ಚಿಕ್ಕಬಳ್ಳಾಪುರ: ಬರ ಪ್ರದೇಶದಲ್ಲಿ ವಲಸೆ ಹಕ್ಕಿಗಳ ಕಲರವ
ಚಿಕ್ಕಬಳ್ಳಾಪುರ, ಏ.2: ಅಳೆದು ಸುರಿದು ಸಾಕಷ್ಟು ಕಣ್ಣಾಮುಚ್ಚಾಲೆ ನಂತರ ಕೊನೆಗೂ ರಾಮನಗರ ಶಾಸಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಣಕ್ಕಿಳಿದ ಬಳಿಕ ಚಿಕ್ಕಬಳ್ಳಾಪುರ ಮಹಾತ್ಮೆ ಇದೀಗ ಲೋಕಪ್ರಿಯವಾಗಿದೆ.
ಅವರ ಎದುರಾಳಿಯಾಗಿ ವೀರಪ್ಪ ಮೊಯ್ಲಿ ಸಹ ವಲಸೆ ಹಕ್ಕಿ ಅನ್ನಿಸಿದ್ದರಾದರೂ ಬರದ ನಾಡಿನಲ್ಲಿ ಗೂಡು ಕಟ್ಟಿಕೊಂಡು ಸಾಕಷ್ಟು ಕಾಲವಾಗಿದೆ. ಇನ್ನು 'ಸ್ಥಳೀಯ' ಎನಿಸಿರುವ ಬಿಜೆಪಿಯ ಕೆಎನ್ ಬಚ್ಚೇಗೌಡರು ಈ ಇಬ್ಬರೂ ಮಾಜಿ ಮುಖ್ಯಮಂತ್ರಿಗಳಿಗೆ ಬೆವರು ಇಳಿಸುತ್ತಿದ್ದಾರೆ. (ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಮಹಿಮೆ)
ಹಾಗೆ ನೋಡಿದರೆ ಕಳೆದ (2009) ಚುನಾವಣೆಯಲ್ಲಿ ಬಿಜೆಪಿಯ ಸಿ ಅಶ್ವತ್ಥನಾರಾಯಣ, ಮೊಯ್ಲಿಗೆ ಸುಲಭದ ತುತ್ತಾಗಿದ್ದರು. ಆದರೂ ಕೇವಲ 51 ಸಾವಿರ ಮತಗಳ ಅಂತರದಿಂದ ಜಯ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಘಟಾನುಘಟಿಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ನೋಡಿದರೆ ಜಯದ ಅಂತರ ಇದಕ್ಕಿಂತ ಕಡಿಮೆಯಾಗುವ ಅಂದಾಜಿದೆ.[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಕ್ಷೇತ್ರದಲ್ಲಿ ಇಬ್ಬರು ಮಾತ್ರ ಜೆಡಿಎಸ್ ಶಾಸಕರಿದ್ದರೂ 16 ಲಕ್ಷ ಮತದಾರರ ಪೈಕಿ 2 ಲಕ್ಷದಷ್ಟಿರುವ ಒಕ್ಕಲಿಗರನ್ನು ನೆಚ್ಚಿಕೊಂಡು ಕಣಕ್ಕಿಳಿದಿದ್ದಾರೆ. ಅತ್ತ ಮೊಯ್ಲಿಗೆ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ತೀರಾ ಚುನಾವಣೆ ಸಮಯದಲ್ಲಿ ಕ್ಷೇತ್ರದಲ್ಲಿ ಅಡ್ಡಾಡಿ 'ಮೊಯ್ಲಿ ಕಡು ಭ್ರಷ್ಟ' ಎಂದು ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಗಮನಾರ್ಹವೆಂದರೆ 1977 ರಿಂದ ಕ್ಷೇತ್ರವು ಕಾಂಗ್ರೆಸ್ ಹಿಡಿತದಲ್ಲಿದೆ (1996ರಲ್ಲಿ ಒಮ್ಮೆ ಮಾತ್ರವೇ ಅಪಜಯ ಅನುಭವಿಸಿತ್ತು). ಕ್ಷೇತ್ರದ ಹಳ್ಳಿಗಳಲ್ಲಿ ಇಂದಿಗೂ ಕಾಂಗ್ರೆಸ್ ಅಂದರೆ ಇಂದಿರಮ್ಮ ಕಣ್ಮುಂದೆ ಬರುತ್ತಾರೆ. ಅಷ್ಟರ ಮಟ್ಟಿಗೆ ಮೊಯ್ಲಿ ಸೇಫ್. ಜತೆಗೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ (2009ರ ನಂತರ 2013ರ ವೇಳೆಗೆ) ಕಾಂಗ್ರೆಸ್ ಪಕ್ಷವು ಇನ್ನೂ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ತನ್ನ ಬಗಲಿಗೆ ಹಾಕಿಕೊಂಡಿದೆ. ಲೆಕ್ಕದಲ್ಲಿ ಹೆಚ್ಚಲಿ ಎಂದು ಪಕ್ಷೇತರ ಶಾಸಕ ಸುಬ್ಬಾ ರೆಡ್ಡಿ ಕಾಂಗ್ರೆಸ್ ಕೈಹಿಡಿದ್ದಾರೆ.