ಆರ್ಟಿಒಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಭೂಪ ಅಂದರ್
ಬೆಂಗಳೂರು, ಆ.27: ನಕಲಿ ಆರ್ಟಿಒ ಸೇರಿದಂತೆ ಕುಖ್ಯಾತ ದ್ವಿಚಕ್ರ ವಾಹನ ಕಳ್ಳರು ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಐದು ಜನ ಆರೋಪಿಗಳನ್ನು ಬಂಧಿಸಿರುವ ಜೆ.ಜೆ.ನಗರ ಪೊಲೀಸರು ಒಂದು ಕೋಟಿ ರೂ. ಮೌಲ್ಯದ 203 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಅಗ್ರಹಾರ ದಾಸರಹಳ್ಳಿ ಯೋಗರಾಜ್(34), ಜೆ.ಜೆ.ಆರ್.ನಗರದ ಮೊಹಮದ್ ಸಾದಿಕ್(21), ಇಮ್ತಿಯಾಜ್(20), ಪಾದರಾಯನಪುರದ ಮುಬಾರಕ್(19), ಸಲ್ಮಾನ್(20) ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಮೊಹಮದ್ ಸಾದಿಕ್, ಸಲ್ಮಾನ್ , ಇಮ್ತಿಯಾಜ್, ಮುಬಾರಕ್ ನಕಲಿ ಕೀ ಬಳಸಿ ಬೆಂಗಳೂರಿನ ವಿವಿಧ ಭಾಗದಲ್ಲಿ ಬೈಕ್ ಅಪಹರಣ ಮಾಡಿ ಯೋಗರಾಜ್ಗೆ ನೀಡುತ್ತಿದ್ದರು. ಯೋಗರಾಜ್ ಅವರಿಗೆ ಹಣ ನೀಡುತ್ತಿದ್ದ. (ಗೂಂಡಾ ಕಾಯ್ದೆಯಡಿ ಇಬ್ಬರು ಪಾತಕಿಗಳ ಬಂಧನ)
ಆರ್ಟಿಒಗೂ ಚಳ್ಳೆ ಹಣ್ಣು ತಿನ್ನಿಸಿದ್ದ ಯೋಗರಾಜ
ಕಳ್ಳತನ ವಸ್ತುವನ್ನು ಅಸಲಿ ಎಂದೇ ನಂಬಿಸಿ ಮಾರುವಲ್ಲಿ ಈ ಯೋಗರಾಜ ನಿಷ್ಣಾತ. ಕಳ್ಳತನ ಮಾಡಿ ತಂದಿದ್ದ ಬೈಕ್ ಪಡೆದುಕೊಳ್ಳುತ್ತಿದ್ದ ಯೋಗರಾಜ್ ಮಂಡ್ಯ, ಹಾಸನ, ಹೊಸಪೇಟೆ, ಚಿಕ್ಕಮಗಳೂರು, ಮಂಡ್ಯ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರಿಜಿಸ್ಟರ್ಆಗಿರುವ ವಾಹನಗಳ ನಂಬರ್ಗಳನ್ನು ಪಡೆದುಕೊಳ್ಳುತ್ತಿದ್ದ.
ಬೆಂಗಳೂರು ಒನ್ನಿಂದ ಬಿ-ಎಕ್ಸ್ಟ್ರ್ಯಾಕ್ಟ್ ಪಡೆದುಕೊಂಡು ಆ ನಂಬರ್ಗೆ ಅನುಗುಣವಾಗಿ ಕಳವು ಗಾಡಿಯ ಎಂಜಿನ್ ನಂಬರ್ ಮತ್ತು ಚೆಸ್ ನಂಬರ್ ಬದಲಾಯಿಸುತ್ತಿದ್ದ. ನಂತರ ನಕಲಿ ಆರ್ಸಿ ಬುಕ್ ತಯಾರು ಮಾಡುತ್ತಿದ್ದ. ನಂತರ ಏಜೆಂಟರ ಮೂಲಕ ಕೋಲಾರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಾರಾಟ ಮಾಡಿಸುತ್ತಿದ್ದ.
ಮತ್ತೊಂದು ವಿಶೇಷ ಎಂದರೆ ಈತ ತಯಾರು ಮಾಡಿರುವ ನಕಲಿ ಆರ್ಸಿ ಪುಸ್ತಕದ ಆಧಾರದಲ್ಲಿಯೇ ಕೆಲವು ಸ್ಮಾರ್ಟ್ ಕಾರ್ಡ್ ಗಳು ಚಾಲ್ತಿಯಲ್ಲಿವೆ ಎಂದರೆ ಯೋಗರಾಜನ ಕೈಚಳಕ ಅರಿವಾಗುತ್ತದೆ.
ಇಲ್ಲಿಯವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಿಗೆ ಸಂಬಂಧಿಸಿ ಒಟ್ಟು 80 ಬೈಕ್ ಕಳ್ಳತನ ಪ್ರಕರಣಗಳು ಆರೋಪಿಗಳ ಮೇಲೆ ದಾಖಲಾಗಿವೆ. ಇನ್ನು ಹೆಚ್ಚಿನ ಪ್ರಕರಣಗಳಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಶ್ಚಿಮ ವಿಭಾಗದ ಡೆಪ್ಯೂಟಿ ಪೊಲೀಸ್ ಕಮೀಷನರ್ ಲಾಬೂರಾಮ್, ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಸತ್ಯನಾರಾಯಣ ಕುದೂರು, ಜಗಜೀವನ್ರಾಮ್ ನಗರ ಇನ್ಸ್ಪೆಕ್ಟರ್ ಆರ್.ವಸಂತ್ಕುಮಾರ್, ಜೆಜೆ ನಗರ ಅಪರಾಧ ವಿಭಾಗದ ಪಿಎಸ್ಐ ಆಂಜಿನಪ್ಪ, ಸಿಬ್ಬಂದಿ ಗಜೇಂದ್ರ, ಸತೀಶ್, ದೇವರಾಜ್, ಕೃಷ್ಣ, ದಾದಾಫೀರ್, ಬಸ್ಸಪ್ಪ ಡಾಂಗೆ, ಗುಣಶೇಖರ್, ಜಯರಾಮ್, ಆದಪ್ಪ, ಮಲ್ಲು, ವೆಂಕಟೇಶ್, ವೆಂಕಟೇಶಮೂರ್ತಿ, ಪರಮೇಶ್ ನಾಯಕ್ ಭಾಗವಹಿಸಿದ್ದರು.