ಶೃಂಗೇರಿ : ಎಎನ್ಎಫ್ ಗುಂಡಿಗೆ ಆಟೋ ಚಾಲಕ ಬಲಿ
ಚಿಕ್ಕಮಗಳೂರು, ಏ. 19 : ಶೃಂಗೇರಿಯಲ್ಲಿ ಶನಿವಾರ ಮುಂಜಾನೆ ಎಎನ್ಎಫ್ ಯೋಧರು ಹಾರಿಸಿದ ಗುಂಡಿಗೆ ಆಟೋ ಡ್ರೈವರ್ ಬಲಿಯಾಗಿದ್ದಾನೆ. ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ಮೂಲದ ಕಬೀರ್ ಎಂದು ಗುರುತಿಸಲಾಗಿದೆ. ಚೆಕ್ ಪೋಸ್ಟ್ ನಲ್ಲಿ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಶನಿವಾರ ಮುಂಜಾನೆ 4.30ರ ಸುಮಾರಿನಲ್ಲಿ ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಮಾರ್ಗವಾಗಿ ತೆರಳುತ್ತಿದ್ದ ವಾಹನವನ್ನು ಎಎನ್ಎಫ್ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದರು. ನಕ್ಸಲ್ ಪೀಡಿತ ಪ್ರದೇಶವಾದ ಕಾರಣ, ಇಲ್ಲಿ ಪ್ರತಿ ವಾಹನವನ್ನು ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ.
ಮೃತ ಕಬೀರ್ ಹಾಗೂ ಇತರೆ ನಾಲ್ವರು ಸ್ನೇಹಿತರು ಆಟೋದಲ್ಲಿ ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಆಟೋ ಚೆಕ್ ಪೋಸ್ಟ್ ಬಳಿ ಆಗಮಿಸಿದೆ. ಎಎನ್ಎಫ್ ಸಿಬ್ಬಂದಿ ಆಟೋ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ, ಕಬೀರ್ ಸಿಬ್ಬಂದಿ ಸೂಚನೆ ಉಲ್ಲಂಘಿಸಿ ಮುಂದುವರೆದಿದ್ದಾರೆ.
ಆದ್ದರಿಂದ ಆಟೋದಲ್ಲಿ ನಕ್ಸಲರು ಇರಬಹುದೆಂಬ ಶಂಕಿಸಿದ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಇದರಿಂದ ಆಟೋ ಚಾಲಕ ಕಬೀರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡಿನ ದಾಳಿ ಬಳಿಕ ವಾಹನದ ಬಳಿ ತೆರಳಿ ಪರಿಶೀಲನೆ ನಡೆಸಿದಾಗ, ನಕ್ಸಲರು ಇರಲಿಲ್ಲವೆಂದು ತಿಳಿದುಬಂದಿದೆ.
ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಎನ್ಎಫ್ ಹಿರಿಯ ಅಧಿಕಾರಿಗಳು ಆಗಮಿಸಿದ್ದು, ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.