ಕ್ರೈಂ ರೌಂಡಪ್: ಈಜುಕೊಳದಲ್ಲಿ ಮುಳುಗಿ ಯುವಕರ ಸಾವು
ಮಂಗಳೂರು, ಮೇ.2: ಸ್ನಾನ ಮಾಡಲೆಂದು ಈಜುಕೊಳಕ್ಕಿಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಣಚೂರು ಪಬ್ಲಿಕ್ ಸ್ಕೂಲ್ ನಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಮೃತ ಯುವಕರನ್ನು ಮಂಗಳೂರಿನ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಭಾಸ್ಕರ್ ಅವರ ಪುತ್ರ ಸೂರಜ್ (24) ಹಾಗೂ ಕುಲಶೇಖರ ನಿವಾಸಿ ಜಯರಾಮ್ ಸಾಲ್ಯಾನ್ ಅವರ ಪುತ್ರ ನೀರಜ್(14) ಎಂದು ಗುರುತಿಸಲಾಗಿದೆ. ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಣಚೂರು ಪಬ್ಲಿಕ್ ಸ್ಕೂಲ್ ನಲ್ಲಿ ಸಿಬ್ಬಂದಿ ರಜೆಯಲ್ಲಿದ್ದರು. ಬಹಿರ್ದೆಸೆಗೆ ಹೋದ ಇಬ್ಬರು ಯುವಕರು ಕಾಣದಿದ್ದಾಗ ಗಾಬರಿಗೊಂಡ ಸಹವರ್ತಿಗಳು ಅವರನ್ನು ಹುಡುಕಾಟ ನಡೆಸಲು ಆರಂಭಿಸಿದರು. ಶಾಲಾ ಸುತ್ತಮುತ್ತ ಹುಡುಕಿ, ಬಳಿಕ ಸ್ವಿಮಿಂಗ್ ಪೂಲ್ ನತ್ತ ನೋಡಿದಾಗ ಅವರ ಮೃತದೇಹ ತೇಲುತ್ತಿದ್ದುದು ಪತ್ತೆಯಾಗಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ. ಬಳಿಕ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿದ್ದು, ಶವ ಪರೀಕ್ಷಗೆ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಪುಸ್ತಕ ಸೆಟ್ ಮಾಡಲು ಬಂದಿದ್ದರು: ನೀರಜ್ ಮತ್ತು ಸೂರಜ್ ಸೇರಿದಂತೆ ಒಟ್ಟು ಒಂಬತ್ತು ಮಂದಿ ಮಂಗಳೂರಿನ ಸ್ಕೂಲ್ ಬುಕ್ ಕಂಪನಿಯಿಂದ ಕಣಚೂರು ಪಬ್ಲಿಕ್ ಸ್ಕೂಲ್ ಗೆ ವಿತರಿಸಲಾದ ಪುಸ್ತಕಗಳನ್ನು ಸೆಟ್ ಮಾಡಲು ಗುರುವಾರ ಆಗಮಿಸಿದ್ದರು. ನೀರಜ್ ಎಂಬಾತ ಒಂಬತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು, ರಜೆಯ ನಿಮಿತ್ತ ಕೆಲಸಕ್ಕೆ ಸೇರಿದ್ದ. ಪುಸ್ತಕ ಸೆಟ್ ಮಾಡುತ್ತಿದ್ದಾಗ ನೀರಜ್ ಮತ್ತು ಸೂರಜ್ ಬಹಿರ್ದೆಸೆಗೆಂದು ಹೇಳಿ ನೇರ ಸ್ವಿಮಿಂಗ್ ಫೂಲ್ ನತ್ತ ತೆರಳಿದ್ದರು. ಸೂರಜ್ ಕಾಯಂ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಕಣಚೂರು ಶಾಲೆಗೆ ಸ್ಕೂಲ್ ಬುಕ್ ಕಂಪನಿಯಿಂದ ಪ್ರತಿ ವರ್ಷ ಪುಸ್ತಕ ವಿತರಣೆಯಾಗುತ್ತಿತ್ತು. [ಸಚಿತ್ರ ವರದಿ: ಐಸಾಕ್ ರಿಚರ್ಡ್, ಮಂಗಳೂರು]
ಬ್ರಹ್ಮರಕೂಟ್ಲು ಟೋಲ್ಗೇಟ್ ದಾಳಿ
ಬ್ರಹ್ಮರಕೂಟ್ಲು ಟೋಲ್ಗೇಟ್ ದಾಳಿ, ಸಿಬ್ಬಂದಿಗಳಿಗೆ ಹಲ್ಲೆ ಪ್ರಕರಣ ಸಂಬಂಧ ಬಂಟ್ವಾಳ ನಗರ ಪೊಲೀಸರು ಓರ್ವ ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ. ಬಿ.ಮೂಡ ಗ್ರಾಮದ ಬಿ.ಸಿ.ರೋಡು, ಶಾಂತಿಯಂಗಡಿ ನಿವಾಸಿ ಶೇಖಬ್ಬ ಎಂಬವರ ಮಗ ಅಬೂಬಕ್ಕರ್ ಬಂಧಿತ. ಈತ ನೀಡುವ ಮಾಹಿತಿಯನ್ವಯ ಇತರರನ್ನು ಬಂಧಿಸಲಾಗುವುದು ಎಂದು ನಗರ ಠಾಣಾಧಿಕಾರಿ ಸಂಜಯ್ ಕುಮಾರ್ ಕಲ್ಲೂರ ತಿಳಿಸಿದ್ದಾರೆ.
ಏ. 26ರಂದು ಬಿ.ಸಿ.ರೋಡಿನ ಶಾಂತಿಯಂಗಡಿ, ಮಿತ್ತಬೆಲು, ಪರ್ಲಿಯಾ, ತಲಪಾಡಿಯ ಸುಮಾರು 25ಕ್ಕೂ ಅಧಿಕವಿದ್ದ ಯುವಕರ ಗುಂಪು ಟೋಲ್ಗೇಟ್ಗೆ ಮಾರಕಾಯುಧಗಳಿಂದ ದಾಳಿ ನಡೆಸಿತ್ತು. ಘಟನೆಯಿಂದ ಆರು ಸಿಬ್ಬಂದಿಗಳು ಹಲ್ಲೆಗೊಂಡಿದ್ದರು. ಲಕ್ಷಾಂತರ ರೂ. ವೌಲ್ಯದ ಕಂಪ್ಯೂಟರ್, ಕ್ಯಾಮೆರಾ, ನಗದು ಕೌಂಟರ್, ಪಿಠೋಕರಣಗಳು ಹಾನಿಗೊಂಡಿದ್ದು, ನಗ-ನಗದು ದೋಚಲಾಗಿತ್ತು. ಈ ಆರೋಪದಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಮಹಮ್ಮದ್ ಶೆರೀಫ್ ಮತ್ತು 25 ಮಂದಿ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರು.
ದಾಳಿ ವೇಳೆ ಗಾಯಗೊಂಡ ಪ್ರಮುಖ ಆರೋಪಿ ಸಮೀರ್ ಯಾನೆ ಚಮ್ಮಿ ಎಂಬಾತ ಏ.28ರಂದು ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಭದ್ರತಾ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಕರ್ತವ್ಯ ಲೋಪದ ಆರೋಪದಲ್ಲಿ ಬಂಟ್ವಾಳ ವ್ರತ್ತ ನಿರೀಕ್ಷಕ ರಾಜಶೇಖರ್ ಬಿ. ಮೇಸ್ತ್ರಿ, ನಗರ ಠಾಣೆಯ ಮುಖ್ಯ ಪೇದೆ ಸೇಸಪ್ಪ ಎಂಬವರನ್ನು ಎಸ್ಪಿ ಡಾ.ಶರಣಪ್ಪ ಅಮಾನತು ಗೊಳಿಸಿದ್ದರು. ತೆರವಾದ ಈ ಹುದ್ದೆಗೆ ಪುತ್ತೂರು ನಗರ ಠಾಣೆಯ ವತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಕೋಲಾರ ಗ್ರಾಮಾಂತರ : ಕೊಲೆ ಪ್ರಯತ್ನ
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ಹೊಸಮಟ್ನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಹೊಸಮಟ್ನಹಳ್ಳಿ ಗ್ರಾಮದ ವಾಸಿಯಾದ ನಾಚೇಗೌಡ ರವರ ಸರ್ವೆ ನಂ.47 ರಲ್ಲಿ ಅದೇ ಗ್ರಾಮದ ವಾಸಿಯಾದ ನಂಜುಂಡಗೌಡ ರವರು ದೌರ್ಜನ್ಯವಾಗಿ ಕಾಂಪೌಂಡ್ ಹಾಕಿದ್ದನ್ನು ಪಿರ್ಯಾದಿ ಕೇಳಿದ್ದಕ್ಕೆ ದಿನಾಂಕ:02-04-2014 ರಂದು ಬೆಳಗ್ಗೆ 6-00 ಗಂಟೆಯಲ್ಲಿ ನಂಜುಂಡಗೌಡ ಮತ್ತು ಇತರೇ 4 ಜನರು ಕೈಗಳಲ್ಲಿ ಮಚ್ಚು, ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ನಾಚೇಗೌಡರವರ ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಮಚ್ಚಿನಿಮಧ ನಾಚೇಗೌಡ ರವರ ಡಕಾಲಿನ ತೊಡೆಗೆ, ಬಲ ಮೊಣಕಾಲಿಗೆ ಹೊಡೆದಿರುತ್ತಾರೆ. ಹಾಗು ತಡೆಯಲ್ಲು ಬಂದ ನಾಚೇಗೌಡ ರವರ ಹೆಂಡತಿ ಮತ್ತು ಮಗಳಿಗೂ ಸಹ ಆರೋಪಿಗಳು ಕಲ್ಲಿನಿಂದ ತಲೆಗಳಿಗೆ ಹೊಡೆದು ತೀವ್ರ ರಕ್ತಗಾಯಗಳನ್ನುಂಟುಮಾಡಿರುತ್ತಾರೆ. ಇದೇ ವಿಚಾರದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿರುತ್ತದೆ.
ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಅಪಘಾತ
ಪಿರ್ಯಾದಿದಾರರು ತನ್ನ ಸ್ನೇಹಿತೆಯಾದ ರೇಖಾ ರವರೊಂದಿಗೆ ಬಿಹೆಚ್ ರಸ್ತೆ ಮಲವಗೊಪ್ಪ ಶಾಳೆಯ ಎದುರಿಗೆ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯು ತನ್ನ ಬೈಕ್ ನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷತನದಿಂದ ಚಲಿಸಿಕೊಂಡು ಬಂದು ಪಿರ್ಯಾದಿ ಮತ್ತು ರೇಖಾರವರಿಗೆ ಡಿಕ್ಕಿ ಹೊಡೆಸಿದ್ದ ಪರಿಣಾಮ ರೇಖಾರವರಿಗೆ ತೀವ್ರತರವಾಗಿ ಗಾಯವಾಗಿದ್ದು ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ
ಕಬ್ಬಿಣದ ಅದಿರು ಕಳ್ಳತನ ಸಾಗಾಣಿಕೆ
ಚಿತ್ರದುರ್ಗನಗರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯಾದ ಶ್ರೀ.ಧರಣೇಶ್ರವರು ನಿನ್ನೆ ಬೆಳಗಿನ ಜಾವ ತಾಲ್ಲೂಕಿನ ಸೀಬಾರ ಗ್ರಾಮದ ಶ್ರೀ ನಿಜಲಿಂಗಪ್ಪನವರ ಸ್ಮಾರಕದ ಬಳಿಯ ಎನ್.ಹೆಚ್-4 ಸರ್ವೀಸ್ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ ಕಬ್ಬಿಣದ ಅದಿರನ್ನು ಕಳ್ಳತನ ಮಾಡಿ ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿದ್ದ ನಂ.ಕೆಎ-16/ಸಿ-239ನೇ ಲಾರಿಯನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಸದರಿ ಲಾರಿಯ ಚಾಲಕ ಲಾರಿಯನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು, ಸದರಿ ಲಾರಿಯನ್ನು ಚೆಕ್ ಮಾಡಿದಾಗ ಸುಮಾರು 30 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಇರುವುದು ಕಂಡು ಬಂದಿರುತ್ತದೆ, ಸದರಿ ಲಾರಿಯನ್ನು ವಶಕ್ಕೆ ಪಡೆದು ಮೇಲಾಧಿಕಾರಿಗಳಿಗೆ ಸದರಿ ವಿಷಯ ತಿಳಿಸಿ ನಿನ್ನೆ ಸಂಜೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕ ಮತ್ತು ಮಾಲೀಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.