ಮಲೆನಾಡಿಗರ ಬೆಂಬಲ ಕೇಳಿದ ಯಡಿಯೂರಪ್ಪ
ಬೆಂಗಳೂರು, ಏ. 7 : "ಇಲ್ಲಿ ವೋಟ್ ಹಾಕಿ ಅಥವಾ ಅಲ್ಲಿಗೆ ಬಂದು ವೋಟ್ ಹಾಕಿ. ನಿಮ್ಮ ಸಂಬಂಧಿಗಳು, ಸ್ನೇಹಿತರಿಗೂ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಲು ಹೇಳಿ "ಎಂದು ಶಿವಮೊಗ್ಗ ಜಿಲ್ಲೆಯ ಬಿಜೆಪಿ ನಾಯಕರು ಬೆಂಗಳೂರಿನಲ್ಲಿರುವ ಶಿವಮೊಗ್ಗ ಕ್ಷೇತ್ರದ ಮತದಾರರಿಗೆ ಕರೆ ನೀಡಿದ್ದಾರೆ.
ಭಾನುವಾರ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ "ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಿತೈಷಿಗಳು ಮತ್ತು ಅಭಿಮಾನಿಗಳ ವಿಶೇಷ ಸಮಾವೇಶ"ವನ್ನು ಬಿಜೆಪಿ ಆಯೋಜಿಸಿತ್ತು. ಸಮಾವೇಶದಲ್ಲಿ ಭಾಗವಹಿಸಿದ್ದ ನಾಯಕರು ಶಿವಮೊಗ್ಗದ ಜನರು ಯಡಿಯೂರಪ್ಪ ಅವರಿಗೆ ಮತನೀಡಿ, ಬೆಂಗಳೂರಿನಲ್ಲಿ ವೋಟ್ ಇರುವವರು ಅನಂತ್ ಕುಮಾರ್, ಸದಾನಂದ ಗೌಡ, ಪಿಸಿ ಮೋಹನ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ, ನಾಯಕರಾದ ಡಿವಿ ಸದಾನಂದ ಗೌಡ, ಅನಂತ್ ಕುಮಾರ್, ಆರಗ ಜ್ಞಾನೇಂದ್ರ, ಆಯನೂರು ಮಂಜುನಾಥ್, ಕೆಎಸ್ ಈಶ್ವರಪ್ಪ, ಹರತಾಳು ಹಾಲಪ್ಪ ಮುಂತಾದವರು ಸಮಾವೇಶದಲ್ಲಿ ಭಾಗವಹಿಸಿದ್ದರು. ಚಿತ್ರಗಳಲ್ಲಿ ನೋಡಿ ಯಡಿಯೂರಪ್ಪ ಸಮಾವೇಶ
ಯಡಿಯೂರಪ್ಪ ಹೇಳಿದ್ದೇನು?
ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಬೆಂಗಳೂರಿನಲ್ಲಿರುವ ಶಿವಮೊಗ್ಗದ ಮತದಾರರನ್ನು ಭೇಟಿ ಮಾಡುವ ಅವಕಾಶ ಇದಾಗಿದೆ. ಇಲ್ಲಿರುವವರು ಶಿವಮೊಗ್ಗದಲ್ಲಿರುವವರಿಗೆ ದೂರವಾಣಿ ಮೂಲಕ ಅಥವಾ ವೈಯಕ್ತಿಕವಾಗಿ ಭೇಟಿ ಮಾಡಿ ಮತದಾನ ಮಾಡುವಂತೆ ತಿಳಿಸಿ ಎಂದು ಮನವಿ ಮಾಡಿದರು.
ಇದೊಂದು ವಿಶಿಷ್ಟ ಪ್ರಯೋಗ
ಸಮಾವೇಶದಲ್ಲಿ ಮಾತನಾಡಿದ ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ಆರಗ ಜ್ಞಾನೇಂದ್ರ, ಈ ರೀತಿಯ ಸಮಾವೇಶ ನಡೆಸುವುದು ಒಂದು ವಿಶಿಷ್ಟ ಪ್ರಯೋಗ. ಈ ರೀತಿಯ ಪ್ರಯೋಗವನ್ನು ತಾವು ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಮಾಡಿದ್ದೇನೆ. ಬೆಂಗಳೂರಿನಲ್ಲಿ ನೆಲೆಸಿರುವ ತೀರ್ಥಹಳ್ಳಿಯವರನ್ನು ಒಟ್ಟಿಗೆ ಸೇರಿಸಿ ಸಭೆ ಮಾಡಲಾಗಿತ್ತು. ಇಂತಹ ಸಮಾವೇಶ ಉತ್ತಮ ಫಲಿತಾಂಶವನ್ನು ನೀಡಿತ್ತು ಎಂದು ಅವರು ಹೇಳಿದರು.
ಯಡಿಯೂರಪ್ಪ ಜೊತೆ ನಮಗೂ ಮತ ನೀಡಿ
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಮಾತನಾಡಿ, ಉತ್ತಮ ಭಾರತಕ್ಕಾಗಿ ಬಿಜೆಪಿಗೆ ಮತನೀಡಿ, ನಿಮಗೆ ಶಿವಮೊಗ್ಗದಲ್ಲಿ ಮತವಿದ್ದರೆ ಯಡಿಯೂರಪ್ಪ ಅವರಿಗೆ ನೀಡಿ, ಬೆಂಗಳೂರಿನಲ್ಲಿದ್ದರೆ ಅನಂತ್ ಕುಮಾರ್, ಡಿವಿ ಸದಾನಂದ ಗೌಡ, ಪಿಸಿ ಮೋಹನ್ ಅವರಿಗೆ ನೀಡಿ ಎಲ್ಲರನ್ನೂ ಒಟ್ಟಿಗೆ ಸಂಸತ್ ಗೆ ಕಳುಹಿಸಿ ಎಂದು ಕರೆ ನೀಡಿದರು.
ಗತವೈಭವ ಮರಳಿ ಪಡೆಯಬೇಕು
ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಕಳೆದುಕೊಂಡಿರುವ ಗತವೈಭವವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಆದ್ದರಿಂದ ಜನರು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಸಮಾವೇಶದಲ್ಲಿ ಭಾಗವಹಿಸಿದವರು
ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ಬಿ. ಚಂದ್ರೇಗೌಡ, ನಟಿ ಶ್ರುತಿ, ನಾಯಕರಾದ ಕೆ.ಎಸ್. ಈಶ್ವರಪ್ಪ, ರಾಜ್ಯಸಭಾ ಸದಸ್ಯ ಅಯನೂರು ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಮುಂತಾದವರು ಸಮಾವೇಶದಲ್ಲಿ ಉಪಸ್ಥಿತರಿದ್ದರು.