ಫಲಿತಾಂಶ ಬರುತ್ತಿದ್ದಂತೆ ಸಿದ್ದು ಸಂಪುಟ ವಿಸ್ತರಣೆ
ಬೆಂಗಳೂರು, ಏ.23- ಲೋಕಸಭೆ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಪುನಾರಚನೆ ಕೈಗೊಳ್ಳುವುದು ದಿಟವಾಗಿದೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಹಾಲಿ ಸಂಪುಟದಲ್ಲಿರುವ ಕೆಲವು ಸಚಿವರಲ್ಲಿ ಆತಂಕ ಶುರುವಾಗಿದೆ. ಇದೇ ವೇಳೆ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಉತ್ಸಾಹ ಗರಿಗೆದರಿದೆ.
ಈ ಬಾರಿ ಸಂಪುಟ ಪುನಾರಚನೆ ವೇಳೆ ಯುವ ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದು, ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಬೆಳೆಯುತ್ತಿದೆ. ಒಂದೆರಡು ಸ್ಥಾನಗಳನ್ನು ಹಿರಿಯ ಶಾಸಕರಿಗೆ ನೀಡಿ ಉಳಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮುಖಗಳನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಗೆಲುವು ನಿರೀಕ್ಷಿಸಿರುವ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳು ಸೋತರೆ ಅಂಥ ಕ್ಷೇತ್ರಗಳ ಉಸ್ತುವಾರಿ ಸಚಿವರ ತಲೆದಂಡ ಖಚಿತ ಎನ್ನಲಾಗುತ್ತಿದೆ. ಅದು ಬಿಟ್ಟು, ಒಂದೆರಡು ಸ್ಥಾನಗಳನ್ನು ಹಿರಿಯ ಶಾಸಕರಿಗೆ ನೀಡಿ ಉಳಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮುಖಗಳನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ. ಪ್ರಮುಖವಾಗಿ ರಮೇಶ್ ಕುಮಾರ್, ಮಾಲೀಕಯ್ಯ ಗುತ್ತೇದಾರ್, ಬಸವರಾಜ ರಾಯರೆಡ್ಡಿ, ಕೆಬಿ ಕೋಳಿವಾಡ್, ಹ್ಯಾರಿಸ್ ಸೇರಿದಂತೆ ಇನ್ನೂ ಹಲವು ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ಮಾಮೂಲಾಗಿ ಗೆಲುವು ನಿರೀಕ್ಷಿಸದ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡರೆ ಆ ಭಾಗದ ಸಚಿವರ ಮೇಲೆ ಅದು ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಇದೇ ವೇಳೆ ಸಂಪುಟದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಚಿವರ ಬದಲಾವಣೆಗೆ ಕೂಡ ಸಿದ್ದರಾಮಯ್ಯ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಾಸನದಲ್ಲಿ ದೇವೇಗೌಡರ ವಿರುದ್ಧ ಕಣಕ್ಕಿಳಿದಿರುವ ಎ ಮಂಜು ಹಾಗೂ ಧಾರವಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ವಿರುದ್ಧ ಸ್ಪರ್ಧಿಸಿರುವ ವಿನಯ್ ಕುಲಕರ್ಣಿ ಅವರು ಗೆಲುವು ಸಾಧಿಸಿದರೆ ಸಂಸತ್ತಿಗೆ ಹೋಗುವುದು ಖಚಿತ. ಒಂದು ವೇಳೆ ಈ ಅಭ್ಯರ್ಥಿಗಳು ಪರಾಭವಗೊಂಡರೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹಾಗೂ ಹಿರಿಯ ಶಾಸಕ ವೀರಣ್ಣ ಮತ್ತಿಕಟ್ಟಿ ಅವರನ್ನು ಕೂಡ ಸಂಪುಟಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.