'ಜನರ ಸಮಸ್ಯೆ ಆಲಿಸಲು ನಿಮಗೇನು ಧಾಡಿ?'
ಬೆಂಗಳೂರು, ಸೆ. 20: ಜನರ ಮತ್ತು ಜಿಲ್ಲೆಯ ಸಮಸ್ಯೆ ಆಲಿಸಲು ನಿಮಗೇನು ಧಾಡಿ? ಜನರು ಯಾವ ತೊಂದರೆ ಅನುಭವಿಸುತ್ತಿದ್ದಾರೆ ಆಲಿಸುವ ಪ್ರಯತ್ನವನ್ನಾದರೂ ಮಾಡಿದ್ದೀರಾ? ಹೀಗೆಂದು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಝಾಡಿಸಿದ್ದು ವಿರೋಧ ಪಕ್ಷದ ನಾಯಕರಲ್ಲ. ಅಥವಾ ಸ್ಪೀಕರ್ ಕಾಗೋಡು ತಿಮ್ಮಪ್ಪನವರು ಅಲ್ಲ. ಬದಲಾಗಿ ಈ ಬಾರಿಯ ಸರದಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು.
ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮತ್ತು ಸದ್ಯದ ರಾಜಕೀಯ ಬೆಳವಣಿಗೆ ಕುರಿತು ಬೆಂಗಳೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಸಚಿವರನ್ನು ತರಾಟೆಗೆ ತೆಗೆದುಕೊಂಡರು.(ಹೀರೋ ಮೋಟೊಕಾರ್ಪ್ ಕೈ ತಪ್ಪಲು ನಾವು ಕಾರಣರಲ್ಲ)
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಜನ ಪ್ರತಿದಿನ ತೊಂದರೆಪಡುತ್ತಿದ್ದಾರೆ. ಇದ್ಯಾವುದೂ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ? ಜನ ಪ್ರತಿಭಟನೆಗೆ ಸಜ್ಜಾಗುವ ಮುನ್ನ ಸ್ಪಂದಿಸಿ ಎಂದು ಸೂಚನೆ ನೀಡಿದರು.
ನಿಗಮ ಮಂಡಳಿ: ಅಹಿಂದಕ್ಕೆ ಸಿಂಹಪಾಲು
ನಿಗಮ ಮಂಡಳಿ ನೇಮಕ ಕುರಿತು ಸಭೆಯಲ್ಲಿ ಗಹನವಾದ ಚರ್ಚೆ ನಡೆಯಿತು. ಅಹಿಂದಕ್ಕೆ ಶೇ. 60 ಮತ್ತು ಸಾಮಾನ್ಯ ವರ್ಗಕ್ಕೆ ಶೇ. 40 ಅನುಪಾತದಲ್ಲಿ ಅಧ್ಯಕ್ಷ ಸ್ಥಾನ ನೀಡಲು ಸಭೆ ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ
ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ನಡುವೆ ಯಾವ ಭಿನ್ನಾಭಿಪ್ರಾಯವಿಲ್ಲ. ಮಾಧ್ಯಮಗಳು ವದಂತಿಗಳನ್ನು ಸೃಷ್ಟಿ ಮಾಡುತ್ತಿವೆ. ಪಕ್ಷದಲ್ಲಿ ಎಲ್ಲರೂ ಒಟ್ಟಾಗಿದ್ದು ರಾಜ್ಯದ ಅಭಿವೃದ್ಧಿ ನಿರಂತರವಾಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಬಿಎಂಪಿ 3 ಭಾಗ ಮಾಡಲು ಚಿಂತನೆ
ಆಡಳಿತದ ಅನುಕೂಲಕ್ಕಾಗಿ ಬಿಬಿಎಂಪಿಯನ್ನು ಮೂರು ಭಾಗಗಳಾಗಿ ವಿಂಗಡಿಸುವ ಚಿಂತನೆಯಿದೆ. ಪಾರದರ್ಶಕ ಮತ್ತು ಕ್ಷಿಪ್ರ ಆಡಳಿತಕ್ಕೆ ಇದು ನೆರವಾಗಲಿದೆ ಎಂದು ಹೇಳಿದರು.ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಸೇರಿದಂತೆ ಎಲ್ಲಾ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು.
ಸಿದ್ದರಾಮಯ್ಯಗೂ ಕಾಗೋಡು ಗಾಳಿ ಬೀಸಿತೆ?
ಇಷ್ಟು ದಿನ ಸಚಿವರನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆಡಳಿತ ಪಾರದರ್ಶಕವಾಗಿಲ್ಲ. ಜನಪರ ಕೆಲಸಗಳಾಗುತ್ತಿಲ್ಲ ಎಂದು ಪದೇ ಪದೇ ಸರ್ಕಾರದ ಮೇಲೆ ಚಾಟಿ ಬೀಸುತ್ತಿದ್ದರು. ಈಗ ಸ್ವತಃ ಮುಖ್ಯಮಂತ್ರಿಯೇ ತನ್ನ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.