ಕಾಂಗ್ರೆಸ್ಸಿಗೆ ಸೇರಿ ನಾನು ಸಿಎಂ ಆದೆ, ನೀನು ಏನಾದೆ?
ಬೆಂಗಳೂರು, ಜು 25: ಅಲ್ಲಪ್ಪಾ ನಿನಗೆ ಬಿಜೆಪಿಗೆ ಹೋಗಬೇಡಾಂದೆ, ನನ್ನ ಮಾತು ನೀನು ಕೇಳಲಿಲ್ಲ. ಈಗ ನೋಡು, ನಾನು ಸಿಎಂ ಆದೆ, ನೀನು ಚುನಾವಣೆಯಲ್ಲಿ ಸೋತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಖಂಡ ವಿ ಸೋಮಣ್ಣ ಅವರನ್ನು ವ್ಯಂಗ್ಯವಾಗಿ ಲೇವಡಿ ಮಾಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಗುರುವಾರ (ಜು 24) ಲೋಕಾಭಿರಾಮವಾಗಿ ಸಿದ್ದರಾಮಯ್ಯ ಮತ್ತು ಸೋಮಣ್ಣ ತಮ್ಮ ರಾಜಕೀಯ ಜೀವನದ ಏರಿಳಿತದ ಬಗ್ಗೆ ಮಾತನಾಡುತ್ತಿದ್ದ ವೇಳೆ ಮುಖ್ಯಮಂತ್ರಿಗಳು ಈ ಮಾತಿನ ಪ್ರಹಾರವನ್ನು ಹರಿಯ ಬಿಟ್ಟಿದ್ದಾರೆ.
ರಾಜಕೀಯದಲ್ಲಿ ಪಕ್ಷಾಂತರ ಎನ್ನುವುದು ಸಹಜ. ನಾನು ಮತ್ತು ನೀವು ಜೆಡಿಎಸ್ ನಲ್ಲಿದ್ದೆವು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ. ನೀವು ಬಿಜೆಪಿಗೆ ಸೇರಿದ್ರಿ. ಬಿಜೆಪಿಗೆ ಸೇರುವಾಗ ನಾನು ಆ ಪಕ್ಷವನ್ನು ಸೇರಬೇಡಿ ಎಂದೆ, ನೀವು ನನ್ನ ಮಾತು ಕೇಳಲಿಲ್ಲ. (ನಿಮಗೆ ರೇಪ್ ಬಿಟ್ರೆ ಬೇರೆ ವಿಷಯ ಇಲ್ವಾ)
ಈಗ ನೋಡು, ಕಾಂಗ್ರೆಸ್ ಸೇರಿ ನಾನು ಮುಖ್ಯಮಂತ್ರಿಯಾದೆ ನೀನು ಬಿಜೆಪಿ ಸೇರಿ ಅಸೆಂಬ್ಲಿ ಚುನಾವಣೆಯಲ್ಲಿ ಸೋತೆ ಎಂದು ಸಿದ್ದರಾಮಯ್ಯ ತನ್ನದೇ ಸ್ಟೈಲಿನಲ್ಲಿ ಸೋಮಣ್ಣ ಅವರನ್ನು ಕಿಚಾಯಿಸಿದ್ದಾರೆ.
ರಸ್ತೆ ಅಗಲೀಕರಣದ ಬಗ್ಗೆ ಸೋಮಣ್ಣ ಪ್ರಶ್ನೆ
ಬೆಂಗಳೂರು ನಗರದಲ್ಲಿ ರಸ್ತೆ ಅಗಲೀಕರಣದ ಸಂಬಂಧ ಕಡಿದು ಹಾಕಲಾಗಿರುವ ಮರಗಳ ವಿಲೇವಾರಿ ಮಾಡದಿರುವ ಬಗ್ಗೆ ಸೋಮಣ್ಣ ವಿಧಾನ ಪರಿಷತ್ತಿನಲ್ಲಿ ಆಕ್ರೋಶ ವ್ಯಕ್ತ ಪಡಿಸಿ ಮಾತನಾಡುತ್ತಿದ್ದರು.
ಮಧ್ಯಪ್ರವೇಶಿಸಿ ಮಾತನಾಡಿದ ಸಿದ್ದು
ಆಗ ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಸೋಮಣ್ಣ ಪಾಲಿಕೆ ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದವರು. ನನಗಿಂತ ಈ ವಿಚಾರದಲ್ಲಿ ಅವರಿಗೆ ಉತ್ತಮ ಅನುಭವವಿದೆ. ಅವರ ಅನುಭವದ ಲಾಭವನ್ನು ನಾವು ಪಡೆದುಕೊಳ್ಳಬೇಕೆಂದು ಸಿದ್ದರಾಮಯ್ಯ ಹೇಳಿದರು.
ಹಳೆಯ ನೆನಪುಗಳನ್ನು ಕೆದಕಿದ ಸೋಮಣ್ಣ ಮತ್ತು ಸಿಎಂ
ಸಿದ್ದರಾಮಯ್ಯನವರ ಈ ಹೇಳಿಕೆಯಿಂದ ಸೋಮಣ್ಣ ತನ್ನ ಹಳೆಯ ನೆನಪುಗಳ ಬಗ್ಗೆ ಮಾತನಾಡಲಾರಂಭಿಸಿದರು. ಆಗ ಮತ್ತೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದೆ. ಈಗ ನೋಡು ನಾನು ಮುಖ್ಯಮಂತ್ರಿಯಾದೆ. ನೀವು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ರಿ, ಬಿಜೆಪಿಯಲ್ಲಿ ಅಸೆಂಬ್ಲಿ ಸೀಟೂ ಗೆಲ್ಲಲಿಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಎಲ್ಲಾ ಕಾಣದ ಕೈಗಳ ಕೈವಾಡ
ನಾನು ಸೋಲು ಅನುಭವಿಸಿರಬಹುದು. ರಾಜಕೀಯದಲ್ಲಿ ಸೋಲು, ಗೆಲುವು ಸಾಮಾನ್ಯ ಎನ್ನುವುದು ನಿಮಗೂ ತಿಳಿದಿದೆ. ನಾನು ಅಸೆಂಬ್ಲಿಯಲ್ಲಿ ಸೋಲಲು ಕಾಣದ ಕೈಗಳ ಕೈವಾಡವೇ ಕಾರಣ ಎಂದು ಸೋಮಣ್ಣ ಪ್ರತಿಕ್ರಿಯಿಸಿದರು.
ಸಭಾಪತಿ ಜೊತೆ ಸೋಮಣ್ಣ ಜಟಾಪಟಿ
ಸೋಮಣ್ಣ ಪ್ರಶ್ನೆ ಕೇಳಲು ಆರಂಭಿಸುತ್ತಿದ್ದಂತೆಯೇ, ಉದ್ದ ಪ್ರಶ್ನೆ ಕೇಳಬೇಡಿ. ಸಮಯದ ಅವಕಾಶವಿಲ್ಲ ಎಂದು ಸಭಾಪತಿ ಡಿ ಎಚ್ ಶಂಕರಮೂರ್ತಿ ಹೇಳಿದರು. ಇದರಿಂದ ಸಿಟ್ಟಿಗೆದ್ದ ಸೋಮಣ್ಣ, ಉಗ್ರಪ್ಪನವರು ಇಷ್ಟುದ್ದ ಪ್ರಶ್ನೆ ಕೇಳುತ್ತಾರೆ. ಅವರಿಗೆ ಈ ಮಾತನ್ನು ಯಾಕೆ ಹೇಳಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಯಾಕೆ ಎಂದು ಸೋಮಣ್ಣ ಸಭಾಪತಿಗಳನ್ನು ಪ್ರಶ್ನಿಸಿದರು.