ಚುನಾವಣೆ ನಂತರವೂ ನಾನೇ ಸಿಎಂ : ಸಿದ್ದರಾಮಯ್ಯ
ಬೆಂಗಳೂರು, ಏ. 14 : "ಲೋಕಸಭೆ ಚುನಾವಣೆ ಫಲಿತಾಂಶ ನನ್ನ ಮುಖ್ಯಮಂತ್ರಿ ಸ್ಥಾನದ ಮೇಲೆ ಪ್ರಭಾವ ಬೀರುವುದಿಲ್ಲ. ಚುನಾವಣೆ ನಂತರವೂ ನಾನು ಸಿಎಂ ಆಗಿ ನಾಲ್ಕು ವರ್ಷಗಳ ಕಾಲ ಮುಂದುವರೆಯುತ್ತೇನೆ" ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಏಪರ್ಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ಫಲಿತಾಂಶ ನನ್ನ ಸ್ಥಾನವನ್ನು ಕಸಿದುಕೊಳ್ಳುವುದಿಲ್ಲ. ಮುಂದಿನ ನಾಲ್ಕು ವರ್ಷಗಳಿಗೂ ನಾನೇ ಮುಖ್ಯಮಂತ್ರಿ ಎಂದು ಹೇಳಿದರು.
ಕರ್ನಾಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದರಿಂದ ಕೇಂದ್ರದ ನಾಯಕರು ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆ ಹುಸಿಯಾಗುವುದಿಲ್ಲ. 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 18-20 ಸ್ಥಾನಗಳಲ್ಲಿ ಜಯಗಳಿಸಲಿಸದೆ ಎಂದು ಸಿದ್ದರಾಮಯ್ಯ ತಿಳಿಸಿದರು.
"ನಾನು ರಾಜ್ಯದ ತುಂಬಾ ಸಂಚಾರ ನಡೆಸಿದ್ದೇನೆ, 120 ಕ್ಕೂ ಅಧಿಕ ಸಭೆಗಳಲ್ಲಿ ಭಾಗವಹಿಸಿದ್ದೇನೆ. ನರೇಂದ್ರ ಮೋದಿ ಅವರ ಯಾವುದೇ ಅಲೆ ರಾಜ್ಯದಲ್ಲಿ ನನಗೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವುದು ಖಂಡಿತ" ಎಂದರು. ಸಿದ್ದರಾಮಯ್ಯ ಸಂವಾದದ ಪ್ರಮುಖ ಅಂಶಗಳು
ರಾಜ್ಯ ಸರ್ಕಾರದ ಕಾರ್ಯ ನೋಡಿ ಮತಹಾಕುತ್ತಾರೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳು ಕಳೆದಿದೆ. ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಬಡವರ, ಅಲ್ಪ ಸಂಖ್ಯಾತರ ಮತ್ತು ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರು ಜಾರಿಗೆ ತರಲು ಸಾಧ್ಯವಾಗದ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇವೆ, ಇವುಗಳನ್ನು ನೋಡಿ ಜನರು ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಅಂದು 122 ಇಂದು 18-20
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಗಳಿಸಿದೆ. ಇಂತಹ ಫಲಿತಾಂಶವೇ ಲೋಕಸಭೆ ಚುಣಾವಣೆಯಲ್ಲೂ ಬರಲಿದ್ದು, 18-20 ಸ್ಥಾನಗಳಲ್ಲಿ ನಾವು ಜಯಗಳಿಸುತ್ತೇವೆ. ಉಳಿದ ಸ್ಥಾನಗಳನ್ನು ಬಿಜೆಪಿ ಮತ್ತು ಜೆಡಿಎಸ್ ಹಂಚಿಕೊಳ್ಳಲಿವೆ ಎಂದರು.
ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ನೋಡಿ
ಉದ್ಯಾನನಗರಿಯಾಗಿದ್ದ ಬೆಂಗಳೂರನ್ನು ಹಾಳು ಮಾಡಿ ಗಾರ್ಬೇಜ್ ಸಿಟಿ ಮಾಡಿದ್ದು ಬಿಜೆಪಿ ಸಾಧನೆ. ಮುಂದಿನ ನಾಲ್ಕು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಬೆಂಗಳೂರನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಸಿಎಂ ಹೇಳಿದರು.
ಮೋದಿ ಅಲೆ ಇಲ್ಲ ಬಿಡ್ರಿ
ದೇಶದಲ್ಲೇ ಮೋದಿ ಅಲೆ ಇಲ್ಲ ಬಿಜೆಪಿ ಅಲೆ ಇದೆ ಎಂದು ಬಿಜೆಪಿ ಹಿರಿಯ ನಾಯಕರು ಹೇಳಿದ್ದಾರೆ. ಕರ್ನಾಟಕದಲ್ಲೂ ಮೋದಿ ಅಲೆ ಇಲ್ಲ. ಬಿಜೆಪಿ ನಾಯಕರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲದೇ ಮೋದಿಯನ್ನು ಪದೇ ಪದೇ ಪ್ರಚಾರಕ್ಕೆ ಕರೆತರುತ್ತಿದ್ದಾರೆ. ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಕರ್ನಾಟಕದಲ್ಲಿ ಮೋದಿ ಅಲೆ ಬೀಸುತ್ತಿಲ್ಲ ಎಂದು ಸಿಎಂ ವಿಶ್ಲೇಷಿಸಿದರು.
ಗೃಹ ಸಚಿವರಿಗೆ ಗೂಂಡಾಗಳ ಪರಿಚಯ ಇರುತ್ತಾ?
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರ ಮಾಡುವಾಗ ರೌಡಿ ಶೀಟರ್ ಬ್ರಿಗೇಡ್ ಅಜಂ ಗೃಹ ಸಚಿವರೊಂದಿಗೆ ಕಾಣಿಸಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಗೃಹ ಸಚಿವರಿಗೆ ಎಲ್ಲಾ ರೌಡಿ ಶೀಟರ್ ಗಳ ಪರಿಚಯವಿರಬೇಕು ಎಂದೇನು ಇಲ್ಲ. ತಿಳಿಯದೆ ಇಂತಹ ತಪ್ಪು ನಡೆದಿದೆ. ಇದು ಗೃಹ ಸಚಿವ ಕೆಜೆ ಜಾರ್ಜ್ ಅವರ ತಪ್ಪಲ್ಲ, ಸ್ಥಳೀಯ ಪೊಲೀಸರು ಮಾಹಿತಿ ಕೊರತೆ ಇರಬಹುದು ಎಂದರು.
ಮೋದಿ ಯಡವಟ್ಟು ಮಾಡಿಕೊಂಡರು
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಮ್ಮ ಮದೆವೆಯನ್ನು ಮುಚ್ಚಿಟ್ಟು ಯಡವಟ್ಟು ಮಾಡಿಕೊಂಡರು ಎಂದು ಸಿದ್ದರಾಮಯ್ಯ ಹೇಳಿದರು. ಹಿಂದೆ ಹಲವು ಚುನಾವಣೆಯಲ್ಲಿ ಅಫಿಡೆವಿಟ್ ಸಲ್ಲಿಸುವಾಗ ಮದುವೆಯಾದ ವಿಷಯವನ್ನು ಮುಚ್ಚಿಟ್ಟಿದ್ದರು. ಈಗ ಮಾತ್ರ ಆ ಸತ್ಯವನ್ನು ಒಪ್ಪಿಕೊಂಡಿದ್ದು ಏಕೆ? ಎಂದು ಸಿಎಂ ಪ್ರಶ್ನಿಸಿದರು. ಬಿಜೆಪಿಯವರು ಸತ್ಯವನ್ನು ಮುಚ್ಚಿಡುವುದರಲ್ಲಿ ನಿಸ್ಸೀಮರು ಎಂದು ಸಿದ್ದರಾಮಯ್ಯ ಕುಟುಕಿದರು.
ದೇವೇಗೌಡರಿಗೆ ನನ್ನ ಮೇಲೆ ಅಪಾರ ಪ್ರೀತಿ ಇದೆ
ದೇವೇಗೌಡರಿಗೆ ನನ್ನ ಮೇಲೆ ಅಪಾರವಾದ ಪ್ರೀತಿ ಇದೆ. "ಮೈಸೂರಿನಲ್ಲಿ ಜೆಡಿಎಸ್ ಗೆಲ್ಲಿಸದಿದ್ದರೆ ಅಲ್ಲಿಗೆ ಕಾಲಿಡುವುದಿಲ್ಲ" ಮುಂತಾದ ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ದೇವೇಗೌಡರು ದೇಶ ಮತ್ತು ರಾಜ್ಯದ ಹಿರಿಯ ನಾಯಕರು ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಾಹಿತಿಗಳು ಪ್ರಚಾರ ಮಾಡಿದ್ರೆ ತಪ್ಪೇ?
ಸಾಹಿತಿಗಳು ಯಾವುದೇ ಪಕ್ಷದ ಪರವಾಗಿ ಪ್ರಚಾರ ನಡೆಸಿದರೆ ಅದು ತಪ್ಪೇ? ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರಶ್ನಿಸಿದ್ದಾರೆ. ಸಾಹಿತಿಗಳು ಈ ದೇಶದ ಪ್ರಜೆಗಳು, ಅವರಿಗೂ ಒಂದು ಪಕ್ಷಕ್ಕೆ ಬೆಂಬಲ ನೀಡಲು ಸ್ವಾತಂತ್ರ್ಯವಿದೆ. ಇದನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ. ಬಿಜೆಪಿಗೂ ಹಲವಾರು ಸಾಹಿತಿಗಳು ಬೆಂಬಲ ನೀಡುತ್ತಿದ್ದಾರೆ. ನಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಾರೆ ಎಂದು ನಾವು ಅವರಿಗೆ ಪರಿಷತ್ ಸದಸ್ಯ ಸ್ಥಾನ, ನಿಗಮ ಮಂಡಳಿ ಸ್ಥಾನ ನೀಡುವುದಿಲ್ಲ. ಆಗ ಅರ್ಹರನ್ನು ಮಾತ್ರ ಆಯ್ಕೆ ಮಾಡುತ್ತೇವೆ ಎಂದರು.
ಎಲ್ಲೂ ಆಪರೇಷನ್ ಹಸ್ತ ಮಾಡಿಲ್ಲ
ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಬೇಕೆಂದು ಎಲ್ಲೂ ಕಾಂಗ್ರೆಸ್ ಆಪರೇಷನ್ ಹಸ್ತ ಮಾಡಿಲ್ಲ. ಉತ್ತರ ಕನ್ನಡದಲ್ಲಿ ಶಿವಾನಂದ ನಾಯ್ಕ್ ನಮ್ಮ ಪಕ್ಷಕ್ಕೆ ಬೆಂಬಲ ನೀಡಿಲ್ಲ. ಬೆಳಗಾವಿಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಅವರ ಪಕ್ಷದ ನಾಯಕರ ಮೇಲೆ ನಂಬಿಕೆ ಇರಲಿಲ್ಲ. ಆದ್ದರಿಂದ ನಮ್ಮ ಜೊತೆ ಕೈ ಜೋಡಿಸಿದ್ದಾರೆ ಎಂದು ಸಿಎಂ ಹೇಳಿದರು. ಜೆಡಿಎಸ್ ಬಗ್ಗೆ ಜನರಿಗೆ ನಂಬಿಕೆ ಹೋಗಿತ್ತು, ಈಗ ಅವರ ಪಕ್ಷದ ನಾಯಕರಿಗೆ ಹೋಗುತ್ತಿದೆ ಎಂದು ಸಿಎಂ ಲೇವಡಿ ಮಾಡಿದರು.
ಬಿಎಸ್ವೈ, ರಾಮುಲು ಬಂದ್ರು ಏನೂ ಆಗೋಲ್ಲ
ಬಿಜೆಪಿಗೆ ಬಿ.ಶ್ರೀರಾಮುಲು ಮತ್ತು ಯಡಿಯೂರಪ್ಪ ಮರಳಿದರೆ ಅವರ ಶಕ್ತಿ ಹೇಗೆ ಹೆಚ್ಚುತ್ತದೆ? ಎಂದು ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯ, ಇಬ್ಬರು ಕಳಂಕಿತರು ಎಂಬ ಆರೋಪ ಹೊತ್ತಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ. ಅವರ ಶಕ್ತಿ ಹೆಚ್ಚಿಲ್ಲ. ಉಭಯ ನಾಯಕರು ಬಂದಿದ್ದರಿಂದ ಪಕ್ಷಕ್ಕೆ ಹೆಚ್ಚು ಸ್ಥಾನ ಬರುವುದಿಲ್ಲ ಎಂದರು.