ರೇಣುಕಾಚಾರ್ಯಗೆ ಚಳಿ ಬಿಡಿಸಿದ ಈಶ್ವರಪ್ಪ!
ಯಡಿಯೂರಪ್ಪ ಅವರನ್ನ ಪಕ್ಷಕ್ಕೆ ಮರಳಿ ಕರೆತರಲು ಬಿಜೆಪಿ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಕೆಜೆಪಿ ನಾಯಕ ಮತ್ತು ಯಡಿಯೂರಪ್ಪ ಅವರ ಪರಮಾಪ್ತ ಎಂ.ಪಿ.ರೇಣುಕಾಚಾರ್ಯ ಇದಕ್ಕೆ ಹಿನ್ನಡೆ ಉಂಟುಮಾಡು ಹೇಳಿಕೆ ನೀಡಿದ್ದರು. ಆದ್ದರಿಂದ ಯಡಿಯೂರಪ್ಪ ವಾಪಸಾತಿಗೆ ಮುಂಚೂಣಿಯಲ್ಲಿ ನಿಂತು ಕಸರತ್ತು ನಡೆಸುತ್ತಿರುವ ಈಶ್ವರಪ್ಪ, ಯಡಿಯೂರಪ್ಪ ಕುರಿತು ಹೇಳಿಕೆ ನೀಡದಂತೆ ರೇಣುಕಾಚಾರ್ಯ ಅವರಿಗೆ ತಾಕೀತು ಮಾಡಿದ್ದಾರೆ.
ಬಿಜೆಪಿ ಶಾಸಕರು ಮತ್ತು ಕೆಜೆಪಿಯ ನಾಯಕರಿಗೂ ಯಡಿಯೂರಪ್ಪ ವಿಚಾರದಲ್ಲಿ ಸ್ಪಷ್ಟ ಸಂದೇಶ ಹೊರಬೀಳುವ ತನಕ ಯಾವುದೇ ಹೇಳಿಕೆ ನೀಡಬಾರರು ಎಂದು ಬಿಜೆಪಿ ಸಂದೇಶ ರವಾನಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರತಿನಾಯಕರು ಪರ ಮತ್ತು ವಿರೋಧ ಹೇಳಿಕೆ ನೀಡುತ್ತಾ ಕಾಲಹರಣ ಮಾಡಿದರೆ, ವಾಪಾಸತಿ ಪ್ರಕ್ರಿಯೆ ಮತ್ತಷ್ಟು ವಿಳಂಬ ವಾಗುತ್ತದೆ ಎಂಬುದು ಬಿಜೆಪಿ ನಾಯಕರ ಆತಂಕಕ್ಕೆ ಕಾರಣ. (ಯಡಿಯೂರಪ್ಪ ಅವರಿಗಾಗಿ ಕಾದು ಕುಳಿತ ಬಿಜೆಪಿ)
ರೇಣುಕಾಚಾರ್ಯ ಮಾಡಿದ್ದೇನು : ಕಳೆದ ವಾರ ನಡೆದ ಕೆಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಸಂದರ್ಭ ರೇಣುಕಾಚಾರ್ಯ ಅವರು ಮಾಧ್ಯಮಗಳ ಎದುರು, ಯಡಿಯೂರಪ್ಪ ವಾಪಸಾದಲ್ಲಿ ಮಾತ್ರ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ರಾಜ್ಯ ಬಿಜೆಪಿಯ ಕಥೆ ಅಷ್ಟೇ ಎಂಬಿತ್ಯಾದಿ ಹೇಳಿಕೆಗಳನ್ನು ನೀಡಿದ್ದರು. ಇದು ಬಿಜೆಪಿ ನಾಯಕರನ್ನು ಕೆರಳಿಸಿದ್ದು, ರೇಣುಕಾಚಾರ್ಯ ಅವರ ವಿರುದ್ಧ ಅವರು ಅಸಮಾಧಾನಗೊಂಡಿದ್ದಾರೆ. (ಯಡಿಯೂರಪ್ಪ ಮತ್ತು ಬಿಜೆಪಿಗೆ ನಡುವೆ ಹಗ್ಗ ಜಗ್ಗಾಟ)
ಬಿಜೆಪಿ ಪಾಳೆಯದಲ್ಲಿ ರೇಣುಕಾಚಾರ್ಯ ಹೇಳಿಕೆ ಬಗ್ಗೆ ಚರ್ಚೆ ನಡೆದಿದ್ದು, ಯಡಿಯೂರಪ್ಪ ವಾಪಸ್ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿರುವ ಕೆ.ಎಸ್.ಈಶ್ವರಪ್ಪ ನೇರವಾಗಿ ರೇಣುಕಾಚಾರ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಆತಂಕವೇನು : ಬಿ.ಎಸ್.ಯಡಿಯೂರಪ್ಪ ಅವರನ್ನು ವಾಪಸ್ ಕರೆತರುವುದಕ್ಕೆ ಬಿಜೆಪಿಯಲ್ಲಿ ಸಂಪೂರ್ಣ ಸಹಮತ ವ್ಯಕ್ತವಾಗಿಲ್ಲ. ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಅನಂತ್ ಕುಮಾರ್ ಅವರ ಇನ್ನೂ ಸಂಪೂರ್ಣ ಒಪ್ಪಿಗೆ ನೀಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅನಿವಾರ್ಯ ಎಂಬ ಹಿನ್ನೆಲೆಯಲ್ಲಿ ಒಪ್ಪಿಗೆ ನೀಡಿದ್ದಾರೆ.
ಪಕ್ಷಕ್ಕೆ ಯಡಿಯೂರಪ್ಪ ವಾಪಸಾದ ನಂತರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದಲ್ಲಿ ಅದರ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಆದ್ದರಿಂದ ಕೆಲವು ಬಿಜೆಪಿ ನಾಯಕರು ಒಲ್ಲದ ಮನಸ್ಸಿನಿಂದಲೇ ಯಡಿಯೂರಪ್ಪ ವಾಪಸ್ ಬರಲಿ ಎನ್ನುತ್ತಿದ್ದಾರೆ. ಇಂತಹ ಸಮಯದಲ್ಲಿ ಪಕ್ಷದ ನಾಯಕರು ಗೊಂದಲ ಮೂಡಿಸುವ ಹೇಳಿಕೆ ನೀಡಿದರೆ, ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುತ್ತದೆ ಎಂಬುದು ಬಿಜೆಪಿ ನಾಯಕರ ಆತಂಕ.