ಲಿ ಶೇ.53, 2012ರಲ್ಲಿ ಶೇ. 63.32, 2013ರಲ್ಲಿ ಶೇ. 67.95 ಹಾಗೂ ಈ ವರ್ಷದ 2014ರಲ್ಲಿ ಶೇ. 75.35ರಷ್ಟು ಫಲಿತಾಂಶ ಪಡೆವ ಮೂಲಕ, ಕಳೆದ 5 ವರ್ಷದಲ್ಲಿ ಶೇ. 43.08ರಷ್ಟು ಏರಿಕೆ ಫಲಿತಾಂಶ ಕಂಡಂತಾಗಿದೆ.
ಈ ಬಾರಿ ಆಲೂಗೆಡ್ಡೆ ಬೆಳೆ ಕಡಿಮೆ
ಹಾಸನ ಜಿಲ್ಲೆಯಲ್ಲಿ ಈ ಬಾರಿ ಆಲೂಗಡ್ಡೆ ಬೆಳೆಯ ಪ್ರಮಾಣ ಕಡಿಮೆಯಾಗಲಿದೆ. ಈ ವರ್ಷ ಜಿಲ್ಲೆಯಲ್ಲಿ ಅಂದಾಜು 4 ಸಾವಿರದಿಂದ 5 ಸಾವಿರ ಹೆಕ್ಟೇರ್ ಶುಂಠಿ ಹೆಚ್ಚಾಗಿ ಬಿತ್ತನೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ಮೂರು ವರ್ಷಗಳಿಂದ ಆಲೂಗಡ್ಡೆಗೆ ಅಂಗಮಾರಿ ರೋಗ ತಗುಲುತ್ತಿರುವ ಕಾರಣ ರೈತರು ಶುಂಠಿ ಬೆಳೆ ಬೆಳೆದರು. ಇದರಿಂದ ಲಾಭವೂ ಆಯಿತು. ಆದ್ದರಿಂದ ರೈತರು ಆಲೂಗೆಡ್ಡೆ ಬಿಟ್ಟು ಶುಂಠಿಯ ಮೊರೆ ಹೋಗಿದ್ದಾರೆ. ಆದ್ದರಿಂದ ಈ ಬಾರಿ ಆಲೂಗೆಡ್ಡೆಗಿಂತ ಹೆಚ್ಚಾಗಿ ಶುಂಠಿ ಬಿತ್ತನೆ ಮಾಡಲಾಗಿದೆ.
ಸ್ಫೋಟಕ್ಕೆ ಸಂಚು : ತನಿಖೆಗೆ ವಿಶೇಷ ತಂಡ
ಗುಲ್ಬರ್ಗ ಜಿಲ್ಲೆಯಲ್ಲಿ ರೈಲ್ವೆ ಹಳಿಗಳ ಮೇಳೆ ಸ್ಫೋಟಕ ಇಟ್ಟು ರೈಲು ಸ್ಫೋಟ ಮಾಡಲು ಸಂಚು ನಡೆಸಿದ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗುವುದು ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಎಂ.ಎನ್.ರೆಡ್ಡಿ ತಿಳಿಸಿದರು. ಎರಡು ಕಡೆಗಳಲ್ಲಿ ದುಷ್ಕರ್ಮಿಗಳು ಜಿಲೆಟಿನ್ ಕಡ್ಡಿ, ಪೇಸ್ಟ್ ಇನ್ನಿತರ ಸ್ಫೋಟಕ ವಸ್ತುಗಳನ್ನು ಹುದುಗಿಸಿಟ್ಟು ಸ್ಫೋಟಗೊಳಿಸಲು ವಿಫಲ ಯತ್ನ ನಡೆಸಿದ್ದಾರೆ. ಸ್ಫೋಟಕ ಅಡಗಿಸಿಟ್ಟಿದ್ದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮೇಲ್ಕೋಟಕ್ಕೆ ಇದೊಂದು ದೊಡ್ಡ ಪ್ರಮಾಣದಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸಲು ಮಾಡಿದ ಸಂಚು ಎಂದು ತಿಳಿದುಬರುತ್ತದೆ ಎಂದರು.