ಕೊಡಗಿನಲ್ಲಿ ಶೂಟೌಟ್ ಮತ್ತು ಇತರ ಜಿಲ್ಲಾ ಸುದ್ದಿಗಳು
ಮಡಿಕೇರಿ, ನ.2 : ಮರದ ವ್ಯಾಪಾರ ವಿಚಾರದಲ್ಲಿ ಇಬ್ಬರ ನಡುವೆ ಆರಂಭವಾದ ಜಗಳ ಗುಂಡಿನ ದಾಳಿಯಲ್ಲಿ ಅಂತ್ಯವಾದ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ. ಗುಂಡಿನ ದಾಳಿಯಿಂದ ಗಾಯಗೊಂಡ ವ್ಯಕ್ತಿಯನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಸೋಮವಾರಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಮಹಮದ್ ಮತ್ತು ಅಬ್ದುಲ್ ಹಮೀದ್ ನಡುವೆ ಶನಿವಾರ ಬೆಳಗ್ಗೆ ಮರದ ವ್ಯಾಪಾರ ವಿಚಾರದಲ್ಲಿ ಜಗಳ ನಡೆದಿದೆ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋದಾಗ ಅಬ್ದುಲ್ ಮಹಮದ್ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ.
ಗುಂಡಿನ ಸದ್ದು ಕೇಳಿ ಓಡಿಬಂದ ಗ್ರಾಮಸ್ಥರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಮದ್ ಅವರನ್ನು ಸೋಮವಾರಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಹಮದ್ ಅವರ ಎದೆಯ ಭಾಗಕ್ಕೆ ಗುಂಡು ಹೊಕ್ಕಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಘಟನೆ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪರಾರಿಯಾಗಿರುವ ಅಬ್ದುಲ್ ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)
ಗುಂಡಿನ ದಾಳಿಯಲ್ಲಿ ಜಗಳ ಅಂತ್ಯ
ಮರದ ವ್ಯಾಪಾರ ವಿಚಾರದಲ್ಲಿ ಇಬ್ಬರ ನಡುವೆ ಆರಂಭವಾದ ಜಗಳ ಗುಂಡಿನ ದಾಳಿಯಲ್ಲಿ ಅಂತ್ಯವಾದ ಘಟನೆ ಸೋಮವಾರಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ಗುಂಡಿನ ದಾಳಿಯಿಂದ ಗಾಯಗೊಂಡ ವ್ಯಕ್ತಿಯನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಗೋಪಾಲಪುರ ಗ್ರಾಮದ ಮಹಮದ್ ಮತ್ತು ಅಬ್ದುಲ್ ಹಮೀದ್ ನಡುವೆ ಶನಿವಾರ ಬೆಳಗ್ಗೆ ಮರದ ವ್ಯಾಪಾರ ವಿಚಾರದಲ್ಲಿ ಜಗಳ ನಡೆದಿದೆ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋದಾಗ ಅಬ್ದುಲ್ ಮಹಮದ್ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ.
ವಿದ್ಯಾರ್ಥಿಗಳು ನೀರುಪಾಲು
ಈಜಾಡಲು ಹೋದ ವಿದ್ಯಾರ್ಥಿಗಳಿಬ್ಬರು ನೀರು ಪಾಲಾಗಿರುವ ಘಟನೆ ಬೆಂಗಳೂರಿನ ಬಾಗಲೂರು ಕೆರೆಯಲ್ಲಿ ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಫೈಜ್ (17), ಮಹಮದ್ ಮೃತಪಟ್ಟ ವಿದ್ಯಾರ್ಥಿಗಳು. ಆರ್.ಟಿ.ನಗರದ ನಿವಾಸಿಗಳಾದ ಇವರು ಶನಿವಾರ 8 ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದರು ಎಂದು ತಿಳಿದು ಬಂದಿದೆ.
ಪಟಾಕಿಗೆ ಹಣ ಪಡೆದು ಪರಾರಿ
ದೀಪಾವಳಿ ಹಬ್ಬಕ್ಕೆ ಪಟಾಕಿ ಮತ್ತು ಬೆಲೆ ಬಾಳುವ ಗಿಫ್ಟ್ ನೀಡುವುದಾಗಿ ನಂಬಿಸಿ ಒಂದು ಸಾವಿರಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸಿ ದಂಪತಿ ಪರಾರಿಯಾದ ಘಟನೆ ಆನೇಕಲ್ ತಾಲೂಕಿನ ದೊಮ್ಮಸಂದ್ರದಲ್ಲಿ ನಡೆದಿದೆ. ದೊಮ್ಮಸಂದ್ರದ ನಿವಾಸಿಗಳಾದ ಧನಂಜಯ್ ಮತ್ತು ಗೀತಾ ವಂಚಕ ದಂಪತಿ. ಈ ದಂಪತಿ ಜನರಿಂದ ಸುಮಾರು 5 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದರು ಎಂದು ತಿಳಿದುಬಂದಿದೆ. ಕಳೆದ 10 ವರ್ಷದಿಂದಲೂ ಇದೇ ವ್ಯಾಪಾರ ನಡೆಸುತ್ತಿದ್ದ ದಂಪತಿಗಳು ಈ ಬಾರಿ ಹಣದೊಂದಿಗೆ ಪರಾರಿಯಾಗಿದ್ದಾರೆ.
ರಸ್ತೆ ಅಪಘಾತಕ್ಕೆ ನಾಲ್ಕು ಬಲಿ
ಕ್ರೂಸರ್ ಮತ್ತು 407 ವಾಹನದ ನಡುವೆ ಸಂಭವಿಸಿ ಅಪಘಾತದಲ್ಲಿ 4 ಜನ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೆಸೂರು ಗ್ರಾಮದ ಬಳಿ ಶನಿವಾರ ಮುಂಜಾನೆ ನಡೆದಿದೆ. ಘಟನೆಯಿಂದಾಗಿ 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿಯಲ್ಲಿ ನಿಶ್ಚಿತಾರ್ಥ ಮುಗಿಸಿ ಕ್ರೂಸರ್ ನಲ್ಲಿ ಮರಳಿ ನವಲಗುಂದಕ್ಕೆ ಆಗಮಿಸುವ ವೇಳೆ ಈ ಅಪಘಾತ ಸಂಭವಿಸಿದೆ. ಮೃತರೆಲ್ಲ ನವಲಗುಂದ ಮೂಲದವರಾಗಿದ್ದು, ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಂಡಯ್ಯ ಪ್ರಕರಣ ಮಾಹಿತಿ ಸಂಗ್ರಹ
ಕಾಂಗ್ರೆಸ್ ಮುಖಂಡ ಕೊಂಡಯ್ಯ ಅವರು ಸರ್ಕಾರಿ ನಿವೇಶನ ಬಳಸಿಕೊಂಡಿರುವ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ನಾವು ಯಾರ ರಕ್ಷಣೆಗೂ ನಿಂತಿಲ್ಲ ಎಂದು ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ನಿವೇಶನ ಬಳಸಿಕೊಂಡ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ನಾಲ್ಕು ಕಂದಮ್ಮಗಳಿಗೆ ಜನ್ಮ ನೀಡಿದ ತಾಯಿ
ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮಹಾತಾಯಿಯೊಬ್ಬಳು ಒಂದೇ ಹೆರಿಗೆಯಲ್ಲಿ ನಾಲ್ಕು ಕಂದಮ್ಮಗಳಿಗೆ ಜನ್ಮ ನೀಡಿದ್ದಾಳೆ. ಸಿದ್ದಮ್ಮ ಈ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾದ ಈಕೆಯನ್ನು ಸ್ಕ್ಯಾನಿಂಗ್ ಒಳಪಡಿಸಿದಾಗ ಉದರದಲ್ಲಿ ನಾಲ್ಕು ಮಕ್ಕಳು ಬೆಳೆಯುತ್ತಿರುವ ಅಚ್ಚರಿಯನ್ನು ವೈದ್ಯರು ಖಚಿತಪಡಿಸಿದ್ದರು. ಶುಕ್ರವಾರ ಎರಡು ಗಂಡು ಮತ್ತು 2 ಹೆಣ್ಣು ಮಕ್ಕಳಿಗೆ ಸಿದ್ಧಮ್ಮ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿವೆ ಎಂದು ವೈದ್ಯರು ಹೇಳಿದ್ದಾರೆ.