ಬಳ್ಳಾರಿ : ಪಾಲಿಕೆ ಸದಸ್ಯರ ಮನೆ, ವಾಣಿಜ್ಯ ಮಳಿಗೆ ತೆರವು
ಬಳ್ಳಾರಿ, ಮೇ.12 : ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಡಿ.ಲಕ್ಷ್ಮೀನಾರಾಯಣಪ್ಪ ಅವರು ಅಕ್ರಮವಾಗಿ ನ್ಯಾಯಾಧೀಶರ ಬಡಾವಣೆಯಲ್ಲಿ ನಿರ್ಮಿಸಿದ್ದ ಮನೆ ಮತ್ತು ವಾಣಿಜ್ಯ ಸಮುಚ್ಛಯವನ್ನು ಸೋಮವಾರ ನೆಲಸಮಗೊಳಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಎರಡು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.
ಬಳ್ಳಾರಿ ನಗರದ ನ್ಯಾಯಾಧೀಶರ ಕಾಲೋನಿಯಲ್ಲಿ ಪಾಲಿಕೆ ಸದಸ್ಯ ಡಿ.ಲಕ್ಷ್ಮಿನಾರಾಯಣಪ್ಪ ಅವರು ಅಕ್ರಮವಾಗಿ ನಿರ್ಮಿಸಿದ್ದ ಮನೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಜಿಲ್ಲಾಧಿಕಾರಿ ಆದಿತ್ಯ ಅಮ್ಲನ್ ಬಿಸ್ವಾಸ್ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯತು. ಮುಂಜಾಗ್ರತಾ ಕ್ರಮವಾಗಿ ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
2013ರಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ 6ನೇ ವಾರ್ಡ್ನಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಸದಸ್ಯ ಲಕ್ಷ್ಮಿನಾರಾಯಣಪ್ಪ ತಮ್ಮ ಅಧಿಕಾರ ಬಳಸಿಕೊಂಡು ಸರ್ಕಾರಿ ಜಾಗದಲ್ಲಿ ಒಂದು ಮನೆ ಹಾಗೂ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿದ್ದರು. ಈ ಅತಿಕ್ರಮಣವನ್ನು ಪ್ರಶ್ನಿಸಿ, ಸ್ಥಳೀಯರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅತಿಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು. ಆದ್ದರಿಂದ ಸೋಮವಾರ ಜಿಲ್ಲಾಧಿಕಾರಿ ಆದಿತ್ಯ ಅಮ್ಲನ್ ಬಿಸ್ವಾಸ್ ಅವರ ನಿರ್ದೇಶನದ ಮೇರೆಗೆ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ಭಾರಿ ಬಿಗಿ ಭದ್ರತೆ ಏರ್ಪಡಿಸಿತ್ತು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]
ಬಳ್ಳಾರಿಯಲ್ಲಿ ಅಕ್ರಮ ಮನೆ ತೆರವು
ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಡಿ.ಲಕ್ಷ್ಮೀನಾರಾಯಣಪ್ಪ ಅವರು ಅಕ್ರಮವಾಗಿ ನ್ಯಾಯಾಧೀಶರ ಬಡಾವಣೆಯಲ್ಲಿ ನಿರ್ಮಿಸಿದ್ದ ಮನೆ ಮತ್ತು ವಾಣಿಜ್ಯ ಸಮುಚ್ಛಯವನ್ನು ಸೋಮವಾರ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಆದಿತ್ಯ ಅಮ್ಲನ್ ಬಿಸ್ವಾಸ್ ಅವರ ನೇತೃತ್ವದಲ್ಲಿ ಮನೆ ಮತ್ತು ವಾಣಿಜ್ಯ ಕಟ್ಟಡ ತೆರವು ಕಾರ್ಯಾಚರಣೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಾಗಲಕೋಟೆಯಲ್ಲಿ ಬಾಂಬ್ ನಿಷ್ಕ್ರಿಯ ದಳ
ಉಗ್ರರು ರೈಲು ನಿಲ್ದಾಣ ಸ್ಫೋಟಕ್ಕೆ ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಬಾಗಲಕೋಟೆ ರೇಲ್ವೆ ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ, ಪೊಲೀಸ್ ಶ್ವಾನ ದಳ ತಪಾಸಣೆ ನಡೆಸಿತು. ಬೆಂಗಳೂರು ಹಾಗೂ ಗುಲ್ಬರ್ಗದ ಚಿತ್ತಾಪುರ ರೈಲು ಹಳಿಯಲ್ಲಿ ಸ್ಫೋಟಕ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ರೇಲ್ವೆ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್, ಕಚೇರಿಗಳು, ರೇಲ್ವೆ ಹಳಿಗಳು ಹಾಗೂ ಇನ್ನಿತರ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲಾಯಿತು.
ಉತ್ತರ ಪ್ರದೇಶದ ಇವರು ಮತದಾನ ಮಾಡೋಲ್ಲ
ಸೋಮವಾರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಇವುಗಳಲ್ಲಿ ಉತ್ತರ ಪ್ರದೇಶದ 18 ಕ್ಷೇತ್ರಗಳು ಸೇರಿವೆ. ಆದರೆ, ಇದರ ಅರಿವಿಲ್ಲದ ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರು ಹೊಟ್ಟೆಪಾಡಿಗಾಗಿ ಉತ್ತರಪ್ರದೇಶದಿಂದ ಚಿತ್ರದುರ್ಗಕ್ಕೆ ಗುಳೆ ಬಂದಿದ್ದು, ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಇವರೆಲ್ಲರೂ ಮತದಾನ ಮಾಡುತ್ತಿಲ್ಲ. ಎರಡು ತಿಂಗಳ ಹಿಂದೆ ಇವರೆಲ್ಲರೂ ಇಲ್ಲಿಗೆ ವಲಸೆ ಬಂದಿದ್ದು, ಯಾರೂ ಮತದಾನಕ್ಕಾಗಿ ತವರಿಗೆ ಹೋಗುತ್ತಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತರ ಪ್ರದೇಶದಿಂದ ಗುಳೆ ಬಂದ ಸುಮಾರು 1000 ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. [ಮತದಾನದ ಚಿತ್ರಗಳು]
ಚಾಮರಾಜನಗರಕ್ಕೆ ಐಟಿಐ ಕಾಲೇಜು ಬಂತು
ಗಡಿನಾಡು ಚಾಮರಾಜನಗರಕ್ಕೆ ಕೊನೆಗೂ ಸರ್ಕಾರಿ ಐಟಿಐ ಕಾಲೇಜು ಮಂಜೂರಾಗಿದೆ. ಇದರಿಂದ ವಿದ್ಯಾರ್ಥಿಗಳು ಐಟಿಐ ತರಬೇತಿ ಪಡೆಯಲು ತಾಲೂಕು ಕೇಂದ್ರಗಳಿಗೆ ಹೋಗುವುದಕ್ಕೆ ಕಡಿವಾಣ ಬಿದ್ದಿದೆ. ಈ ಬಾರಿಯ ಶೈಕ್ಷಣಿಕ ವರ್ಷದಿಂದಲೇ ಐಟಿಐ ಕಾಲೇಜು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲಾ ಕೇಂದ್ರವಾಗಿ 16 ವರ್ಷ ಕಳೆದಿದ್ದರೂ ಸರ್ಕಾರ ಜಿಲ್ಲಾ ಕೇಂದ್ರದಲ್ಲಿ ಐಟಿಐ ಕಾಲೇಜು ತೆರೆದಿರಲಿಲ್ಲ. ಇಂಜಿನಿಯರ್ ಹಾಗೂ ಮೆಡಿಕಲ್ ಕಾಲೇಜು ನೀಡಿದ್ದರೂ, ಒಂದು ಸರ್ಕಾರಿ ಐಟಿಐ ಕಾಲೇಜು ಇಲ್ಲವೆಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿತ್ತು.
ಗುಲ್ಬರ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪತ್ತೆ
ಲೋಕಸಭೆ ಚುನಾವಣೆಯ ಮುಗಿದ ಬಳಿಕ ನಾಪತ್ತೆಯಾಗಿದ್ದ ಗುಲ್ಬರ್ಗ ಮೀಸಲು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಾಮು ಚವ್ಹಾಣ್ ಪತ್ತೆಯಾಗಿದ್ದಾರೆ. ಚುನಾವಣೆ ಮುಗಿದ ಮರುದಿನ ಸ್ವಗ್ರಾಮ ಜೇವರ್ಗಿ ತಾಲೂಕಿನ ನಾಗರಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಅಂದಿನಿಂದ ರಾಮು ನಾಪತ್ತೆಯಾಗಿದ್ದರು. ಈ ಕುರಿತು ರಾಮು ಪತ್ನಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಶನಿವಾರ ಅವರು ಇದ್ದಕ್ಕಿದ್ದಂತೆ ಗುಲ್ಬರ್ಗದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸುದ್ದಿ ತಿಳಿದ ಜೇವರ್ಗಿ ಪೊಲೀಸರು ರಾಮು ಅವರನ್ನು ವಶಕ್ಕೆ ತೆಗೆದುಕೊಂಡು ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದಾರೆ.