ಮತ್ತೆ ಬಟಾಬಯಲಾದ ಸಿಎಂ ಸಿದ್ದು, ಪರಮೇಶ್ವರ್ ಗುದ್ದಾಟ
ಬೆಳಗಾವಿ, ಸೆ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ನಡುವೆ ಏನೂ ಸರಿಯಿಲ್ಲ ಎನ್ನುವ ಕಟುಸತ್ಯ ಈಗ ನಾಲ್ಕು ಗೋಡೆಯ ನಡುವೆ ರಹಸ್ಯವಾಗಿ ಉಳಿದಿಲ್ಲ. ಇವರಿಬ್ಬರ ಮುಸುಕಿನ ಗುದ್ದಾಟ ಮತ್ತೊಮ್ಮೆ ಬಟಾಬಯಲಾಗಿದೆ.
ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಇಬ್ಬರು ನಾಯಕರು ಭಾಗವಹಿಸದೇ 'ನಾನೊಂದು ತೀರ, ನೀನೊಂದು ತೀರ' ಎಂದು ವಿರುದ್ದ ದಿಕ್ಕಿನಲ್ಲಿ ಸಾಗಿ, ನಡೆಯಬೇಕಾಗಿದ್ದ ನಿಗಮ ಮಂಡಳಿ ಸಭೆ ನಡೆಯಲೇ ಇಲ್ಲ. ಇಬ್ಬರ ನಡುವಿನ ಮಾತುಕತೆಯ ನಂತರ ಸಿಹಿಸುದ್ದಿ ಬರಬಹುದು ಎಂದು ಕಾತುರದಿಂದ ಕಾಯುತ್ತಿದ್ದವರು, ನಿರಾಶೆಯಿಂದ ಹೊರನಡೆದರು.
ಮೊನ್ನೆ ಸೋಮವಾರ (ಸೆ15) ಸಂಪುಟ ಪುನಾರಚನೆ, ನಿಗಮ ಮಂಡಳಿ ನೇಮಕಾತಿ ಬಗ್ಗೆ ಇಬ್ಬರು ನಾಯಕರ ನಡುವೆ ಬೆಂಗಳೂರಿನಲ್ಲಿ ನಡೆಯ ಬೇಕಾಗಿದ್ದ ಸುದೀರ್ಘ ಸಭೆ ನಲವತ್ತು ನಿಮಿಷದಲ್ಲೇ ಬರ್ಖಾಸ್ತು ಗೊಂಡಿತ್ತು. ಜೊತೆಗೆ, ಬುಧವಾರ (ಸೆ17) ನಡೆಯಬೇಕಾಗಿದ್ದ ಸಭೆ ಕೂಡಾ ಇಬ್ಬರು ನಾಯಕರ ಉಪಸ್ಥಿತಿಯಿಂದ ನಡೆಯದೇ ಇದ್ದುದ್ದರಿಂದ ಆಕಾಂಕ್ಷಿಗಳು ಮತ್ತಷ್ಟು ನಿರಾಶೆ ಅನುಭವಿಸುವಂತಾಗಿದೆ.
ಬೆಳಗಾವಿಯಲ್ಲಿ ಬುಧವಾರ ನಡೆದ ವಿಶ್ವಕರ್ಮ ಸಮುದಾಯದ ಭಾರೀ ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಭಾಗವಹಿಸಿದ್ದರು. ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರು ಆಬ್ಸೆಂಟ್ ಆಗಿದ್ದರು.
ವಿಶ್ವಕರ್ಮ ಸಮುದಾಯದ ಸಭೆಯ ನಂತರ ಇಬ್ಬರ ಸಮ್ಮುಖದಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ ನಡುವೆ ಮಾತುಕತೆ ನಡೆದು ಆಕಾಂಕ್ಷಿಗಳ ಪಟ್ಟಿಗೆ ಅಂತಿಮ ಸಿಗ್ನಲ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು ಆಕಾಂಕ್ಷಿಗಳು.
ಆದರೆ ನಡೆದಿದ್ದೇ ಬೇರೆ, ಮುಂದೆ ಓದಿ..
ಬರಲೇ ಇಲ್ಲ, ಇಬ್ಬರೂ: ಇದ್ದರು ಓನ್ಲಿ ಡಿಗ್ಗಿ
ದಿಗ್ವಿಜಯ್ ಸಿಂಗ್ ರಾಜ್ಯದಲ್ಲಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿ ಎನ್ನವಂತೆ ಇಬ್ಬರು ನಾಯಕರು ಪ್ರಮುಖ ಕಾರ್ಯಕ್ರಮಕ್ಕೆ ಗೈರಾಗಿದ್ದರು. ವಿಶ್ವಕರ್ಮ ಸಮುದಾಯದ ಸಮಾವೇಶದಲ್ಲಿ ಸಿದ್ದು ಅಥವಾ ಪರಮೇಶ್ವರ್ ಭಾಗವಹಿಸಲಿಲ್ಲ.
ಒಬ್ಬರು ದೆಹಲಿಯಲ್ಲಿ, ಇನ್ನೊಬ್ಬರು ಗುಲ್ಬರ್ಗದಲ್ಲಿ
ವಿಶ್ವಕರ್ಮ ಸಮುದಾಯದ ಸಮಾವೇಶದಲ್ಲಿ ಸಿದ್ದು, ಪರಮೇಶ್ವರ್ ಗೈರುಹಾಜರು ಎದ್ದು ಕಾಣುತ್ತಿತ್ತು. ಸೋಮವಾರದ ಸಭೆಯ ನಂತರ ದೆಹಲಿಯಲ್ಲಿ ಬೀಡು ಬಿಟ್ಟಿರುವ ಪರಮೇಶ್ವರ್ ರಾಜ್ಯಕ್ಕೆ ವಾಪಸಾಗಲಿಲ್ಲ. ಇನ್ನು ಸಿದ್ದರಾಮಯ್ಯ ಗುಲ್ಬರ್ಗದಲ್ಲಿ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದರು.
ಸೋನಿಯಾ ಭೇಟಿ ಮಾಡಿದ ಪರಮೇಶ್ವರ್
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಪರಮೇಶ್ವರ್, ನಿಗಮ ಮಂಡಳಿ ಹುದ್ದೆಯನ್ನೂ ವಲಸಿಗರಿಗೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಮುಖ್ಯಮಂತ್ರಿಗಳು ಸಂಪೂರ್ಣವಾಗಿ ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆಂದು ಪರಮೇಶ್ವರ್, ಸೋನಿಯಾ ಬಳಿ ನೋವು ತೋಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಸೋನಿಯಾ ಸಂದೇಶ ಓದಿದ ದಿಗ್ವಿಜಯ್
ವಿಶ್ವಕರ್ಮ ಸಮುದಾಯದವರು ದೇಶ ಕಟ್ಟುವವರು, ದೇಶ ಒಡೆಯುವವರಲ್ಲ. ಈ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಗಲಿಲ್ಲ. ರಾಜಕೀಯವಾಗಿ ಈ ಸಮುದಾಯದವರಿಗೆ ಮುಂದಿನ ದಿನದಲ್ಲಿ ಸ್ಥಾನಮಾನ ಒದಗಿಸಲಾಗುವುದು ಎಂದು ದಿಗ್ವಿಜಯ್ ಸಿಂಗ್, ಸೋನಿಯಾ ಸಂದೇಶವನ್ನು ಕಾರ್ಯಕ್ರಮದಲ್ಲಿ ಓದಿದ್ದಾರೆ.
ದಿಗ್ವಿಜಯ್ ಸಿಂಗ್ ವಾಪಸ್
ವೇದಿಕೆಯಲ್ಲಿ ಇಬ್ಬರು ತನ್ನ ಪಕ್ಷದ ಪ್ರಮುಖ ನಾಯಕರು ಅನುಪಸ್ಥಿತಿ ಕಾಡಿದ್ದರೂ, ವಿಶ್ವಕರ್ಮ ಸಮುದಾಯದ ಸಮಾವೇಶವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಕೆ ಪಿ ನಂಜುಂಡಿಯವರಿಗೆ ದಿಗ್ವಿಜಯ್ ಸಿಂಗ್ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿ ಮೊಬೈಲ್ ನಲ್ಲಿ ಬ್ಯೂಸಿಯಾಗಿದ್ದ ದಿಗ್ವಿಜಯ್, ಕಾರ್ಯಕ್ರಮದ ನಂತರ ತಡಮಾಡದೇ ರಾಜಧಾನಿಗೆ ವಾಪಸಾಗಲು ಸಜ್ಜಾದರು.