ಉಡುಪಿಗೆ ಹೋಗಿದ್ದ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಹೋಗಿದ್ರಾ?
ನಾಡಿನ ದೊರೆ ಸಿದ್ದರಾಮಯ್ಯ ಶನಿವಾರ (ಸೆ 27) ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸದಲ್ಲಿದ್ದರು. ಎರಡು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದು ಉಡುಪಿಯ ಐತಿಹಾಸಿಕ ಕೃಷ್ಣಮಠಕ್ಕೆ ಮಾತ್ರ ಭೇಟಿ ನೀಡಲೇ ಇಲ್ಲ.
ಪಕ್ಷಾತೀತವಾಗಿ ಮುಖ್ಯಮಂತ್ರಿಯೊಬ್ಬರು ಯಾವುದೇ ಜಿಲ್ಲೆಗೆ ಭೇಟಿ ನೀಡಿದಾಗ ಅಲ್ಲಿನ ಪ್ರಸಿದ್ದ ಸ್ಥಳ ಮತ್ತು ಧಾರ್ಮಿಕ ಮುಖಂಡರನ್ನು ಭೇಟಿ ಮಾಡುವುದು ಈ ಹಿಂದೆಯಿಂದಲೂ ನಡೆದುಕೊಂಡು ಬರುತ್ತಿರುವ ಪದ್ದತಿ, ಆದರೆ ಶಿಷ್ಟಾಚಾರವಲ್ಲ. ಹಾಗಂತ, ಸಿದ್ದು ಕೃಷ್ಣಮಠಕ್ಕೆ ಭೇಟಿ ನೀಡದೇ ಇದ್ದದ್ದು ಅಪವಾದವೆಂದೇನಲ್ಲ.
ಸಿದ್ದು ನಾಸ್ತಿಕರಿರಬಹುದು ಅದಕ್ಕೇ ದೇವಾಲಯಕ್ಕೆ ಭೇಟಿ ನೀಡಲಿಲ್ಲ ಎಂದೂ ಹೇಳುವ ಹಾಗೂ ಇಲ್ಲ. ಯಾಕೆಂದರೆ, ಉಡುಪಿಯ ಬೆಣ್ಣೆಕುದ್ರುವಿನಲ್ಲಿರುವ ಕುಲಮಹಶ್ರೀ ಅಮ್ಮ ದೇವಾಲಯದ ಗುರುಪೀಠವನ್ನು ಸಿಎಂ ಶನಿವಾರ ಉದ್ಘಾಟಿಸಿದ್ದರು.
ಅಲ್ಲದೇ, ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಜನಾರ್ಧನ ಪೂಜಾರಿ ಸಮ್ಮುಖದಲ್ಲಿ ದಸರಾ ಹಬ್ಬವನ್ನೂ ಉದ್ಘಾಟಿಸಿದ್ದರು. ಹಾಗಾಗಿ, ಸಿದ್ದು ದೇವಾಲಯಕ್ಕೆ ಹೋಗುವುದಿಲ್ಲ ಎನ್ನುವ ವಾದವನ್ನು ಪಕ್ಕಕ್ಕೆ ಸರಿಸಲು ಅಡ್ಡಿಯಿಲ್ಲ.
ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಕೃಷ್ಣಮಠವನ್ನು ಮುಜರಾಯಿ ಇಲಾಖೆಗೆ ವಹಿಸ ಬೇಕೆನ್ನುವ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಸಿದ್ದು, ಈ ಹಿಂದೆ ಉಡುಪಿಗೆ ಭೇಟಿ ನೀಡಿದ್ದಾಗಲೂ ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆಗ ಅವರು ಮುಖ್ಯಮಂತ್ರಿಗಳಾಗಿರಲಿಲ್ಲ.
ಹಾಗಿದ್ದಾಗ, ಸಿದ್ದು ಕೃಷ್ಣಮಠಕ್ಕೆ ಹೋಗದೇ ಇರಲು ಕಾರಣ ಏನಿರಬಹುದು?
ಕೃಷ್ಣಮಠವನ್ನು ಮುಜರಾಯಿ ವ್ಯಾಪ್ತಿಗೆ
ಕೃಷ್ಣಮಠವನ್ನು ಮುಜರಾಯಿ ವ್ಯಾಪ್ತಿಗೆ ತರುವುದಕ್ಕೆ ಪ್ರಮುಖವಾಗಿ ಉಡುಪಿಯಲ್ಲಿ ವ್ಯಾಪಕ ವಿರೋಧವಿದೆ. ಆದರೂ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಮಠವನ್ನು ಸರಕಾರದ ತೆಕ್ಕೆಗೆ ತರಬೇಕೆಂದು ಹೋರಾಟ ಮಾಡುತ್ತಲೇ ಬಂದವರು.
ಹಿರಿಯ ಶ್ರೀಗಳನ್ನು ಭೇಟಿ ಮಾಡಿದ ಸಿದ್ದು
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಹೊಸದಲ್ಲಿ ನಾಡಿನ ಮೂವರು ಹಿರಿಯ ಸ್ವಾಮೀಜಿಗಳ ಪೈಕಿ ಇಬ್ಬರು ಸ್ವಾಮೀಜಿಗಳನ್ನು ಮಾತ್ರ ಸಿದ್ದು ಭೇಟಿ ಮಾಡಿದ್ದರು. ಸಿದ್ದಗಂಗಾ ಮತ್ತು ಶಿವೈಕ್ಯರಾಗಿರುವ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿದ್ದ ಸಿದ್ದು, ಇದುವರೆಗೂ ಉಡುಪಿಯ ಹಿರಿಯ ಪೇಜಾವರ ಶ್ರೀಗಳನ್ನು ಭೇಟಿಯಾಗಲಿಲ್ಲ.
ಮಡೆಸ್ನಾನ ವಿಚಾರದಲ್ಲಿ
ಮಡೆಸ್ನಾನ ವಿಚಾರದಲ್ಲೂ ಸಿಎಂ ಮತ್ತು ಪೇಜಾವರ ಶ್ರೀಗಳು ವಿರುದ್ದ ಹೇಳಿಕೆಯನ್ನು ನೀಡಿದ್ದರು. ಮುಖ್ಯಮಂತ್ರಿಯಾಗಿ ಸಿದ್ದು ಅಧಿಕಾರ ಸ್ವೀಕರಿಸಿದ ನಂತರ ನಡೆದ ಕಾಣಿಯೂರು ಶ್ರೀಗಳ ಪರ್ಯಾಯ ಮಹೋತ್ಸದಲ್ಲೂ ಮುಖ್ಯಮಂತ್ರಿಗಳು ಭಾಗವಹಿಸಲಿಲ್ಲ.
ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ಸಿದ್ದು ಹೋಗಲಿಲ್ಲ
ಉಡುಪಿಯಲ್ಲಿ ನಾಡಹಬ್ಬದಂತೆ ಆಚರಿಸುವ ಧಾರ್ಮಿಕ ಕಾರ್ಯಕ್ರಮ ಪರ್ಯಾಯ. 2013ರಲ್ಲಿ ನಡೆದ ಪರ್ಯಾಯ ಮಹೋತ್ಸವಕ್ಕೆ ಪರ್ಯಾಯ ಮಠದಿಂದ ಮುಖ್ಯಮಂತ್ರಿಗಳಿಗೆ ರಾಯಸ ಹೋಗಿತ್ತಾದ್ದರೂ, ಸಿದ್ದು ಇದರಲ್ಲಿ ಭಾಗವಹಿಸಿದೇ ಸಂಪುಟ ಸಚಿವರನ್ನು ಪರ್ಯಾಯ ಮಹೋತ್ಸವಕ್ಕೆ ಕಳುಹಿಸಿದ್ದರು.
ಕನಕ ಗೋಪುರ
ಕನಕ ಗೋಪುರ ವಿಚಾರದಲ್ಲಿ ನಡೆದ ಅನಾವಶ್ಯಕ ಗೊಂದಲಗಳು, ಆಗ ಸಿದ್ದು ನೀಡಿದ್ದ ಹೇಳಿಕೆಗಳಿಗೂ ಉಡುಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ,ಕೃಷ್ಣಮಠಕ್ಕೆ ಭೇಟಿ ನೀಡಿದರೆ ಪ್ರತಿಭಟನೆಯ ಬಿಸಿ ಎದುರಿಸ ಬೇಕಾಗಬಹುದು ಎನ್ನುವುದು ಒಂದು ಕಾರಣವಿರಬಹುದು ಅಥವಾ ಸ್ವಯಂಪ್ರತಿಷ್ಠೆ ಇದ್ದರೂ ಇರಬಹುದು.
ಮೌನವಾದ ಸಿದ್ದು
ಸಿದ್ದು ಅಧಿಕಾರಕ್ಕೆ ಬಂದ ನಂತರ ಕೃಷ್ಣಮಠವನ್ನು ಸರಕಾರೀಕರಣ ವಿಚಾರಕ್ಕೆ ಅಧಿಕೃತವಾಗಿ ಮತ್ತೆ ಚಾಲನೆ ನೀಡಿದ್ದರು. ಆದರೆ ಪಕ್ಷದೊಳಗೆಯೇ ಮತ್ತು ಇತರ ಆಯಾಮಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಸದ್ಯ ಸಿದ್ದು ಈ ವಿಚಾರದಲ್ಲಿ ಮೌನವಾಗಿದ್ದಾರೆ. ಉಡುಪಿ ಮಠಾಧೀಶರು ಕಠಿಣ ನಿಲುವು ಪ್ರದರ್ಶಿಸಿದ್ದರಿಂದ ಕೃಷ್ಣಮಠದ ವಿಚಾರದಲ್ಲಿ ಸಿದ್ದು ನಡೆಗೆ ಹಿನ್ನಡೆಯಾಗಿದೆ.
ಮುಂದಿನ ವರ್ಷ ಪೇಜಾವರರ ಪರ್ಯಾಯ
ಮುಂದಿನ ವರ್ಷ (2015) ಮತ್ತೆ ಪರ್ಯಾಯ ಮಹೋತ್ಸವ ನಡೆಯಲಿದೆ. ದಾಖಲೆಯ (ವಾದಿರಾಜ ಗುರುಗಳ ನಂತರ) ಐದನೇ ಬಾರಿಗೆ ಪೇಜಾವರ ಹಿರಿಯ ಶ್ರೀಗಳು ಪರ್ಯಾಯ ಪೀಠವನ್ನೇರಲಿದ್ದಾರೆ. ಆಗಲಾದರೂ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.