ಕಾಂಗ್ರೆಸ್ ಸೇರಲು ಮುಂದಾಗಿದ್ದರೇ ಕುಮಾರಸ್ವಾಮಿ?
ನವದೆಹಲಿ/ಬೆಂಗಳೂರು, ಆ 11: ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಸೇರಲು ಮುಂದಾಗಿದ್ದರು ಎನ್ನುವ ಸುದ್ದಿ ರಾಜಧಾನಿ ದೆಹಲಿಯಲ್ಲಿ, ಜೆಡಿಎಸ್ ಮತ್ತು ಕಾಂಗ್ರೆಸ್ ವಲಯದಲ್ಲಿ ಕೆಲವು ದಿನಗಳ ಹಿಂದೆ ಹರಿದಾಡುತ್ತಿದ್ದವು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಪಕ್ಷದ ಚುನಾವಣಾ ಪ್ರಚಾರದ ವಿಚಾರದಲ್ಲಿ ದೇವೇಗೌಡರದ್ದು ಏಕಪಕ್ಷೀಯ ನಿರ್ಧಾರವಾಗಿತ್ತು. ಇದರಿಂದ ತನ್ನ ಮಾತಿಗೆ ಬೆಲೆಯಿಲ್ಲ ಎಂದು ನೊಂದು ಕುಮಾರಸ್ವಾಮಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುವುದನ್ನು ಕಮ್ಮಿ ಮಾಡಿದ್ದರು ಎನ್ನುವುದು ಕುಮಾರಸ್ವಾಮಿ ಆಪ್ತ ವಲಯದಲ್ಲಿ ಹರಿದಾಡುತ್ತಿದ್ದ ಸುದ್ದಿ.
ಜೆಡಿಎಸ್ ನಲ್ಲಿನ ಈ ಬೆಳವಣಿಗೆಯಿಂದ ಕಾಂಗ್ರೆಸ್ ಹೈಕಮಾಂಡ್ ಒಕ್ಕಲಿಗ ಸಮದಾಯದ ಪ್ರಭಾವಿ ಮುಖಂಡ ಕುಮಾರಸ್ವಾಮಿಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಕಸರತ್ತು ಆರಂಭಿಸಿತ್ತು ಎನ್ನುವ ಸುದ್ದಿಗೆ ಕುಮಾರಸ್ವಾಮಿಯವರ ಆಪ್ತರೂ ತಲೆದೂಗಿಸಿದ್ದರು.
ಇದರ ಗಂಭೀರತೆಯನ್ನರಿತ ದೊಡ್ದಗೌಡ್ರು ತಡ ಮಾಡದೇ ಆಖಾಡಕ್ಕಿಳಿದು ಲೋಕಸಭೆಯ ಅಧಿವೇಶನ ನಡೆಯುತ್ತಿರುವುದರಿಂದ ಕುಮಾರಸ್ವಾಮಿಯವರನ್ನು ದೆಹಲಿಗೆ ಕರೆಸಿಕೊಂಡಿದ್ದರು. ಅಲ್ಲದೇ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋನಿಯಾ ಆಪ್ತ ಅಹಮದ್ ಪಟೇಲ್ ಜೊತೆ ಕೂಡಾ ಚರ್ಚಿಸಿದ್ದರು ಎನ್ನುವುದು ದೆಹಲಿ ವಲಯದಲ್ಲಿ ಹರಿದಾಡುತ್ತಿದ್ದ ಸುದ್ದಿ.
ಮಾನಸಿಕವಾಗಿ ಈ ಅನಿರೀಕ್ಷಿತ ಬೆಳವಣಿಗಿಂದ ಹೊರಬರಲು ಗೌಡ್ರು, ರೇವಣ್ಣ ಮತ್ತು ಕುಮಾರಸ್ವಾಮಿ ಇಬ್ಬರನ್ನೂ ದೆಹಲಿಗೆ ಕರೆಸಿ ಬುದ್ದಿವಾದ ಹೇಳಿ ಸಮಾಧಾನ ಮಾಡಿ ಕಳುಹಿಸಿದ್ದರು ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೆಲ್ಲಾ ಗಾಳಿಸುದ್ದಿ, ನಾನ್ಯಾಕೆ ಕಾಂಗ್ರೆಸ್ ಸೇರಲಿ ಎಂದು ಕುಮಾರಸ್ವಾಮಿ ದೆಹಲಿಯಲ್ಲಿ ಸ್ಪಷ್ಟನೆ ನೀಡಿದ್ದರು. (ಅದೆಲ್ಲಾ ಗಾಳಿಸುದ್ದಿ, ಕುಮಾರಸ್ವಾಮಿ)
ಪಕ್ಷದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಚರ್ಚೆ
ಜೆಡಿಎಸ್ ಪಕ್ಷಕ್ಕೆ ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಕೂಡಾ ಗೌಡ್ರು ತನ್ನ ಇಬ್ಬರು ಮಕ್ಕಳ ಜೊತೆ ಚರ್ಚಿಸಿದ್ದರು. ಇದೇ ತಿಂಗಳು 16ರಂದು ಅರಮನೆ ಮೈದಾನದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಮಾವೇಶವನ್ನು ಕರೆಯಲು ಗೌಡ್ರು ಆದೇಶ ನೀಡಿದ್ದರು.
ತೀವ್ರವಾಗಿ ಕಾಡಿದ್ದ ದುಡ್ಡಿನ ಸಮಸ್ಯೆ
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಪಕ್ಷದ ವರಿಷ್ಠರಿಂದ ಚುನಾವಣೆ ಖರ್ಚಿಗೆ ಹಣಕಾಸಿನ ನೆರವನ್ನು ಕೇಳಿದ್ದರು. ಇದಕ್ಕೆ ಜೆಡಿಎಸ್ ಸ್ಪಂದಿಸಿದೇ ಇದ್ದಾಗ ಕೆಲವು ಅಭ್ಯರ್ಥಿಗಳು ಕಣದಿಂದಲೇ ಹಿಂದೆ ಸರಿದಿದ್ದರು.
ಗೌಡ್ರು ಮತ್ತು ಕುಮಾರಸ್ವಾಮಿ ನಡುವೆ ಮನಸ್ತಾಪ
ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ (ಶಿಕಾರಿಪುರ, ಚಿಕ್ಕೋಡಿ ಸದಲಗಾ, ಬಳ್ಳಾರಿ ಗ್ರಾಮಾಂತರ) ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ನಡುವೆ ಮನಸ್ತಾಪ ಉಂಟಾಗಿತ್ತು.
ಉಪಚುನಾವಣೆ ನಡೆಯುವ ಮೂರೂ ಕ್ಷೇತ್ರ
ಉಪಚುನಾವಣೆ ನಡೆಯುವ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ನೆಲೆಯಿಲ್ಲ. ಒಂದು ವೇಳೆ ಅಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಆರ್ಥಿಕ ವಿಚಾರವನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳು ಹಿಂದಕ್ಕೆ ಸರಿದರೆ ಪಕ್ಷ ಇನ್ನಷ್ಟು ಮುಜುಗರ ಎದುರಿಸ ಬೇಕಾಗುತ್ತದೆ ಎನ್ನುವುದನ್ನು ಗೌಡ್ರು ಇಬ್ಬರೂ ಮಕ್ಕಳಿಗೆ ಮನವರಿಕೆ ಮಾಡಿದ್ದಾರೆ ಎನ್ನುವುದು ಸುದ್ದಿ.
ಕಾಂಗ್ರೆಸ್ ಸೇರುವುದು ಪರಿಹಾರವಲ್ಲ
ರಾಜಕೀಯದಲ್ಲಿ ಸೋಲು, ಗೆಲುವು ಇದ್ದಿದ್ದೇ, ಅದಕ್ಕೆ ಕಾಂಗ್ರೆಸ್ ಸೇರುವುದು ಪರಿಹಾರವಲ್ಲ. ಕಾಂಗ್ರೆಸ್ ರಾಷ್ಟೀಯ ಪಕ್ಷ, ಎಲ್ಲರಂತೇ ನೀನೂ ಒಬ್ಬ. ಜೆಡಿಎಸ್ ನಲ್ಲಿ ನಿನಗಿದ್ದಷ್ಟು ಇದ್ದಷ್ಟು ಬೆಲೆ, ಕಾಂಗ್ರೆಸ್ ನಲ್ಲಿರುವುದಿಲ್ಲ. ಕಷ್ಟದಲ್ಲಿರುವ ಪಕ್ಷವನ್ನು ಮೇಲೆತ್ತುವುದೇ ನಮಗಿರುವ ನಿಜವಾದ ಸವಾಲು ಎಂದು ಗೌಡ್ರು ಇಬ್ಬರಿಗೂ ಮನವರಿಕೆ ಮಾಡಿದ್ದಾರೆ ಎನ್ನುವುದು ಸುದ್ದಿ.ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಕುಮಾರಸ್ವಾಮಿಗೆ ಮತ್ತು ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ರೇವಣ್ಣ ಅವರಿಗೆ ನೀಡಲು ಗೌಡ್ರು ಮುಂದಾಗಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.