ಬಿಜೆಪಿ ಪ್ರಣಾಳಿಕೆಯಲ್ಲಿ ಮತ್ತೆ ರಾಮಮಂದಿರ? ಜೈಶ್ರೀರಾಮ್
ಬೆಂಗಳೂರು, ಮಾ 8: ಅಡ್ವಾಣಿಯರ ರಥಯಾತ್ರೆ, ಅಯೋಧ್ಯೆಯಲ್ಲಿ ರಾಮಮಂದಿರ ಎನ್ನುವ ವಿಷಯಗಳ ಮೂಲಕ ಎರಡರಿಂದ ಎಂಬತ್ತು ಸೀಟಿನ ವರೆಗೆ ಬಂದಿದ್ದ ಬಿಜೆಪಿ, 2014ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮತ್ತೆ ಶ್ರೀರಾಮ ಮಂದಿರ ನಿರ್ಮಾಣದ ವಿಷಯವನ್ನು ಸೇರಿಸುವ ಸಾಧ್ಯತೆಯಿದೆ. RSS ಕೂಡಾ ಈ ಬಗ್ಗೆ ಸುಳಿವು ನೀಡಿದೆ.
ನಗರದಲ್ಲಿ ಶುಕ್ರವಾರ (ಮಾ 7) ದಿಂದ ಆರಂಭವಾಗಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ RSS ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಾಧ್ಯಮದವರಿಗೆ ಈ ವಿಷಯವನ್ನು ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷಕ್ಕೆ ಅಗತ್ಯ ಬಿದ್ದಾಗ ಸಲಹೆಗಳನ್ನು ನೀಡುತ್ತಲೇ ಬಂದಿದ್ದೇವೆ. ಬಿಜೆಪಿ ಕೂಡಾ ತನ್ನ ಕೆಲವು ಪ್ರತಿನಿಧಿಗಳನ್ನು ನಮ್ಮ ಸಭೆಗೆ ಕಳುಹಿಸಿ ಕೊಟ್ಟಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಸೇರಿಸುವ ಸಾಧ್ಯತೆಯಿದೆ. ಆದರೆ ಈಗ ನಡೆಯುತ್ತಿರುವ ಸಂಘಟನೆಯ ಸಭೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಹೊಸಬಾಳೆ ತಿಳಿಸಿದ್ದಾರೆ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು RSS ಸಂಘಟನೆಯ ಸ್ವಯಂ ಸೇವಕರು. ಅವರ ಬಗ್ಗೆ ನಮಗೆ ಹೆಮ್ಮೆಯಿದೆ. ಬಿಜೆಪಿಯ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಮ್ಮ ಸಂಘಟನೆ ಮೂಗು ತೂರಿಸುವುದಿಲ್ಲ ಎಂದು ಹೊಸಬಾಳೆ ಸ್ಪಷ್ಟ ಪಡಿಸಿದ್ದಾರೆ.
ದೇಶದ ಆತ್ಮಗೌರವಕ್ಕೆ ಧಕ್ಕೆಯಾದರೂ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಓಲೈಕೆಯನ್ನು ನಿಲ್ಲಿಸುವುದಿಲ್ಲ. ಪ್ರಸಕ್ತ ರಾಜಕೀಯ ಸ್ಥಿತಿಯನ್ನು ಆಧರಿಸಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೊಸಬಾಳೆ ಹೇಳಿದ್ದಾರೆ.
ನಗರದ ಥಣಿಸಂದ್ರದಲ್ಲಿ ನಡೆಯುತ್ತಿರುವ RSS ಮೂರು ದಿನಗಳ ಸಮಾವೇಶವನ್ನು ಸರಸಂಚಾಲಕ ಮೋಹನ್ ಭಾಗವತ್ ಉದ್ಘಾಟಿಸಿದರು. (RSS ಸಭೆ ಉದ್ಘಾಟಿಸಿದ ಮೋಹನ್ ಭಾಗವತ್)
ರಾಹುಲ್ ಗಾಂಧಿ ವಿರುದ್ದ ಮೊಕದ್ದಮೆ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕೊಂದಿದ್ದು RSS ನವರು ಎನ್ನುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ವಿರುದ್ದ ಕಿಡಿಕಾರಿರುವ RSS, ರಾಹುಲ್ ಗಾಂಧಿಯವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದೆ.
ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಮೇಲಿನ ಹೇಳಿಕೆ ನೀಡಿದ್ದರು. ರಾಹುಲ್ ಅವರ ಈ ಬೇಜವಾಬ್ದಾರಿ ಹೇಳಿಕೆ ವಿರುದ್ದ RSS ಈಗ ಕಾನೂನು ಕ್ರಮ ತೆಗೆದು ಕೊಳ್ಳಲು ಮುಂದಾಗಿದೆ.
[ಚಿತ್ರ ಕೃಪೆ: ಸಂವಾದ.ಆರ್ಗ್]