ಮಡಿಕೇರಿಯಲ್ಲಿ ಕೆಎಸ್ಆರ್ ಟಿಸಿಯಿಂದ ಸಿಟಿ ಬಸ್ ಸೇವೆ
ಮಡಿಕೇರಿ. ಏ. 24 : ಮಡಿಕೇರಿಯಲ್ಲಿ ಕೆಎಸ್ಆರ್ ಟಿಸಿ ಸಿಟಿ ಬಸ್ ಸೇವೆಯನ್ನು ಆರಂಭಿಸಿದೆ. ನಗರದ ವಿವಿಧ ಬಡಾವಣೆಗಳನ್ನು ತಲುಪಿಸುಲು ಮೂರು ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಬುಧವಾರದಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಸಿಟಿ ಬಸ್ ಸೇವೆಗೆ ಚಾಲನೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಅನುಚೇತ್, ಪ್ರಾದೇಶಿಕ ಸಾರಿಗೆ ಅಧಿಕಾರಿ ನಫೀಜ್ ಅಹಮ್ಮದ್ ಮತ್ತಿತರರು ನಗರ ಸಾರಿಗೆ ಸೇವೆಗೆ ಚಾಲನೆ ನೀಡಿದರು. ಬಸ್ಸಿನಲ್ಲಿ ಟಿಕೆಟ್ ಪಡೆದು ಕೆಎಸ್ಆರ್ ಟಿಸಿ ನಿಲ್ದಾಣದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದವರೆಗೆ ಪ್ರಯಾಣ ಮಾಡಿದ್ದಾರೆ.
ಮೂರು ಮಾರ್ಗಗಳಲ್ಲಿ ಬಸ್ಸುಗಳು ಸಂಚರಿಸಲಿದ್ದು ಕನಿಷ್ಠ 6 ರೂ. ಮತ್ತು ಗರಿಷ್ಠ 8 ರೂ. ಪ್ರಯಾಣ ದರ ನಿಗದಿ ಪಡಿಸಲಾಗಿದೆ. ಮುಂದಿನ ಒಂದು ವಾರಗಳ ಕಾಲ ಬಸ್ಸುಗಳು ಮೂರು ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಸಂಚರಿಸಲಿವೆ. ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರೆತರೆ ಸೇವೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು
ಮಡಿಕೇರಿಯಲ್ಲಿ ನಗರ ಸಾರಿಗೆ ಸೇವೆ
ಕೆಎಸ್ಆರ್ ಟಿಸಿ ಬುಧವಾರದಿಂದ ಮಡಿಕೇರಿಯಲ್ಲಿ ನಗರ ಸಾರಿಗೆ ಸೇವೆ ಯನ್ನು ಆರಂಭಿಸಿದೆ. ಮೂರು ಮಾರ್ಗಗಳಲ್ಲಿ ಬಸ್ಸುಗಳು ಸಂಚರಿಸಲಿವೆ. ಬಸ್ ಮಾರ್ಗ ಮಾರ್ಗ 1 : ಕೆಎಸ್ಆರ್ ಟಿಸಿ ನಿಲ್ದಾಣದಿಂದ ಅಜ್ಜಮಾಡ ಬಿ.ದೇವಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ರಾಜಾಸೀಟ್, ಭಾರತೀಯ ಜೀವ ನಿಗಮ ಕಚೇರಿ ಜಂಕ್ಷನ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಕಿ ಕ್ರೀಡಾಂಗಣ, ಕಾನ್ವೆಂಟ್ ಜಂಕ್ಷನ್, ಭಾರತೀಯ ಸ್ಟೇಟ್ ಬ್ಯಾಂಕ್. ಮಾರ್ಗ 2 : ಕೆಎಸ್ಆರ್ ಟಿಸಿ ನಿಲ್ದಾಣದಿಂದ ಅಜ್ಜಮಾಡ ಬಿ.ದೇವಯ್ಯ ವೃತ್ತ, ಇಂದಿರಾಗಾಂಧಿ ವೃತ್ತ, ಭಾರತೀಯ ಸ್ಟೇಟ್ ಬ್ಯಾಂಕ್, ಕಾನ್ವೆಂಟ್ ಜಂಕ್ಷನ್, ವಿಜಯ ವಿನಾಯಕ ದೇವಸ್ಥಾನ, ಪೊಲೀಸ್ ಸಮುದಾಯ ಭವನ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಸಾಯಿ ಕ್ರೀಡಾಂಗಣ, ರಾಜಾಸೀಟು, ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಅಜ್ಜಮಾಡ ಬಿ.ದೇವಯ್ಯ ವೃತ್ತ. ಮಾರ್ಗ 3 : ಸಂಪಿಗೆ ಕಟ್ಟೆ, ಎ.ವಿ.ಸ್ಕೂಲ್, ಅಬ್ಬಿಪಾಲ್ಸ್ ಜಂಕ್ಷನ್, ಕಾನ್ವೆಂಟ್ ಜಂಕ್ಷನ್, ಭಾರತೀಯ ಸ್ಟೇಟ್ ಬ್ಯಾಂಕ್, ಕೆಎಸ್ಆರ್ ಟಿಸಿ ಬಸ್ ನಿಲ್ದಾಣ.
ತುಮಕೂರಿನಲ್ಲಿ ಉದ್ಯೋಗ ಮೇಳ
ತುಮಕೂರಿನ ಶ್ರೀ ಸಿದ್ದಗಂಗಾ ಐಟಿಐ ಕಾಲೇಜಿನಲ್ಲಿ ಏ. 26 ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ಇಂಡೋ-ಯುಎಸ್, ದೊಡ್ಡಬಳ್ಳಾಪುರ ಕಂಪನಿಯು ಭಾಗವಹಿಸಲಿದ್ದು, ಐಟಿಐ, ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಮೆಷಿನಿಸ್ಟ್ ಗ್ರೈಂಡರ್ ಪಾಸಾದ, 24 ವರ್ಷದೊಳಗಿನ ಅರ್ಹ ಪುರುಷ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9740016032 ಅನ್ನು ಸಂಪರ್ಕಿಸಬಹುದು.
ಮಂಗಳೂರಿನಲ್ಲಿ 28ರಂದು ಉದ್ಯೋಗ ಮೇಳ
ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಏ.28ರಂದು ಬೆಳಗ್ಗೆ 10 ಗಂಟೆಯಿಂದ ಉದ್ಯೋಗಮೇಳವನ್ನು ಲಾಲ್ ಭಾಗ್ ಮಹಾನಗರಪಾಲಿಕೆ ಕಟ್ಟಡದಲ್ಲಿರುವ ಮಾನವ ಸಂಪನ್ಮೂಲ ಕೇಂದ್ರ ಕಚೇರಿಯಲ್ಲಿ ಅಯೋಜಿಸಲಾಗಿದೆ. ವಿವಿಧ ಖಾಸಗಿ ಕಂಪೆನಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನವನ್ನು ಮೇಳದಲ್ಲಿ ನಡೆಸಲಾಗುತ್ತದೆ. ಡಿಪ್ಲೋಮಾ, ಪದವಿ, ಐಟಿಐ, ಎಸ್ಎಸ್ಎಲ್ಸಿ, ಪಿಯುಸಿ ಆದವರು ಭಾಗವಹಿಸಬಹುದಾಗಿದೆ. ಪ್ರತಿ ಅಭ್ಯರ್ಥಿಗಳು 3 ಪ್ರತಿ ಬಯೋಡಾಟ ಮತ್ತು ಪಾಸ್ ಪೋರ್ಟ್ ಅಳತೆಯ 3 ಭಾವಚಿತ್ರದೊಂದಿಗೆ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಕಾರ್ಖಾನೆಗೆ ನೀಡಿದ್ದ ಭೂಮಿ ವಾಪಸ್
ಮಂಡ್ಯ ಜಿಲ್ಲೆಯ ನೆಲಮಂಗಲ ತಾಲೂಕಿನ ಕಾಳಿಂಗನಹಳ್ಳಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕಾಗಿ 16 ವರ್ಷಗಳ ಹಿಂದೆ ಖಾಸಗಿ ಸಂಸ್ಥೆಗೆ ನೀಡಿದ್ದ 84.4 ಎಕರೆ ಭೂಮಿಯನ್ನು ಹಿಂಪಡೆಯುವುದಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಹೈಕೋರ್ಟ್ಗೆ ತಿಳಿಸಿದೆ. ಕ್ರಿಸ್ಟಲ್ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕಾಗಿ ಪ್ರೇಮ್ ಶುಗರ್ಸ್ ಸಂಸ್ಥೆಗೆ ಕೆಐಎಡಿಬಿ 1997ರಲ್ಲಿ ಬೆಳ್ಳೂರು ಹೋಬಳಿಯ ಕಾಳಿಂಗನಹಳ್ಳಿಯ 84.4 ಎಕರೆ ಭೂಮಿ ಮಂಜೂರು ಮಾಡಿತ್ತು. 175 ರೈತರಿಗೆ ಕಾರ್ಖಾನೆಯಲ್ಲಿ ಉದ್ಯೋಗ ನೀಡುವುದಾಗಿ ಸಂಸ್ಥೆ ಕೆಐಎಡಿಬಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ, ವರ್ಷಗಳು ಕಳೆದರೂ, ಕಾರ್ಖಾನೆ ಸ್ಥಾಪನೆಗೆ ಅಡಿಪಾಯ ಕೂಡ ಹಾಕಿರಲಿಲ್ಲ. ಆದ್ದರಿಂದ ಕೆಐಎಡಿಬಿ 2009ರಲ್ಲಿ ಭೂಮಿಯನ್ನು ಹಿಂಪಡೆಯುವ ಆದೇಶ ಹೊರಡಿಸಿತ್ತು. ಸಂಸ್ಥೆ ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು.
ಮೇ 3ರಂದು ವಿಟಿಯು ಘಟಿಕೋತ್ಸವ
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಮೇ 3ರಂದು ಬೆಳಗ್ಗೆ 11 ಗಂಟೆಗೆ ವಿಟಿಯು ಸಭಾಭವನದಲ್ಲಿ ನಡೆಯಲಿದೆ. ವಿವಿ ಕುಲಾಧಿಪತಿ ಡಾ.ಹಂಸರಾಜ್ ಭಾರದ್ವಾಜ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಲಿದ್ದು, ಪ್ರಧಾನಮಂತ್ರಿ ಸಲಹೆಗಾರ ಪದ್ಮಭೂಷಣ ಡಾ. ಸ್ಯಾಮ್ ಪಿತ್ರೋಡ ಘಟಿಕೋತ್ಸವ ಭಾಷಣ ಮಾಡುಲಿದ್ದಾರೆ.
ಗೌರವ ಡಾಕ್ಟರೇಟ್ : ಸ್ಯಾಮ್ ಪಿತ್ರೋಡ, ನವದೆಹಲಿಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ.ವೇದ ಪ್ರಕಾಶ, ಕೇಂದ್ರ ಸರ್ಕಾರದ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಚ್.ಕೆ. ಮಿತ್ತಲ್ ಹಾಗೂ ಬೆಂಗಳೂರಿನ ಉದ್ಯಮಿ ವಿಕ್ರಮ್ ಕಿರ್ಲೋಸ್ಕರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುತ್ತದೆ.