ಶೃಂಗೇರಿ ಶೂಟೌಟ್, ಎಎನ್ಎಫ್ ವಿರುದ್ಧ ಎಫ್ಐಆರ್
ಬೆಂಗಳೂರು. ಏ. 25 : ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ನಡೆದ ಎಎನ್ಎಫ್ [Anti-Naxal Force] ಶೂಟೌಟ್ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಎಎನ್ಎಫ್ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಶೂಟೌಟ್ ನಲ್ಲಿ ಮೃತಪಟ್ಟ ಕಬೀರ್ ಸಹೋದರ ಉಮರ್ ಫಾರೂಖ್ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ.
ತನಿಕೋಡು ಚೆಕ್ ಪೋಸ್ಟ್ ಬಳಿ ಎಎನ್ಎಫ್ ನಕ್ಸಲನೆಂದು ಶಂಕಿಸಿ ಕಬೀರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಆತ ಮೃತಪಟ್ಟಿದ್ದ, ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಗುರುವಾರ ಎಎನ್ಎಫ್ ಸಿಬ್ಬಂದಿ ನವೀನ್ ನಾಯಕ್ ವಿರುದ್ಧ ಸೆಕ್ಷನ್ 302 (ಕೊಲೆ) ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ. [ಶೂಟೌಟ್ ತನಿಖೆ ಸಿಐಡಿಗೆ]
ಕಬೀರ್ ಅವರಿಗೆ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿರುವ ನವೀನ್ ನಾಯಕ್, 2013ರಲ್ಲಿ ರಾಷ್ಟ್ರಪತಿ ಪದಕ ಪಡೆದಿದ್ದರು. ನವೀನ್ ನಾಯಕ್ ಅವರಿದ್ದ ಎಎನ್ಎಫ್ ತಂಡ 2012ರಲ್ಲಿ ಮಾವೋವಾದಿ ನಾಯಕ ಯಲ್ಲಪ್ಪ ಅಲಿಯಾಸ್ ದಿನಕರ್ ಅವರನ್ನು ಎನ್ ಕೌಂಟರ್ ನಲ್ಲಿ ಕೊಂದು ಹಾಕಿತ್ತು. ಇದಕ್ಕಾಗಿ ರಾಷ್ಟ್ರಪತಿ ಪದಕ ನೀಡಲಾಗಿತ್ತು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]
ಎಎನ್ಎಫ್ ಶೂಟೌಟ್ ಎಫ್ಐಆರ್ ದಾಖಲು
ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ಕಳೆದ ಶನಿವಾರ ನಡೆದ ಎಎನ್ಎಫ್ ಶೂಟೌಟ್ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಎಎನ್ಎಫ್ ಸಿಬ್ಬಂದಿ ನವೀನ್ ನಾಯಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಶೂಟೌಟ್ ನಲ್ಲಿ ಮೃತಪಟ್ಟ ಕಬೀರ್ ಸಹೋದರ ಉಮರ್ ಫಾರೂಖ್ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ. ವಿವಿಧ ಸಂಘಟನೆಗಳು ಈ ಶೂಟೌಟ್ ಪ್ರಕರಣವನ್ನು ಖಂಡಿಸಿ, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದವು.
ಜಿ.ಪಂ.ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ಏಪ್ರಿಲ್ 25 ರಂದು ಮಧ್ಯಾಹ್ನ 12 ಗಂಟೆಗೆ ಚುನಾವಣೆ ನಡೆಯಲಿದೆ. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬೆಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿದಾಯಿ ಯೋಜನೆಯಿಂದ ಮೋಸ ಹೋಗದಿರಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅನುಷ್ಠಾನಗೊಳಿಸುವ "ಬಿದಾಯಿ" ಯೋಜನೆಯಡಿ ಕೆಲವು ಮಧ್ಯವರ್ತಿಗಳು ತಾವು ಸಹಾಯಧನ ಕೊಡಿಸುವುದಾಗಿ ಜನರನ್ನು ವಂಚಿಸುತ್ತಿರುವುದಾಗಿ ಬಗ್ಗೆ ಇಲಾಖೆಗೆ ದೂರುಗಳು ಬಂದಿವೆ. ಯಾರೇ ಆಗಲಿ ಮಧ್ಯವರ್ತಿಗಳ ಮಾತಿಗೆ ಮರುಳಾಗಿ ಹಣಕಾಸಿನ ಮೋಸಕ್ಕೆ ಒಳಗಾಗಬೇಡಿ ಎಂದು ಗುಲ್ಬರ್ಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಮನವಿ ಮಾಡಿದ್ದಾರೆ. ಬಿದಾಯಿ ಯೋಜನೆಯಡಿ ಹಣಕಾಸಿನ ಲಭ್ಯತೆಗೆ ಒಳಪಟ್ಟು ಅರ್ಜಿ ಸ್ವೀಕರಿಸಿದ ಕ್ರಮ ಸಂಖ್ಯೆಯ ಆಧಾರದ ಮೇಲೆ ಐವತ್ತು ಸಾವಿರ ರೂ. ಸಹಾಯಧನವನ್ನು ಮಂಜೂರು ಮಾಡಲಾಗುವುದು ಎಂದು ಅವರು ತಿಳಿಸಿದರು.
ಆಹಾರ ದಾಸ್ತಾನು ಮಳಿಗೆಗಳಿಗೆ ಸಿಸಿಟಿವಿ
ಅನ್ನಭಾಗ್ಯ ಪಡಿತರ ಪದಾರ್ಥಗಳ ದಾಸ್ತಾನು ಮಳಿಗೆಗಳಿಗೆ ಸಿಸಿಟಿವಿ ಅಳವಡಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಹಾಗೂ ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ಗೋಧಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಸಿಕ್ಕಿಬಿದ್ದ ಗೋಡಾನ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಸರ್ಕಾರ 4000 ಕೋಟಿ ರೂ.ಗಳನ್ನು ವ್ಯಯ ಮಾಡುತ್ತಿದೆ. ಬಡವರಿಗೆ ಸೇರಬೇಕಾದ ಆಹಾರ ಧಾನ್ಯಗಳನ್ನು ದುರುಪಯೋಗವಾಗಲು ಬಿಡುವುದಿಲ್ಲ ಎಂದು ಹೇಳಿದರು. ಅನ್ನಭಾಗ್ಯ ಆಹಾರ ಧಾನ್ಯಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಭೀತಿ
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಭೀತಿ ಎದುರಾಗಿದೆ. ತುಂಗಭದ್ರಾ ನದಿಯಿಂದ ಪಟ್ಟಣಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಈ ಮೂದು ಪಟ್ಟಣಗಳ ಸ್ಥಳೀಯ ಆಡಳಿತಗಳು ಬರೋಬ್ಬರಿ ರು. 7.73 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಬಾಕಿ ಪಾವತಿಸದಿದ್ದರೆ ಯಾವುದೇ ಸಮಯದಲ್ಲಾದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ವಿದ್ಯುತ್ ಇಲಾಖೆ ಈಗಾಗಲೇ ಎಚ್ಚರಿಕೆಯ ನೋಟಿಸ್ ಕಳುಹಿಸಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಮೂರು ಪಟ್ಟಣಗಳ ಕುಡಿಯುವ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡು ಜನರು ಪರದಾಟಬೇಕಾಗುತ್ತದೆ.
ದಾಲ್ಮಿಯಾ ಸಿಮೆಂಟ್ ಕಾರ್ಖಾನೆ ಆರಂಭ
ಗೋಕಾಕ್ ತಾಲೂಕಿನ ರೈತರು ವಿಧಿಸಿರುವ ಷರತ್ತುಗಳನ್ನು ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯವರು ಈಡೇರಿಸಲು ಒಪ್ಪಿಗೆ ನೀಡಿದ್ದು, ಡಿಸೆಂಬರ್ ತಿಂಗಳಲ್ಲಿ ಕಾರ್ಖಾನೆ ಕಾರ್ಯಾರಂಭ ಮಾಡಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಕಾರ್ಖಾನೆಯವರು ಭರವಸೆ ನೀಡಿದ್ದು, ಕಾರ್ಖಾನೆ ಆರಂಭಿಸುವುದಾಗಿ ಹೇಳಿದ್ದಾರೆ.